ಉಡುಪಿ: ಇಂದಿನ ದಿನಮಾನಗಳಲ್ಲಿ ಪ್ರಶಸ್ತಿ ಹಾಗೂ ಸಮ್ಮಾನಗಳು ಮಾರಾಟಕ್ಕಿರುವ ವಸ್ತುಗಳಂತಾಗಿದ್ದು, ಇದನ್ನು ಪಡೆಯಲು ದೊಡ್ಡ ಮಟ್ಟದ ಲಾಭಿಗಳೇ ನಡೆಯುತ್ತವೆ. ಇಂದು ಪ್ರಶಸ್ತಿ ಪಡೆಯುವ ಬಹಳಷ್ಟು ಮಂದಿ ಒಂದಿಲ್ಲೊಂದು ರೀತಿಯಲ್ಲಿ ಅದಕ್ಕಾಗಿ ಲಾಭಿ ಮಾಡಿರುತ್ತಾರೆ. ಆದರೆ, ಇದೆಲ್ಲಕ್ಕೂ ಅಪವಾದವೆಂಬಂತಹ ಸಾಧಕ ಬೆಳ್ಳಾರೆಯ ಡಾ. ದೇವಿಪ್ರಸಾದ್ ಕಾನತ್ತೂರು.
ಹೌದು, ಬೆಳ್ಳಾರೆಯ ಪಶುಸಂಗೋಪನಾ ಇಲಾಖೆಯಲ್ಲಿ ಜಾನುವಾರು ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಕಾನತ್ತೂರು ಅವರ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಅರಸಿ ಬಂದಿದೆ.
ಜಾನುವಾರು ಅಭಿವೃದ್ಧಿ ಅಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿರುವ ಇವರ ಸಾಧನೆಯನ್ನು ಗುರುತಿಸಿರುವ ಚೆನ್ನೈಯ ನ್ಯಾಶನಲ್ ವರ್ಚ್ಯುವಲ್ ಯುನಿವರ್ಸಿಟಿ ಫಾರ್ ಪೀಸ್ ಎಜುಕೇಶನ್ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ನವೆಂಬರ್ 17ರಂದು ಚೆನ್ನೈನ ಭಾರತೀಯ ವಿದ್ಯಾಭವನದಲ್ಲಿ ನಡೆದ ಸಮಾರಂಭದಲ್ಲಿ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಅಭಿನಂದಿಸಲಾಯಿತು.
ದೇವಿಪ್ರಸಾದ್ ಕಾನತ್ತೂರು ಅವರ ಸಾಧನೆಯ ಮುಡಿಗೆ ಇತ್ತೀಚೆಗೆಷ್ಟೇ ರಾಷ್ಟ್ರೀಯ ಬಸವಶ್ರೀ ಪ್ರಶಸ್ತಿ, ಸೌರಭ ರತ್ನ ರಾಜ್ಯ ಪ್ರಶಸ್ತಿಗಳು ಗರಿಯನ್ನು ಮೂಡಿಸಿದ್ದವು.
ಇಂತಹ ಸಾಧಕನನ್ನು ಪ್ರಶಸ್ತಿ ಸಮ್ಮಾನಗಳು ಅರಸಿ ಬಂದಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
Discussion about this post