ಶಿವಮೊಗ್ಗ: ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುವ ಈ ಕಾಲದಲ್ಲಿ ಪ್ರಾಣಿಗಳಿಂದ ಹರಡುವ ಸಾಂಕ್ರಾಮಿಕ ರೋಗಗಳು ಅತ್ಯಂತ ಅಪಾಯಕಾರಿಯಾಗಿದ್ದು, ಈ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಸಲಹೆ ನೀಡಿದರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಝೋನೋಟಿಕ್ ರೋಗ, ಅದರ ಪರಿಣಾಮ ಹಾಗೂ ನಿಯಂತ್ರಣದ ಪ್ರಾಮುಖ್ಯತೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ವಿಶೇಷ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಝೊನೋಟಿಕ್ ಎಂದರೇನು?
ಝೊನೋಟಿಕ್ ಎಂದರೆ ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಹಕ್ಕಿ ಜ್ಚರ, ಡೆಂಗ್ಯೂ, ಎಚ್1 ಎನ್1, ರೇಬಿಸ್ ಇವುಗಳು ಝೊನಾಸಿಸ್ ಕಾಯಿಲೆಗಳಾಗಿವೆ. ಒಮ್ಮೆ ಒಬ್ಬ ಮನುಷ್ಯನಿಗೆ ಈ ರೋಗ ಬಂದರೆ ಅದು ಮನುಷ್ಯರಿಂದ ಮನುಷ್ಯರಿಗೆ ಗಾಳಿಯ ಮೂಲಕ ಹಾಗೂ ಇನ್ನಿತರೆ ಮಾರ್ಗಗಳ ಮೂಲಕ ಹರಡುತ್ತಾ ಹೋಗುತ್ತದೆ. ಮನೆಯಲ್ಲಿ ಸಾಕುವ ಸಾಕು ಪ್ರಾಣಿಗಳಾದ ಬೆಕ್ಕು, ನಾಯಿ, ಹಸು ಇವುಗಳ ಮೂಲಕವೂ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ ಎಂದರು.
ರೋಗದ ಲಕ್ಷಣಗಳಿವು:
ಬಿಟ್ಟು ಬಿಟ್ಟು ಚಳಿ ಜ್ಚರ, ಆಯಾಸ, ದೇಹ ನಿಶ್ಯಕ್ತಿಗೊಳ್ಳುವುದು, ಕೀಲು ನೋವು, ಗಂಟಲು ಉರಿ ಊತ, ವಾಂತಿ, ಬೇದಿ ಮೊದಲಾದವು ಇದರ ಪ್ರಮುಖ ಲಕ್ಷಣಗಳಾಗಿದೆ.
ಝೊನೋಟಿಕ್ ರೋಗಗಳು ಇಂದು ಮನುಷ್ಯನನ್ನು ಇನ್ನಿಲ್ಲದ ರೀತಿಯಲ್ಲಿ ಕಾಡುತ್ತಿದೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು ಪ್ರತಿವರ್ಷ ಲಕ್ಷಾಂತರ ಮಂದಿ ಈ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ ಎಂದರು.
ಮುನ್ನೆಚ್ಚರಿಕೆ ಕ್ರಮಗಳಿವು:
ಝೊನೋಟಿಕ್ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ನಮ್ಮ ಕೈಕಾಲುಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಉತ್ತಮ. ಹಳದಿ ಬಣ್ಣದ ಮೂತ್ರ ಹೋಗುವುದು ಕಂಡು ಬಂದಲ್ಲಿ ತತಕ್ಷಣ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆದಷ್ಟು ಶುದ್ದ ನೀರನ್ನು ಕುಡಿಯುವುದು ಉತ್ತಮ ಎಂದು ಸಲಹೆ ನೀಡಿದರು.
ಇಂದು ಝೊನೋಟಿಕ್ ಕಾಯಿಲೆಗಳಲ್ಲೇ ಒಂದಾದ ಕೆಎಫ್ಡಿ ಕಾಯಿಲೆಯೂ ತನ್ನ ಕರಾಳತೆಯನ್ನು ತೋರಿಸುತ್ತಿದೆ. ಕೆಲವು ವರ್ಷಗಳ ಹಿಂದೆ ಬಹಳ ಕಡಿಮೆ ಪ್ರಮಾಣದಲ್ಲಿ ಇದ್ದ ಕೆಎಫ್ಡಿ ಕಾಯಿಲೆಯು ಇಂದು ಮಾರಕವಾಗಿ ಪರಿಣಮಿಸಿದ್ದು ಸಾರ್ವಜನಿಕ ವಲಯದಲ್ಲಿ ಭಯವನ್ನುಂಟುಮಾಡುತ್ತಿದೆ. ಆದರೆ ಇದರ ಬಗ್ಗೆ ಆತಂಕ ಬೇಡ. ಸೂಕ್ತ ರೋಗಬಾರದಂತೆ ಆರೋಗ್ಯ ಇಲಾಖೆ ನೀಡುವ ಸಲಹೆಗಳನ್ನು ಪಾಲಿಸಿದರೆ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂದರು.
ಕೆಎಫ್’ಡಿ ಮಂಗನ ಕಾಯಿಲೆಯಲ್ಲ!
ಕೆಎಫ್ಡಿ ಎಂದರೆ ಮಂಗನಿಂದ ಬರುವ ಕಾಯಿಲೆ ಎಂದು ಕೆಲವರು ತಪ್ಪಾಗಿ ತಿಳಿದಿದ್ದು ಈ ಕಾಯಿಲೆಯು ಕಾಡಿನಲ್ಲಿರುವ ಉಣ್ಣೆಯಿಂದ ಬರುತ್ತದೆ. ಹಾಗಾಗಿ ಇದನ್ನು ಕ್ಯಾಸನೂರು ಫಾರೆಸ್ಟ್ ಡಿಸೀಸ್ ಎನ್ನುತ್ತಾರೆ.
1957ರಲ್ಲಿ ಶಿವಮೊಗ್ಗದ ಸೊರಬ ತಾಲೂಕಿನ ಕ್ಯಾಸನೂರು ಎಂಬ ಗ್ರಾಮದಲ್ಲಿ ಮೊದಲಿಗೆ ಈ ಕಾಯಿಲೆ ಕಂಡು ಬಂದಿತು. ಕಾಡಿನಲ್ಲಿ ಮಂಗಗಳು ಮೃತಪಟ್ಟಾಗ ಅದರ ಮೇಲಿರುವ ಉಣ್ಣೆಗಳು ಮನುಷ್ಯನನ್ನು ಕಚ್ಚಿದಾಗ ಈ ರೋಗ ಹರಡುತ್ತದೆ. ಆದುದರಿಂದ ಈ ಕಾಯಿಲೆಗೆ ಮಂಗನ ಕಾಯಿಲೆ ಎನ್ನುತ್ತಾರೆ ಹೊರತು ಇದು ಮಂಗನಿಂದ ಬರುವ ರೋಗವಲ್ಲ. ಮಂಗಗಳು ಸಾಯುವುದು ಈ ರೋಗ ಹರಡುವಿಕೆಯ ಮುನ್ಸೂಚನೆಯಾಗಿರುತ್ತದೆ ಎಂದರು.
ಪ್ರಪಂಚದಲ್ಲೇ ಕೇವಲ ಶಿವಮೊಗ್ಗದ ಕ್ಯಾಸನೋರಿನಲ್ಲಿ ಈ ಕಾಯಿಲೆ ಕಂಡುಬಂದಿರುವುದರಿಂದ ಇದನ್ನು ಕ್ಯಾಸನೂರು ಫಾರೆಸ್ಟ್ ಡಿಸೀಸ್ ಎನ್ನುತ್ತಾರೆ. ಕ್ರಮೇಣ ಈ ಕಾಯಿಲೆ ಶಿಕಾರಿಪುರ, ಹೊಸನಗರ, ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನ ಹಲವು ಕಡೆ ಕಂಡುಬಂದಿತು ಎಂದರು.
ಕೆಎಫ್’ಡಿ ವಿಚಾರದ ಮುನ್ನೆಚ್ಚರಿಕೆಗಳಿವು:
ನವೆಂಬರ್ ತಿಂಗಳಲಿನಲ್ಲಿ ಕೆಎಫ್ಡಿ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಆ ಸಮಯದಲ್ಲಿ ಕಾಡಿಗೆ ಹೋಗುವಾಗ ಮೈತುಂಬ ಬಟ್ಟೆ ಧರಿಸಿ ಹೋಗುವುದು ಉತ್ತಮ. ಕಾಡಿನಲ್ಲಿ ಚಾರಣ ಮಾಡುವವರು ಹಾಗೂ ಪ್ರವಾಸಿಗರು ಎಚ್ಚರದಿಂದ ಇರುವುದು ಅವಶ್ಯಕ ಎಂದರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ.ಎಸ್. ನಾಗೇಂದ್ರ ಮಾತನಾಡಿ, ಕೆಲವು ವರ್ಷಗಳ ಹಿಂದೆ ನಮಗೆ ಪ್ರಾಣಿಗಳಿಂದ ಹರಡುವ ರೋಗಗಳ ಪ್ರಮಾಣ ಬಹಳ ಕಡಿಮೆ ಇತ್ತು. ಆದರೆ ಇಂದು ಕೆಎಫ್ಡಿ, ಚಿಕೂನ್ಗುನ್ಯದಂತಹ ಝೋನೋಟಿಕ್ ಕಾಯಿಲೆಗಳು ಉಲ್ಬಣಿಸಿ ಮನುಷ್ಯನಿಗೆ ಭಾದೆ ನೀಡುತ್ತಿದೆ. ಇಂತಹ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳಿಗೆ ಈ ಕಾಯಿಲೆಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಅವಶ್ಯಕತೆಯಿದೆ ಎಂದರು.
ಕಾರ್ಯಾಗಾರದಲ್ಲಿ ತೀರ್ಥಹಳ್ಳಿ ಟಿಎಚ್ಓ ಡಾ.ಕಿರಣ್ ಕೆಎಫ್ಡಿ ನಿಯಂತ್ರಣದ ಬಗ್ಗೆ ಮಾತನಾಡಿದರು. ಡಾ.ಬಿ. ಶ್ರೀನಿವಾಸ್ ಕೆಎಫ್ಡಿ ಚಿಕಿತ್ಸೆ ಕುರಿತು, ಡಾ.ಶ್ರೀಕಾಂತ್ ಹೆಗಡೆ ಡೆಂಗ್ಯೂ ಮತ್ತು ಚಿಕೂನ್ಗುನ್ಯ ಬಗ್ಗೆ ಹಾಗೂ ಡಾ.ಸಂತೋಷ್ ಸಜ್ಜನ್ ಝೋನೋಟಿಕ್ ರೋಗಗಳ ನಿಯಂತ್ರಣದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾದ ಡಾ.ಲತಾ ನಾಗೇಂದ್ರ, ಡಾ.ವಿನಯಾ ಶ್ರೀನಿವಾಸ್, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಎಂ.ಕಟ್ಟಿ, ವೈದ್ಯಕೀಯ ಅಧೀಕ್ಷಕರಾದ ಡಾ. ಬಿ. ಶ್ರೀನಿವಾಸ್, ಶೈಕ್ಷಣಿಕ ನಿರ್ದೇಶಕರಾದ ಡಾ.ಆರ್.ಪಿ. ಪೈ, ಐಎಂಎ ಅಧ್ಯಕ್ಷ ಡಾ. ಪಿ.ಕೆ.ಪೈ, ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಬಿ.ಎಸ್. ಸುರೇಶ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ವನಮಾಲಾ ಸತೀಶ್ ಇನ್ನಿತರರು ಉಪಸ್ಥಿತರಿದ್ದರು.
Discussion about this post