ಭದ್ರಾವತಿ: ಲೋಕಸಭಾ ಚುನಾವಣೆಗೆ ಭದ್ರಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೆ ಹೆಚ್ಚಾಗಿದ್ದಾರೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಉಪ ಚುನಾವಣಾಧಿಕಾರಿ ಟಿ.ವಿ. ಪ್ರಕಾಶ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಕ್ಷೇತ್ರದಲ್ಲಿ 1,02,285 ಪುರುಷ, 1,06,988 ಮಹಿಳಾ ಮತದಾರರಿದ್ದು ಒಟ್ಟು 2.09,273 ಮತದಾರರಿದ್ದಾರೆ. 4703 ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚಿದ್ದಾರೆ. 1497 ದಿವ್ಯಾಂಗ ಮತದಾರರೆಂದು ಪತ್ತೆ ಹಚ್ಚಲಾಗಿದೆ.
ತಾಲೂಕಿನಲ್ಲಿ ಶಾಂತಿಯುತ ಮತದಾನಕ್ಕೆ ಈಗಾಗಲೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು ನಗರ ಹಾಗೂ ಗ್ರಾಮಾಂತರ ಸೇರಿದಂತೆ 253 ಮತಗಟ್ಟೆಗಳಲ್ಲಿ 81 ಸೂಕ್ಮ 48 ಅತೀಸೂಕ್ಮ ಹಾಗೂ 124 ಸಾದಾರಣ ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಬಿಎಲ್ಒಗಳು ಮನೆಗಳಿಗೆ ನೀಡುವ ಮತದಾರರ ಭಾವಚಿತ್ರವುಳ್ಳ ಪತ್ರವು ಕೇವಲ ಮಾಹಿತಿಗಾಗಿಯೆ ಹೊರತು ಮತಹಾಕಲು ಬಳಸುವ ಗುರುತಿನ ದಾಖಲೆಯಲ್ಲ. ಮತಚಲಾಯಿಸುವ ಮತದಾರರು ಮತಕೇಂದ್ರಗಳಿಗೆ ತೆರಳುವಾಗ ಗುರುತಿನ ಚೀಟಿ(ಎಪಿಕ್ ಕಾರ್ಡ್), ಪಾಸ್ಪೋರ್ಟ್, ಚಾಲನಾ ಪರವಾನಗಿ, ಸೇವಾ ಗುರುತಿನ ಚೀಟಿ, ಭಾವಚಿತ್ರವಿರುವ ಬ್ಯಾಂಕ್ ಅಥವಾ ಅಂಚೆ ಕಛೇರಿ ಪಾಸ್ಬುಕ್, ಪಾನ್ಕಾರ್ಡ್, ಕಾರ್ಮಿಕ ಸಚಿವಾಲಯದ ಯೋಜನೆಯಲ್ಲಿ ನೀಡಿರುವ ಸ್ಮಾರ್ಟ್ ಕಾರ್ಡ್, ಆರೋಗ್ಯವಿಮೆ, ಎಂನರೇಗಾ ಜಾಬ್ಕಾರ್ಡ್, ಭಾವಚಿತ್ರವಿರುವ ಪಿಂಚಣಿ ದಾಖಲೆ ಅಥವಾ ಆಧಾರ್ ಕಾರ್ಡ್ ದಾಖಲೆಗಳ ಪೈಕಿ ಯಾವುದಾದರು ಒಂದನ್ನು ಗುರುತಿನ ಚೀಟಿಯಾಗಿ ಬಳಸಬಹುದು ಎಂದು ಸ್ಪಷ್ಟಪಡಿಸಿದರು.
ನಗರದ ಹೊಸಮನೆ ಮುಖ್ಯರಸ್ತೆಯ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಬೂತ್ ನಂ.99 ಹಾಗೂ ಮಿಲಿಟರಿ ಕ್ಯಾಂಪ್ನ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿ ಬೂತ್ ನಂ.162 ಇವುಗಳನ್ನು ಮಹಿಳೆಯರಿಗಾಗಿ ಪಿಂಕ್ ಭೂತ್ ಬದಲಾಗಿ ಸಖಿ ಮತಗಟ್ಟೆಗಳನ್ನಾಗಿ ತೆರೆಯಲಾಗಿದೆ. ಒಟ್ಟು 1297 ಸಿಬ್ಬಂದಿಗಳು ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ.
ಏ.23 ರಂದು ಮಂಗಳವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೂ ಮತದಾನ ನಡೆಯಲಿದ್ದು, ಮತದಾನದ ವೇಳೆ ವಿದ್ಯುತ್ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಹಳೇನಗರದ ಸಂಚಿಯಹೊನ್ನಮ್ಮ ಕಾಲೇಜನ್ನು ಮಸ್ಟರಿಂಗ್ ಹಾಗು ಡಿ.ಮಸ್ಟರಿಂಗ್ ಕೇಂದ್ರವನ್ನಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂದರು.
ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದ ಏ: 11 ರ ಸಂಜೆಯವರೆಗೂ 168 ದೂರುಗಳು ದಾಖಲಾಗಿದ್ದು, ತಾಲೂಕಿನಾದ್ಯಂತ ಹೊರವಲಯಗಳಲ್ಲಿ ಸ್ಥಾಪಿಸಲಾಗಿರುವ ತಪಾಸಣಾ ಕೇಂದ್ರಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 23,17200 ಲಕ್ಷ ರೂಗಳನ್ನು ವಶಕ್ಕೆ ಪಡೆದಿದ್ದು ದಾಖಲೆ ನೀಡಿದ 6,99,150 ಲಕ್ಷ ರೂಗಳನ್ನು ಹಿಂದಿರುಗಿಸಲಾಗಿದೆ. ನೀತಿ ಸಂಹಿತೆ ಹಿನ್ನಲೆಯಲ್ಲಿ 3 ಉಲ್ಲಂಘನೆಯ ಪ್ರಕರಣಗಳು ದಾಖಲಾಗಿದೆ.
ಹಳೇನಗರದ ಸಂಚಿಯ ಹೊನ್ನಮ್ಮ ಕಾಲೇಜಿನ ಆವರಣದಿಂದ ದೂರದ ಊರುಗಳಿಗೆ ಚುನಾವಣಾ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿಗಳಿಗೆ ಬಸ್ಸುಗಳ ವ್ಯವಸ್ಥೆ ಕಲ್ಪಿಸಲಾಗಿದ್ದು ಕರ್ತವ್ಯಕ್ಕೆ ತೆರಳಲಿದ್ದಾರೆ. ಶಿವಮೊಗ್ಗ ಜಿಲ್ಲೆಯನ್ನು ನಂ. 1 ಸ್ಥಾನಕ್ಕೆ ತರುವ ಉದ್ದೇಶ ಹೊತ್ತಿರುವ ಜಿಲ್ಲಾಧಿಕಾರಿ ಹಾಗು ಚುನಾವಣಾಧಿಕಾರಿ ದಯಾನಂದ್ ಮತ್ತಿತರ ಅಧಿಕಾರಿಗಳು ಮತ ಹಕ್ಕು ಚಲಾಯಿಸುವಂತೆ ಮತದಾರರ ಮನೆ ಬಾಗಿಲಿಗೆ ಪ್ರಚಾರ ಕೈಗೊಂಡು ಅರಿವು ಮತ್ತು ಜಾಗೃತಿ ಮೂಡಿಸುತ್ತಿದ್ದಾರೆ. ಚುನಾವಣೆ ಅಕ್ರಮ ತಡೆಯಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ರೌಡಿಗಳನ್ನು ಮತ್ತು ಸಮಾಜ ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಟಿ,ವಿ ಪ್ರಕಾಶ್ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ತಹಶೀಲ್ದಾರ್ ಸೋಮಶೇಖರ್, ಪೌರಾಯುಕ್ತ ಮನೋಹರ್, ಪೊಲೀಸ್ ನಗರವೃತ್ತ ನಿರೀಕ್ಷಕ ಮಧುಸೂದನ್ ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post