ಮಂಡ್ಯ: ಮಂಡ್ಯದ ಗಂಡು ಎಂದೇ ಖ್ಯಾತರಾಗಿರುವ ಹಿರಿಯ ನಟ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಮಂಡ್ಯಕ್ಕೆ ತರಲೇಬೇಕು ಎಂಬ ಒತ್ತಡ ಹೆಚ್ಚಾಗಿದೆ.
ಈ ವಿಚಾರದಲ್ಲಿ ಮಂಡ್ಯದಲ್ಲಿ ಭಾರೀ ಪ್ರತಿಭಟನೆ ನಡೆಸಲಾಗುತ್ತಿದ್ದು, ಸಂಜಯ ವೃತ್ತದಲ್ಲಿ ಅಭಿಮಾನಿಗಳು ಮುಷ್ಕರ ನಡೆಸಿ, ಅಂಬರೀಶ್ ಪರ ಘೋಷಣೆ ಕೂಗುತ್ತಿದ್ದಾರೆ.
ಈ ಕುರಿತಂತೆ ಅಳಲು ತೋಡಿಕೊಂಡಿರುವ ಅಭಿಮಾನಿಗಳು, ಅಂಬರೀಶಣ್ಣ ಮಂಡ್ಯದಲ್ಲೇ ಹುಟ್ಟಿ ಬೆಳೆದಿದ್ದರು. ಹಾಗಾಗಿ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲೇಬೇಕು. ಒಂದು ಗಂಟೆಯಾದರೂ ನಮ್ಮ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಿ. ಬೇಕಿದ್ದರೆ ಅಂಬರೀಷ್ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನಲ್ಲೇ ಮಾಡಿ. ನಮ್ಮದೇನೂ ಅಭ್ಯಂತರ ಇಲ್ಲ. ನಮ್ಮ ನೋವನ್ನೂ ಅರ್ಥಮಾಡಿಕೊಳ್ಳಿ ಎಂದು ವಿನಂತಿಸಿದ್ದಾರೆ.
ಇನ್ನು, ಅಂಬಿ ನಿಧನದ ಹಿನ್ನೆಲೆಯಲ್ಲಿ ಇಡಿಯ ಮಂಡ್ಯ ಜಿಲ್ಲೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಜಿಲ್ಲಾ ಕೇಂದ್ರದಲ್ಲಿ ವ್ಯಾಪಾರಸ್ತರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದು, ನಗರದಲ್ಲಿ ನೀರವ ಮೌನ ಆವರಿಸಿದೆ.
ಮಂಡ್ಯದಲ್ಲಿ ವಾತಾವರಣ ಬಿಗುಗೊಂಡಿರುವ ಹಿನ್ನೆಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಮಧ್ಯ ಮಾರಾಟವನ್ನೂ ಸಹ ನಿಷೇಧಿಸಿ ಜಿಲ್ಲಾಧಿಕಾರಿ ಮಂಜುಶ್ರೀ ಆದೇಶಸಿದ್ದಾರೆ.
Discussion about this post