ಜ್ಞಾನ ಸ್ವರೂಪ ಚಿಂತನೆ
ಜ್ಞಾನವು ಒಂದು ಸಂಕಲ್ಪಬಿಂದುವಲ್ಲ ಅದು ಒಂದು ಕಾರ್ಯವಿಧಾನ. ಅದು ಮಾತ್ರ ಚುಕ್ಕೆಯಲ್ಲಾ ಒಂದು ಪೂರ್ಣ ಗೆರೆ! ಹಲವಾರು ಅನುಭವಗಳು, ವಿವರಗಳು ಅನುಷ್ಠಾನದೊಂದಿಗೆ ಜ್ಞಾನವಾಗುತ್ತದೆ. ಅನುಭವವೇ ಜ್ಞಾನ – ಅನುಷ್ಠಾನವಿಲ್ಲದವರಿಗೆ ತತ್ವಸ್ವರೂಪದ ಜ್ಞಾನವೇ ಆಗಿರಲಾರದು.
ಬೃಹದಾಕಾರದ ಬೆಟ್ಟದ ಕೋಡುಗಲ್ಲುಗಳನ್ನು ಏರಿದವನಷ್ಟೇ ಅವುಗಳನ್ನು ಎದುರಿಸುವ ಬೇಗೆಯನ್ನು ಬಲ್ಲ. ಹಾಗೆಯೇ, ಅನುಭವವಿಲ್ಲದವನ ತತ್ವಜ್ಞಾನ ಅಸಮಗ್ರ ಜ್ಞಾನವಾಗುತ್ತದೆ.
ಇತ್ತೀಚಿಗೆ ಭಗವದ್ಗೀತೆಯ ಆಯ್ದ ಸ್ಕಂದಗಳ ಪಾರಾಯಣವೂ ಪ್ರಚಲತಿಯಲ್ಲಿದೆ. ಪಾರಾಯಣ ವಾಕ್ಶುದ್ಧಿಗಷ್ಟೇ ಮೀಸಲು. ಪೂರ್ಣಫಲ ಲಭಿಸಬೇಕಾದರೆ ಅರ್ಥದ ಮೇಲೆ ದೃಷ್ಟಿಯಿಡಬೇಕು. ಒಂದೊಂದೂ ಅಂಶಗಳನ್ನೂ ವಿಮರ್ಶೆ ಮಾಡಿ ತುಲನೆಯಿಂದ ಸ್ವೀಕರಿಸಬೇಕು. ಮೊದಲನೆಯಬಾರಿ ಅರ್ಥವಾಗದಿದ್ದರೂ ಎರಡನೆಯಬಾರಿ ಪ್ರಯತ್ನ ಮಾಡಬೇಕು. ಅರ್ಥವಾಗದ್ದು ಎಂದು ತ್ಯಾಗ ಮಾಡಿದರೆ ನಷ್ಟನಮಗೆ ಹೊರತು ಶಾಸ್ತ್ರಕ್ಕಲ್ಲ!
ಶಾಸ್ತ್ರದ ಅಧ್ಯಯನದಲ್ಲಿನ ಹಂತ :
1) ಶ್ರವಣ : ವಿಷಯ ತಿಳಿಯುವಿಕೆ
2) ಮನನ : ಅರ್ಥ ಚಿಂತನೆ ಮಾಡುವುದು (ಮುಖ್ಯವಾದ ಹಂತ)
3) ನಿದಿಧ್ಯಾಸನ : ವನನದಿಂದ ಅನುಭವಕ್ಕೆ ಬಂದ ಸಿದ್ದಾಂತವನ್ನು ನಡವಳಿಕೆಯಲ್ಲಿ ಸರ್ವದಾ ಗಮನದಲ್ಲಿರಿಸಿಕೊಂಡು ಅನುಸರಿಸುವುದು.
ಶ್ರವಣ ವಿಧಾನಕ್ಕೆ ಮಾಧ್ಯಮಗಳಿದೆ. ನಾವು ಇಂದಿನ ದಿನ ಶಾಸ್ತ್ರವನ್ನೂ ಓದಿಯಾದರೂ, ಅಥವಾ ಕೇಳಿಯಾದರೂ ಅಭ್ಯಸಿಸಬಹುದು.
ಮನನ ಹಾಗು ನಿದಿಧ್ಯಾಸನ ಒಂದು ಆಂತರಿಕ ಪ್ರತಿಕ್ರಿಯೆ. ಪ್ರತಿಯೊಬ್ಬರಿಗೂ ಆಗುವ ಮನನ ಹಾಗೂ ನಿಧಿಧ್ಯಾಸನ ಅವರವರ ಅನುಭವಗಳೂ ಹಾಗು ಪ್ರಾಪ್ತಿ, ಭಗವದನುಗ್ರಹಗಳ ಮೇಲೆ ನಿರ್ಧರಿತವಾಗುತ್ತದೆ.
ಭಗವದನುಗ್ರಹದ ಸಾಧನಗಳು:
ಯುದ್ಧ – ದೇವಪೂಜೆ
ದಾನ – ಲೋಕ ಸೇವೆ
ತಪಸ್ಸು – ಆತ್ಮಶಿಕ್ಷಣೆ
ಪುರುಷಾರ್ಥಗಳು (ಧರ್ಮ, ಅರ್ಥ, ಕಾಮ, ಮೋಕ್ಷ ) – 4, ಗುಣಗಳು (ಸಾತ್ವಿಕ, ರಾಜಸ, ತಾಮಸ) 3 ಎಂದು ಈ ಹಿಂದಿನ ಸಂಚಿಕೆಗಳಲ್ಲಿ ಚರ್ಚಿಸಿದ್ದೇವೆ! ಆದರೆ ಇಂದು ನಮ್ಮ ಮನನ ನಿದಿಧ್ಯಾಸನಕ್ಕೆ ಇವು ಹೇಗೆ ಕಾರಕ? ಎಂದರೆ ಸಾತಿವಿಕ, ರಾಜಸಿಕ, ತಮಸಿಕ ಪ್ರವೃತ್ತಿ ಹೊಂದಿರುವ ಪುರುಷನು ನಾಲ್ಕು ಪುರುಷಾರ್ಥಗಳನ್ನು ಸಮತೋಲನದಲ್ಲಿಟ್ಟು ಕೊಳ್ಳುವುದು ಅವನ ನಿರ್ಧಾರ. ಹಾಗೆ ಮಾಡಿ ಭಗವದನುಗ್ರದಿಂದ ಲೋಭಾವಿಲ್ಲದೆ ಅಭ್ಯಸಿಸಿದರೆ ಲಭಿಸದ ಶಾಸ್ತ್ರವಿಲ್ಲ!
(ಮುಂದುವರೆಯುವುದು)
ಅರಿಕೆ:
ಓದುಗ ಮಿತ್ರರೇ, ಈ ಲೇಖನ ಮಾಲಿಕೆಯ ಬಹುಬಾಗ ಕನ್ನಡದ ಹೆಮ್ಮೆಯ ಸಾಹಿತ್ಯ ಚಿಂತಕ, ಕವಿ, ಶ್ರೀ ಡಿ.ವಿ. ಗುಂಡಪ್ಪನವರ ಜೀವನ ಧರ್ಮಯೋಗ’ ಎಂಬ ಭಗವದ್ಗೀತೆಯ ಮೇಲಿನ ಗ್ರಂಥದ ಮೇಲೆ ಆಧಾರಿತವಾಗಿದೆ. ಇದಲ್ಲದೆ ಹಲವಾರು ಮಹನೀಯರುಗಳ ಪ್ರವಚನ, ಗ್ರಂಥಗಳ ಮೇಲೆ ಆಧಾರಿತ ವಾಗಿದೆ. ಆಯಾ ಲೇಖನದ ಕೆಳಗೆ ತತ್ ಸಂಭಂಧೀ ಗ್ರಂಥ ಋಣದ ವಿಷಯವೂ ಇರುತ್ತದೆ.
ಗ್ರಂಥ ಋಣ:
1. ಜೀವನ ಧರ್ಮಯೋಗ ಡಿವಿಜಿ
2. ಉಪನಿಷದ್ ರಹಸ್ಯವು ದ.ರಾ. ಬೇಂದ್ರೆ
ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಲೇಖಕರಿಗೆ ತಿಳಿಸಬೇಕಾದಲ್ಲಿ k.ajaykiran@gmail.com ಗೆ ಇಮೇಲ್ ಮಾಡಿ
-ಅಜೇಯ್ ಕಿರಣ್ ಆಚಾರ್
Discussion about this post