1984
ಮಸೀದಿಯೊಳಗೆ ಆ ಮುಲ್ಲಾ ನನ್ನನ್ನು ಗೌರವದಿಂದ ಕೂರಿಸಿ ಶಾಲು ಹೊದಿಸಿ ಸನ್ಮಾನ ಮಾಡಿದರು. ‘ಸಾಬ್ ಇಷ್ಟು ದೊಡ್ಡ ಸಮಸ್ಯೆಯನ್ನು ಎಷ್ಟು ಸಲೀಸಾಗಿ ಬಗೆಹರಿಸಿಬಿಟ್ರಿ. ನಿಮ್ಮಿಂದಾಗಿ ನಾವೆಲ್ಲ ಇನ್ನು ಮುಂದೆ ನೆಮ್ಮದಿಯಿಂದ ಇರಬಹುದು,’ ಎಂದರು. ‘ಅದರಲ್ಲೇನಿದೆ… ನಾನು ನನ್ನ ಕರ್ತವ್ಯ ಮಾಡಿದೆ ಅಷ್ಟೆ. ನಿಮ್ಮಂಥ ಹಿರಿಯರು, ಸಭ್ಯರು, ಶಾಂತಿಪ್ರಿಯರ ಮಾರ್ಗದರ್ಶನ ಇದ್ದರೆ ಖಂಡಿತ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ,’ ಎಂದೆ ನಾನು. ಸ್ವಲ್ಪ ಹೊತ್ತು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ಮುಲ್ಲಾ ಮೆತ್ತಗಿನ ದನಿಯಲ್ಲಿ ‘ಸಾಬ್ ನಿಜವಾಗಲೂ ನಿಮಗೆ ನನ್ನ ಗುರುತು ಸಿಗಲಿಲ್ಲವೇ?,’ ಎಂದು ಪ್ರಶ್ನಿಸಿದರು. ಅವರ ದೇಹ ಸಪೂರವಾಗಿತ್ತು. ಗಡ್ಡ ಎದೆಯವರೆಗೆ ಬೆಳೆದಿತ್ತು. ಕೂದಲುಗಳೆಲ್ಲ ಬೆಳ್ಳಗಾಗಿದ್ದವು.
ಸ್ವಲ್ಪ ಹೊತ್ತು ನಾನು ಯೋಚಿಸಿದೆನಾದರೂ ಆ ವ್ಯಕ್ತಿಯನ್ನು ಈ ಹಿಂದೆ ಎಲ್ಲೂ ನೋಡಿದ ನೆನಪಾಗಲಿಲ್ಲ. ‘ನಹೀಜೀ.. ನಾನೆಂದೂ ನಿಮ್ಮನ್ನು ಭೇಟಿ ಇಲ್ಲವಲ್ಲ,’ ಎಂದೆ. ‘ಕ್ಯಾ ಸಾಬ್… ಇಂದಿಗೆ ಸರಿಯಾಗಿ 26 ವರ್ಷಗಳ ಹಿಂದೆ ನಾನು ನಿಮ್ಮ ಮೇಲೆ ಲಾರಿ ಹತ್ತಿಸಿ ಕೊಲ್ಲಲು ಯತ್ನಿಸಿದೆ. ನೀವು ಸ್ವಲ್ಪದರಲ್ಲೇ ಪಾರಾದಿರಿ. ನನ್ನನ್ನು ಬೆನ್ನಟ್ಟಿ ಹಿಡಿದು ಜೈಲಿಗೆ ಹಾಕಿದ್ರಿ,’ ಎಂದು ಬಿಡಬೇಕೆ ಆ ಮುಲ್ಲಾ?! ನಾನು ಅವರ ಮಾತು ಕೇಳಿ ನಿಬ್ಬೆರಗಾಗಿ ಹೋದೆ. ಅರೆ! ಅಂದು ಕಳ್ಳಬಟ್ಟಿ ಸರಾಯಿ ದಂಧೆ ನಡೆಸುತ್ತಿದ್ದ ಹರಾಮಿ ವ್ಯಕ್ತಿ ಈಗ ಷರೀಫ್ ಆದ್ಮಿಯಾಗಿ ಬದಲಾಗಿ ಮಸೀದಿಯೊಂದರ ಮುಲ್ಲಾ ಆಗಿದ್ದು ಎಂದು ಅಚ್ಚರಿಗೊಂಡೆ…
ನಾನಾಗ ಬೆಂಗಳೂರಿನ ಹಲಸೂರು ಸಂಚಾರ ಉಪ ವಿಭಾಗದಲ್ಲಿ ಎಸ್ಐ ಆಗಿದ್ದೆ. ಅವತ್ತು ಗುಡ್ ಫ್ರೈಡೆ. ಬೆಳಗ್ಗೆ ೯ ಗಂಟೆ ಸುಮಾರಿಗೆ ನನ್ನ ಬುಲೆಟ್ ಮೋಟಾರ್ ಬೈಕ್ನಲ್ಲಿ ಕಾನ್ಸ್ಟೇಬಲ್ ಗೋಪಾಲ್ನನ್ನು ಕೂರಿಸಿಕೊಂಡು ಮಾಮೂಲಿ ಗಸ್ತಿನಲ್ಲಿದ್ದೆ. ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೋಗುತ್ತಿರುವಾಗ, ಕಮಾಂಡ್ ಹಾಸ್ಪಿಟಲ್ ಎದುರು ಲಾರಿಯೊಂದು ಭಾರಿ ವೇಗದಲ್ಲಿ ಎದುರಿನಿಂದ ಬರುತ್ತಿರುವುದು ಕಾಣಿಸಿತು. ಅನುಮಾನಗೊಂಡ ನಾನು, ನಿಲ್ಲಿಸುವಂತೆ ಸೂಚಿಸಿದೆ. ಆದರೆ ಲಾರಿ ಮತ್ತಷ್ಟು ವೇಗದಿಂದ ಹಾದು ತಕ್ಷಣ ನಾನು ಬುಲೆಟ್ಅನ್ನು ತಿರುಗಿಸಿ ಲಾರಿ ಹೋದ ದಿಕ್ಕಿನತ್ತ ದೌಡಾಯಿಸಿದೆ. ಅಲ್ಲಿಂದ ನನ್ನ ಬುಲೆಟ್ ಸವಾರಿಯ ಚೇಸಿಂಗ್ ಸಿನಿಮೀಯ ರೀತಿಯಲ್ಲಿ ಶುರುವಾಯಿತು.
ನಾನು ಹಿಂದಿನಿಂದ ಹಾರ್ನ್ ಮಾಡಿ ಅಟ್ಟಿಸಿಕೊಂಡು ಬರುತ್ತಿರುವುದನ್ನು, ಲಾರಿಯ ಚಾಲಕ ಸೈಡ್ ಮಿರರ್ನಲ್ಲಿ ನೋಡುತ್ತಿದ್ದ. ಅಡ್ಡಾದಿಡ್ಡಿಯಾಗಿ ಲಾರಿ ಓಡಿಸುತ್ತ, ನಾನು ಓವರ್ಟೇಕ್ ಮಾಡುವುದನ್ನು ತಡೆಯುತ್ತಿದ್ದ. ನನ್ನ ಬೆನ್ನ ಹಿಂದೆ ಕುಳಿತಿದ್ದ ಗೋಪಾಲ್ ಎಂಥ ಚಾಲಾಕಿ ಎಂದರೆ, ಆ ಲಾರಿಯಲ್ಲಿ ಅಡಗಿಸಿಟ್ಟಿರುವುದು ಕಳ್ಳಬಟ್ಟಿ ಸಾರಾಯಿ ಎನ್ನುವುದನ್ನು ಗ್ರಹಿಸಿದ್ದ. ಹೇಳ್ತೀಯ ಎಂದೆ. ಸ್ವಲ್ಪ ಸಾರಾಯಿ ವಾಸನೆ ಬರ್ತಾ ಇದೆ ಸಾರ್ ಎಂದ! ಆಗ ನಾನು ಮತ್ತಷ್ಟು ಚುರುಕಾದೆ. ಏಕೆಂದರೆ ಆಗಷ್ಟೇ ಬೆಂಗಳೂರಿನಲ್ಲಿ ಕಳ್ಳಬಟ್ಟಿ ದುರಂತ ನಡೆದು ನೂರಾರು ಮಂದಿ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದು ರಾಷ್ಟ್ರಮಟ್ಟದ ಸುದ್ದಿಯಾಗಿತ್ತು. ಕಳ್ಳಬಟ್ಟಿ ದಂಧೆಕೋರರ ವಿರುದ್ಧ ಪೊಲೀಸ್ ಇಲಾಖೆ ಸಮರ ಸಾರಿತ್ತು. ಶಂಕಿತ ಲಾರಿಯನ್ನು ನಾನು ಚೇಸ್ ಮಾಡುತ್ತಿರುವ ಕುರಿತು ವೈರ್ಲೆಸ್ನಲ್ಲಿ ಕಂಟ್ರೋಲ್ ರೂಮ್ಗೆ ಮೆಸೇಜ್ ಬಿಟ್ಟೆ. ಆಗ ಚಂದೂಲಾಲ್ ಅವರು ನಗರದ ಹೆಚ್ಚುವರಿ ಕಮಿಷನರ್ ಆಗಿದ್ದರು. ಅವರು ವೈರ್ಲೆಸ್ನಲ್ಲಿ ನನ್ನನ್ನು ಸಂಪರ್ಕಿಸಿ, ‘ಯಾವ ಕಾರಣಕ್ಕೂ ಬಿಡಬೇಡಿ, ಬೆನ್ನಟ್ಟಿ ಹಿಡಿಯಿರಿ. ಸಿಟಿಯ ಎಲ್ಲ ಕಡೆ ನಾನು ಅಲರ್ಟ್ ಮಾಡಿಸುತ್ತೇನೆ,’ ಎಂದರು.
ಅವರ ಮಾತಿನಿಂದ ನಾನು ಮತ್ತಷ್ಟು ಸ್ಫೂರ್ತಿ ಪಡೆದು ಮುನ್ನುಗ್ಗಿದೆ. ಕೆಲವೇ ನಿಮಿಷಗಳಲ್ಲಿ ಎಲ್ಲೆಡೆ ಹೈಅಲರ್ಟ್ ಪರಿಸ್ಥಿತಿ ನಿರ್ಮಾಣವಾಗಿ ಹೋಯಿತು. ಅಲ್ಲಲ್ಲಿ ನಾಕಾಬಂಧಿ ಹಾಕಲಾಯಿತು. ಹಿರಿಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಸಮೇತ ತರಾತುರಿಯಲ್ಲಿ ರಸ್ತೆಗಿಳಿದು ಬಂದರು.
ವಿಕ್ಟೋರಿಯಾ ರಸ್ತೆಗಿಳಿದ ಲಾರಿ ಮುಂದೆ ವಿವೇಕನಗರ ರಸ್ತೆಯ ಸಾಗಿತು. ನಾನು ವೀರಾವೇಶದಿಂದ ಚೇಸ್ ಮಾಡತೊಡಗಿದೆ. ಅದು ಆಗ ಸಿಂಗಲ್ ರೋಡ್ ಆಗಿತ್ತು. ಆ ರಸ್ತೆಯಲ್ಲಿ ಚಾಲಕ ಲಾರಿಯನ್ನು ಕೊಂಚ ಬದಿಗೆ ಸರಿಸಿ ಸೈಡ್ ಕೊಟ್ಟ. ನಾನು ಇದೇ ಚಾನ್ಸ್ ಎಂದುಕೊಂಡು ಮುನ್ನುಗ್ಗಿದೆ. ಅರ್ಧ ಲಾರಿ ದಾಟುವಷ್ಟರಲ್ಲಿ ಚಾಲಕ ಇದ್ದಕ್ಕಿದ್ದಂತೆ ಸ್ಟೇರಿಂಗ್ಅನ್ನು ಬಲಕ್ಕೆ ತಿರುಗಿಸಿಬಿಟ್ಟ. ಲಾರಿಯ ಹಿಂದಿನ ಚಕ್ರದಡಿ ಸಿಲುಕಿ ನಾವು ಅಪ್ಪಚ್ಚಿಯಾಗುವುದೊಂದೇ ಬಾಕಿ. ನಾನು ಮಿಂಚಿನಂತೆ ಬುಲೆಟ್ಅನ್ನು ಪಕ್ಕದ ಚರಂಡಿಗೆ ನುಗ್ಗಿಸಿದೆ. ಆ ಚರಂಡಿಯಲ್ಲಿ ಮರಳು ತುಂಬಿಕೊಂಡಿದ್ದರಿಂದ ಗಂಡಾಂತರದಿಂದ ಪಾರಾದೆವು.
ಆದರೆ ಬೈಕ್ನ ಫುಟ್ರೆಸ್ಟ್ ಚರಂಡಿಯ ಕಲ್ಲುಚಪ್ಪಡಿಯ ನಡುವೆ ಸಿಲುಕಿಕೊಂಡು ನಮ್ಮಿಬ್ಬರ ಕಾಲುಗಳಿಗೆ ತರಚಿದ ಗಾಯಗಳಾದವು. ನಾನು ಕೋಪದಿಂದ ಕೊತಕೊತ ಕುದಿಯುತ್ತಿದ್ದೆ. ಬುಲೆಟ್ ಅನ್ನು ಚರಂಡಿಯಿಂದ ಎಳೆದು ರಸ್ತೆಗೆ ತಂದು ಮತ್ತೆ ಭಾರಿ ವೇಗದಿಂದ ಆ ಲಾರಿಯ ಬೆನ್ನು ಬಿದ್ದೆ. ಲಾರಿಯು ವಿವೇಕನಗರದ ಮುಖ್ಯ ರಸ್ತೆಯ ಎದುರುಗಡೆಯಿಂದ ಒಬ್ಬ ಸ್ಕೂಟರ್ನಲ್ಲಿ ಬರುತ್ತಿದ್ದ. ಲಾರಿ ಅಪಾಯಕಾರಿಯಾಗಿ ಬರುತ್ತಿರುವುದನ್ನು ಕಂಡು ಗಾಬರಿಯಿಂದ ಆತ ಸ್ಕೂಟರ್ ಬಿಟ್ಟು ಪಕ್ಕಕ್ಕೆ ಜಿಗಿದು ಪಾರಾದ. ಲಾರಿಯನ್ನು ಆ ಸ್ಕೂಟರ್ ಮೇಲೆಯೇ ಹತ್ತಿಸಿದ.
(ಮುಂದೆ ಆಗಿದ್ದೇನು? ನಾಳೆ ಓದಿ)
Discussion about this post