ಡಾ. ದೇವನಹಳ್ಳಿ ವೆಂಕಟಮರಣಯ್ಯ ಗುಂಡಪ್ಪನವರ ಹೆಸರು ಕನ್ನಡ ಸಾಹಿತ್ಯದಲ್ಲಿ ಅಜರಾಮರವಾಗಿ ಉಳಿಯವಂತಹದ್ದು. ಬಡತನದ ಬೇಗೆಯಲ್ಲಿ ಬೆಂದರೂ, ಕಷ್ಟ ಪರಂಪರೆಗಳನ್ನು ನಿರಂತರವಾಗಿ ಜೀವನದಲ್ಲಿ ಎದುರಿಸಿದರೂ ತಾವು ನಂಬಿದ ತತ್ವಕ್ಕೆ ಎಳ್ಳಷ್ಟೂ ಚ್ಯುತಿ ತಂದವರಲ್ಲ. ಅವರು ಉಸಿರಿರುವವರೆಗೂ ನುಡಿದಂತೆ ನಡೆದವರು.
ಕಾಲೇಜು ಶಿಕ್ಷಣವನ್ನು ಪಡೆಯಲಾಗದಿದ್ದರೂ ಸ್ವತಃ ಒಂದು ವಿಶ್ವವಿದ್ಯಾಲಯವದವರು. ಅವರನ್ನು ಆಧುನಿಕ ಭಾರತೀಯ ಸಾಹಿತ್ಯದ ಅಶ್ವತ್ಥವೃಕ್ಷವೆಂದೇ ಪರಿಗಣಿಸಲಾಗಿದೆ.
ಪತ್ರಿಕೋದ್ಯಮ, ಸಾಹಿತ್ಯ, ಸಾರ್ವಜನಿಕ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದವರು. ಎಲ್ಲ ಕ್ಷೇತ್ರಗಳಲ್ಲಿಯೂ ನ್ಯಾಯವನ್ನು ಒದಗಿಸಿಕೊಡಲು ಕಟಿಬದ್ದವಾಗಿ ನಿಂತವರು.
ಅವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ. ಮಾರ್ಚ್ 17, 1887 ಹುಟ್ಟಿದ ದಿನ. ತಾರುಣ್ಯದಲ್ಲಿಯೇ ಪತ್ನಿ ಭಾಗೀರಥಮ್ಮನವರನ್ನು ಕಳೆದುಕೊಂಡರು. ಕಾವ್ಯರಚನೆಯ ಮೂಲಕ ತಮ್ಮ ಮನಸ್ಸಿನ ದುಗುಢವನ್ನು ಮರೆಯಲು ಪ್ರಯತ್ನಿಸಿದರು. ನಿವೇದನೆ, ವಸಂತ ಕುಸುಮಾಂಜಲಿ ಎಂಬ ಕವನ ಸಂಕಲನಗಳನ್ನೂ, ನೂರಾರು ಬಿಡಿಬರಹಗಳನ್ನೂ, ಅಂತಃಪುರಗೀತೆ, ಅನುವಾದಗಳು ಜ್ಞಾಪಕ ಚಿತ್ರಶಾಲೆ, ನಾಟಕ ಮುಂತಾದವುಗಳನ್ನೂ ಅವರು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು.
ಅವರ ‘ಮಂಕುತಿಮ್ಮನ ಕಗ್ಗ’ ಕನ್ನಡದ ಭಗವದ್ಗೀತೆಯೆನಿಸಿದೆ. ಮರುಳ ಮುನಿಯನ ಕಗ್ಗವೂ ಅವರದ್ದೇ ರಚನೆ. ಅವರ ವನಸುಮ ಕವಿತೆಯಂತೂ ಅವರ ಜೀವನದ ಸಮಗ್ರ ದರ್ಶನವನ್ನೂ ಮಾಡಿಸುತ್ತದೆ. ರಾಷ್ಟ್ರಕವಿ ಕುವೆಂಪುರವರು ಅವರ ಸಾಹಿತ್ಯ ಸೇವೆ ಹಾಗೂ ವನಸುಮ ಕವಿತೆಯ ಬಗ್ಗೆ ಹೀಗೆ ಉದ್ಗರಿಸಿದ್ದಾರೆ.
‘ವನಸುಮ’ ಡಿವಿಜಿಯವರ ಜೀವನವನ್ನು ಚೆನ್ನಾಗಿ ಚಿತ್ರಿಸುತ್ತದೆ. ಅದು ಸಾರ್ಥಕ ಮನಸ್ಸಿನ ಹೊಮ್ಮುಗೆ. ಡಿವಿಜಿಯವರ ಸಾಹಿತ್ಯ ಸೇವೆ ಮರದ ಬೇರಿನಂತೆ ಹೊರಗೆ ತೋರಿಸಿಕೊಳ್ಳದೇ, ಆಳವಾಗಿ ಇಳಿದು, ತುದಿಗೊಂಬೆಯ ಹೂಗಳಂತೆ ನಮಗೆ ಚೈತನ್ಯ ಕೆಂಡುತ್ತದೆ. ನಮ್ಮ ನಾಡು ನುಡಿಗಳು ಜೀವಂತವಾಗಿರುವ ತನಕ ಇವರ ಕೃತಿಗಳು ಉಳಿದಿರುತ್ತವೆ.
ಕುವೆಂಪು ಅವರ ಹೃದಯ ತುಂಬಿದ ಈ ಮಾತು ಸಾಕು ಡಿವಿಜಿಯವರನ್ನು ಪರಿಚಯಿಸಲು. ಡಿವಿಜಿಯವರು ಕೊನೆಯವರೆಗೂ ವನಸುಮದಂತೆ ಬಾಳಿದರು. ಬೆಟ್ಟದಡಿ ಹುಲ್ಲಾದರು, ಮನೆಗೆ ಮಲ್ಲಿಗೆಯಾದರು, ಕಷ್ಟಗಳ ಎದುರು ಕಲ್ಲಾದರು, ದೀನ ದುರ್ಬಲರಿಗೆ ಬೆಲ್ಲ ಸಕ್ಕರೆಯಾದರು, ಎಲ್ಲರೊಳಗೊಂದಾಗಿ ಬದುಕು ನಗುನಗುತ ಬಾಳಿದರು, ತೆರಳಿದರು.
ಲೇಖನ: ಜಿ.ಎಸ್. ನಟೇಶ್, ಶಿವಮೊಗ್ಗ
Discussion about this post