ಕೋಲಾರ: ಜಿಲ್ಲೆಯಲ್ಲಿ ಆಗುತ್ತಿರುವ ಅಪಘಾತ ಪ್ರಕರಣಗಳನ್ನು ತಡೆಗಟ್ಟಲು ಜೂನ್ 1 ರಿಂದ ಕೋಲಾರ ಜಿಲ್ಲೆಯ ನಗರ ಪ್ರದೇಶ ಹಾಗೂ ಗ್ರಾಮಾಂತರ ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಪ್ತಾಹ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹರಿಯಾಣ ರಾಜ್ಯದ ಮಾದರಿಯಲ್ಲಿ ಎನ್’ಹೆಚ್ 75 ನಲ್ಲಿ ಪ್ರತಿ 10 ಕಿಮೀಗೆ ಬೂತ್ನ್ನು ಅಳವಡಿಸಲಾಗುವುದು. ಇದರಿಂದ ಆ ವ್ಯಾಪ್ತಿಯಲ್ಲಿ ಯಾವುದೇ ಅಪಘಾತ ಪ್ರಕರಣಗಳು ಕಂಡು ಬಂದರೂ ತಕ್ಷಣ ಸಹಾಯ ಮಾಡಲು ಸಾಧ್ಯವಾಗುತ್ತದೆ. ಯಾವುದೇ ಅಪಘಾತ ಸಂದರ್ಭದಲ್ಲಿ ಸಾರ್ವಜನಿಕರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದವರಿಗೆ ಯಾವುದೇ ರೀತಿಯ ತೊಂದರೆ ನೀಡುವಂತಿಲ್ಲ. ಇದರ ಬಗ್ಗೆ ಆಸ್ಪತ್ರೆಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ ಪವನ್ ಕಾಲೇಜು, ಟಮಕ ಹಾಗೂ ಜಿಲ್ಲಾಧಿಕಾರಿಗಳ ಕಛೇರಿಯ ಬಳಿ ಪಾದಚಾರಿ ಬ್ರಿಡ್ಜ್ ಹಾಗೂ ಸರ್ವಿಸ್ ರಸ್ತೆ ನಿರ್ಮಿಸಲು ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಿದರು. ಇನ್ನೂ ಮೂರು-ನಾಲ್ಕು ವಾರಗಳಲ್ಲಿ ಸರ್ವಿಸ್ ರಸ್ತೆ ನಿರ್ಮಿಸುವುದಾಗಿ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ತಿಳಿಸಿದರು.
ಚುನಾವಣೆ ಹಿನ್ನೆಲೆ ಚೆಕ್ ಪೋಸ್ಟ್ ಭೇಟಿ:
ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿದ್ದು ಈ ಸಂಬಂಧ ಜಿಲ್ಲೆಯಲ್ಲಿ 18 ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದೆ.
ರಾತ್ರಿ ನಂಗಲಿ ಸೇರಿದಂತೆ ಕೆಲವು ಚೆಕ್ಪೋಸ್ಟ್ಗಳಿಗೆ ಬೇಟಿ ನೀಡಿ ಅಲ್ಲಿ ಅಗತ್ಯ ಸೌಲಭ್ಯಗಳು ಇವೆಯೇ, ಸಿಬ್ಬಂದಿಗೆ ಸುರಕ್ಷತೆಗಳನ್ನು ಅಳವಡಿಸಲಾಗಿದಿಯೇ, ಎಂಬುದನ್ನು ಪರಿಶೀಲಿಸಿದ್ದೇನೆ. ಆವನಿ ಜಾತ್ರೆಯಲ್ಲಿ ಆರ್ಕೆಸ್ಟ್ರಾ ಇತ್ತು. ಅದನ್ನು ರಾಜಕೀಯವಾಗಿ ಬಳಸಿಕೊಳ್ಳದಂತೆ ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು ಹಾಗೂ ಪೊಲೀಸ್ ಬಂದೋಬಸ್ತ್ ಅಳವಡಿಸಲಾಗಿತ್ತು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ರೋಹಿಣಿ ಕಟೋಚ್ ಸಫೆಟ್ರವರು ಮಾತನಾಡಿ, ರಸ್ತೆ ನಿಯಮಗಳನ್ನು ಉಲ್ಲಂಘಿಸಿ ಚಾಲನೆ ಮಾಡುವವರನ್ನು ಪತ್ತೆ ಹಚ್ಚಲು ಹಲವು ಕಡೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ವೃತ್ತಗಳು ಮತ್ತು ಜಂಕ್ಷನ್ಗಳಲ್ಲಿ, ಸ್ಪೀಡ್ ಬ್ರೇಕರ್ಸ್, ಪೇಯಿಂಟಿಂಗ್ ಹಾಗೂ ಬ್ಲಿಂಕರ್ಗಳನ್ನು ಅವಳವಡಿಸುವಂತೆ ತಿಳಿಸಿದರು.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ನೇಪಾನ್, ಕೆಎಸ್’ಆರ್ಟಿಸಿ ವಿಭಾಗೀಯ ನಿಯಂತ್ರಣಾದಿಕಾರಿಗಳಾದ ಹಿಮವರ್ಧನ್ ನಾಯ್ಡು, ಅಲ್ಲೂರಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Discussion about this post