1979
ಕಳೆದ 2012ನೇ ವರ್ಷದ ಜುಲೈ 31ರಂದು ನನ್ನ ಸೇವಾವಧಿಯ ಕೊನೆಯ ದಿನ. ಸಿಐಡಿ ಇಲಾಖೆಯಲ್ಲಿ ಆ ದಿನ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ, ನನ್ನ ಜತೆಗೇ ನನ್ನ ಬ್ಯಾಚ್ಮೆಟ್ ಶ್ರೀಮತಿ ಆಂಡಾಳ್ ಡಿವೈಎಸ್ಪಿ ಆಗಿ ನಿವೃತ್ತರಾದ ಮಹಿಳಾ ಅಧಿಕಾರಿಯೊಬ್ಬರು ಮಾತನಾಡುತ್ತ ‘ಅಶೋಕ್… ನಾನು 33 ವರ್ಷಗಳ ಹಿಂದೆಯೇ, ನೀವು ಸತ್ತುಹೋಗಿದ್ದೀರೆಂದು ಯುಡಿಆರ್ (ಅಸ್ವಾಭಾವಿಕ ಸಾವಿನ ವರದಿ) ಬರೆದು ಬಿಟ್ಟಿದ್ದೆ ಅಲ್ವಾ,’ ಎಂದು ನಕ್ಕಿದ್ದರು. ನಿವೃತ್ತಿಯ ದಿನ ಭಾವುಕರಾಗಿದ್ದ ನಾವು, ಹಿಂದೆ ನಾನು ಸತ್ತು ಬದುಕಿದ್ದ ಸನ್ನಿವೇಶವನ್ನು ನೆನಪಿಸಿಕೊಂಡು ತಮಾಷೆ ಮಾಡಿ ನಗುತ್ತ ಹಗುರವಾಗಿದ್ದೆವು. ‘1979ರಲ್ಲೇ ನಾನು ಸತ್ತುಹೋಗಬೇಕಿತ್ತು! ಅಲ್ಲಿಂದ ಇಲ್ಲಿಯವರೆಗೆ ನಾನು ಬದುಕಿರುವ ಅವಧಿಯೆಲ್ಲ ಬೋನಸ್ ಇದ್ದಂತೆ.’ ಎಂದು ನಾನು ಅವತ್ತು ಉದ್ಗರಿಸಿದ್ದೆ…
ನಾನು ಇಲಾಖೆಗೆ ಸೇರಿದ್ದು 1977ರ ನವೆಂಬರ್ 5ರಂದು. ಮೈಸೂರಿನ ಪೊಲೀಸ್ ಟ್ರೈನಿಂಗ್ ಕಾಲೇಜ್ನಲ್ಲಿ ಒಂದು ವರ್ಷ ತರಬೇತಿ ಪಡೆದು ಬೆಂಗಳೂರಿನ ಚಾಮರಾಜಪೇಟೆ ಠಾಣೆಯಲ್ಲಿ ಪ್ರೊಬೆಷನರಿ ಎಸ್ಐ ಆಗಿದ್ದೆ. ನನಗಾಗ 27ವರ್ಷ. ನಾನಾಗ ಹೆಚ್ಚು ಜಿಮ್ ಮಾಡುತ್ತಿದ್ದೆ. ಎರಡೂ ಕಾಲುಗಳನ್ನು ಮೇಲಕ್ಕೆತ್ತಿ ಎರಡೂ ಕೈಗಳನ್ನು ನೆಲಕ್ಕೆ ಊರಿ ನಡೆಯುತ್ತಿದ್ದೆ. ಸಹಪಾಠಿಗಳು ನನ್ನನ್ನು ‘ಸ್ಟ್ರಿಂಗ್ಮ್ಯಾನ್’ ಎಂದು ಕರೆಯುತ್ತಿದ್ದರು. ಈಜುವುದೆಂದರೆ ನನಗೆ ಅಚ್ಚು ಮೆಚ್ಚಾಗಿತ್ತು. ಪ್ರೊಬೆಷನರಿ ಎಸ್ಐ ಆಗಿದ್ದ ನನ್ನ ಬ್ಯಾಚ್ಮೇಟ್ ದೇವಯ್ಯ ಮತ್ತು ರಮೇಶ್ಬಾಬು ಅವರೊಂದಿಗೆ ಸದಾಶಿವನಗರ ಕಾರ್ಪೊರೇಷನ್ ಈಜುಕೊಳಕ್ಕೆ ಹೋಗುತ್ತಿದ್ದೆ.
ಅವತ್ತು ನಮಗೆ ರಜೆ ಇತ್ತು. ನಾವು ಮೂವರ ಜೊತೆ, ನನ್ನ ಭಾವ ಡಾ.ಸುಬ್ಬಯ್ಯ ಕೂಡ ಈಜುಕೊಳ್ಳಕ್ಕೆ ಬಂದಿದ್ದರು. ಅಲ್ಲಿ ಹರೀಶ್ ಎಂಬುವರು ಕೋಚ್ ಆಗಿದ್ದರು. ಅವರು ರಾಷ್ಟ್ರಮಟ್ಟದ ಈಜು ಪಂದ್ಯಾವಳಿಯಲ್ಲಿ ಸ್ವರ್ಣ ಪದಕ ಪಡೆದ ನುರಿತ ಈಜುಗಾರರಾಗಿದ್ದರು. ತಮಾಷೆಯೆಂದರೆ, ಹಿಂದಿನ ದಿನವಷ್ಟೆ ಎಸ್ಐ ದೇವಯ್ಯ ಚಿಕ್ಕಪೇಟೆಯ ಇಸ್ಪಿಟ್ ಅಡ್ಡೆಯ ಮೇಲೆ ದಾಳಿಮಾಡಿ 10 ಜನರನ್ನು ವಶಕ್ಕೆ ತೆಗೆದುಕೊಂಡಿದ್ದರು. ಅವರಲ್ಲಿ ಹರೀಶ್ ಕೂಡ ಇದ್ದರಂತೆ! ಅವರನ್ನೆಲ್ಲ ಠಾಣೆಗೆ ಕರೆದುಕೊಂಡು ಹೋಗುವ ವೇಳೇ ಹರೀಶ್ ತಪ್ಪಿಸಿಕೊಂಡಿದ್ದರಂತೆ. ನಾವು ಈಜುಕೊಳಕ್ಕೆ ಕಾಲಿಡುತ್ತಿದ್ದಂತೆ ಹರೀಶ್ ನಾಚಿಕೆಯಿಂದ ತಲೆ ತಗ್ಗಿಸಿದ್ದರು.
ಹಿಂದಿನ ದಿನದ ಘಟನೆ ಬಗ್ಗೆ ದೇವಯ್ಯ ಅವರು ಹರೀಶ್ ಜತೆ ವಿಚಾರಿಸುತ್ತ ನಿಂತಿದ್ದರು. ಆಗ ಅ ಈಜುಕೊಳದಲ್ಲಿ ಹುಡುಗಿಯರಿಗೆ ಪ್ರತ್ಯೇಕ ವಿಭಾಗ ಇರಲಿಲ್ಲ. ಹುಡುಗ, ಹುಡುಗಿಯರೆಲ್ಲ ಒಂದೇ ಕೊಳದಲ್ಲಿ ಈಜುತ್ತಿದ್ದರು. ನೂರಾರು ಜನ ಈಜಾಡುತ್ತಿರುವುದನ್ನು ನೋಡಿ ನನಗೂ ಒಂಥರಾ ಉಮೇದು ಬಂತು. ನಾನು ದೇಹವನ್ನು ಉಲ್ಟಾ ಮಾಡಿ, ಕೈಗಳಿಂದ ನಡೆಯುತ್ತ ಎಲ್ಲರ ಗಮನ ಸೆಳೆಯುತ್ತ ನೀರಿಗೆ ಧುಮುಕಿದೆ.
ಸ್ವಲ್ಪ ಹೊತ್ತಿನ ಬಳಿಕ ರಮೇಶ್ಬಾಬು, ದೇವಯ್ಯ ಮತ್ತು ಡಾ.ಸುಬ್ಬಯ್ಯ ಈಜಾಡ ತೊಡಗಿದರು. ಇದ್ದಕ್ಕಿಂದ್ದಂತೆ ನನಗೆ, ಸುಮಾರು 30 ಅಡಿ ಎತ್ತರದ ಡೈವಿಂಗ್ ಸ್ಟ್ಯಾಂಡ್ ಮೇಲಿಂದ ಕೆಳಕ್ಕೆ ಜಿಗಿಯುವ ಮನಸ್ಸಾಯಿತು. ರಮೇಶ್ಬಾಬು ಕೂಡ ಇದಕ್ಕೆ ಸಿದ್ಧರಾಗಿ ಮೇಲಕ್ಕೇರಿದರು. ಅಪಾಯಕಾರಿಯಾದ ಕಾರಣ ಅಷ್ಟು ಎತ್ತರದಿಂದ ಜಿಗಿಯಲು ಸಾರ್ವಜನಿಕರಿಗೆ ಅವಕಾಶ ಕೊಡುತ್ತಿರಲಿಲ್ಲ. ರಮೇಶ್ಬಾಬು ಮೊದಲು ಕೆಳಕ್ಕೆ ಜಿಗಿದರು. ನೀರಿನ ನಡುವಿನಿಂದ ಅವರು ನನ್ನತ್ತ ಕೈ ಬೀಸಿದರು. ನೀನು ಜಿಗಿಯಬೇಡ, ನನಗೆ ಏಟಾಗಿದೆ. ಎಂದು ಅವರು ಕೈಸನ್ನೆ ಮಾಡಿದ್ದರಂತೆ. ಆದರೆ ನಾನು ಅವರು ನನ್ನತ್ತ ನೋಡಿ ಟಾಟಾ ಮಾಡುತ್ತಿದ್ದಾರೆ ಎಂದು ತಪ್ಪಾಗಿ ಭಾವಿಸಿ ಕೆಳಗೆ ಜಿಗಿದೇ ಬಿಟ್ಟೆ.
ಲಯ ತಪ್ಪಿ ಯರ್ರಾಬಿರ್ರಿ ಗೋತಾ ಹೊಡೆದ ನನ್ನ ದೇಹ ನೀರಿಗೆ ಅಪ್ಪಳಿಸಿತು. ಹೊಟ್ಟೆಯ ಭಾಗ ನೀರಿಗೆ ಬಡಿದು, ವಿಪರೀತ ನೋವಾಗಿದ್ದಷ್ಟೇ ಗೊತ್ತು. ಅರೆಪ್ರಜ್ಞಾವಸ್ಥೆಗೆ ಜಾರಿದೆ. ಬಾಯಿಯೊಳಗೆ ನೀರು ಗೊರ್ ಗೊರ್ ಎಂದು ಒಳಗೆ ಹೋಗುತ್ತಿತ್ತು. ನಿಧಾನಕ್ಕೆ ನಾನು ತಳ ಭಾಗಕ್ಕೆ ಜಾರತೊಡಗಿದೆ. ಕನಸಿನಲ್ಲಿ ಇದ್ದೇನೇನೊ ಎಂಬ ಅನುಭವವಾಗತೊಡಗಿತು. ಸ್ವಲ್ಪ ಜ್ಞಾನ ಬಂದಂತಾಗಿ ಇದು ಕನಸಲ್ಲ ವಾಸ್ತವ ಎನ್ನುವುದು ಖಾತರಿಯಾಯಿತು.
ಅಷ್ಟು ಹೊತ್ತಿಗಾಗಲೇ ಪೂರ್ತಿ ತಳ ಸೇರಿ ಬಿಟ್ಟೆದ್ದೆ. ಸುತ್ತಲೂ ಕತ್ತಲು ಆವರಿಸಿತ್ತು. ನಿತ್ರಾಣ ಸ್ಥಿತಿಯಲ್ಲೇ ಇದ್ದಬದ್ದ ಶಕ್ತಿ ಒಗ್ಗೂಡಿಸಿ ಕೈ ಕಾಲು ಆಡಿಸಿದೆ. ಒಮ್ಮೆ ನೀರಿನ ಮೇಲಕ್ಕೆ ತೇಲುತ್ತಲೇ, ಸಹಾಯಕ್ಕಾಗಿ ಚಡಪಡಿಸಿದೆ. ಅರೆಕ್ಷಣದೊಳಗೆ ಪೂರ್ತಿ ನಿತ್ರಾಣನಾಗಿ, ಕೈ ಕಾಲು ಚಲಿಸಲೂ ಆಗದೆ ಮತ್ತೆ ಸುಮಾರು 30 ಅಡಿ ಆಳಕ್ಕೆ ಜಾರತೊಡಗಿದೆ. ಆ ಕ್ಷಣದಲ್ಲಿ ನನಗೆ ಅಮ್ಮ, ಅಕ್ಕಂದಿರು, ಅಣ್ಣಂದಿರ ನೆನಪು ಒತ್ತರಿಸಿ ಬಂದು ಮತ್ತಷ್ಟು ಕಂಗಾಲಾದೆ.
ಎಸ್ಐ ಆಗಲು ಇಷ್ಟೊಂದು ಕಷ್ಟಪಟ್ಟಿದ್ದು ವ್ಯರ್ಥವಾಯಿತಲ್ಲ. ಎಲ್ಲರನ್ನೂ ಬಿಟ್ಟು ನಾನು ಇಷ್ಟು ಬೇಗ ಸತ್ತು ಹೋಗುತ್ತೇನಲ್ಲ ಎಂದು ಮಮ್ಮಲ ಮರುಗಿದೆ. ದೇಹ ತಳಕ್ಕೆ ಇಳಿಯುತ್ತ ಹೋದಂತೆ ಮೇಲಿನ ಬೆಳಕು ಮಬ್ಬಾಗುತ್ತ ಗಾಢ ಕತ್ತಲು ಆವರಿಸತೊಡಗಿತು. ಉಸಿರುಕಟ್ಟಿ ನಾನು ಬಾಯಿ ತೆರೆಯುತ್ತಿದ್ದಂತೆ ಒಂದೇ ಸಮನೆ ನೀರು ಒಳ ಹೋಗುತ್ತಿತ್ತು. ನಿಧಾನವಾಗಿ ಕಣ್ಣಗಳು ಮುಚ್ಚಿಕೊಂಡವು. ಹಾಗೆಯೇ ನಾನು ಪೂರ್ಣ ಪ್ರಜ್ಞೆ ಕಳೆದುಕೊಂಡು ಬಿಟ್ಟೆ.
(ಮುಂದೆ ಏನಾಯಿತು? ನಾಳೆ ಓದಿ)
Discussion about this post