ಅತ್ಯಂತ ದಕ್ಷ ಹಾಗೂ ಆಡಳಿತಾತ್ಮಕ ವಿಚಾರದಲ್ಲಿ ಖಡಕ್ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಹಾಸನದಿಂದ ವರ್ಗಾವಣೆ ಮಾಡಿರುವ ಹಿಂದೆ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರ ರಾಜಕೀಯ ಸ್ವಾರ್ಥ ಕೆಲಸ ಮಾಡಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಎ. ಮಂಜು ಒತ್ತಾಯದ ಮೇರೆಗೆ ಅವರನ್ನು ಅವಧಿಗೆ ಮುನ್ನ ಹಾಸನದಿಂದ ರೋಹಿಣಿ ಅವರನ್ನು ವರ್ಗಾವಣೆ ಮಾಡಿಸಲಾಗಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಸಿಂಧೂರಿ ಕೆಎಟಿ ಹಾಗೂ ಹೈಕೋರ್ಟ್ ಮೆಟ್ಟಿಲೇರಿದ್ದರು. ವರ್ಗಾವಣೆ ವಿರುದ್ಧ ತಡೆ ಆದೇಶ ನೀಡಲಾಗಿತ್ತು.
ಅಂದು ರೋಹಿಣಿ ಅವರ ಪರವಾಗಿ ರೇವಣ್ಣ ನಿಂತಿದ್ದರು. ಆದರೆ, ಯಾವುದೇ ಒತ್ತಡಗಳಿಗೆ ಮಣಿಯದ ರೋಹಿಣಿ ಅವರು ಪ್ರಸ್ತುತ ರೇವಣ್ಣ ಅವರಿಗೇ ಹಲವು ವಿಚಾರಗಳಲ್ಲಿ ಬಿಸಿತುಪ್ಪವಾಗಿ ಪರಿಣಮಿಸಿದ್ದರು. ಈ ವಿಚಾರ ಹಲವು ಬಾರಿ ಬಹಿರಂಗ ಸಭೆಯಗಳಲ್ಲೆ ಸ್ಫೋಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ರೇವಣ್ಣ ಅವರೇ ರೋಹಿಣಿ ಅವರನ್ನು ವರ್ಗಾವಣೆ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅತ್ಯಂತ ಪ್ರಮುಖವಾಗಿ, ಓರ್ವ ದಕ್ಷ ಐಎಎಸ್ ಅಧಿಕಾರಿ ಜನರ ನಡುವೆ ಇದ್ದು ಸೇವೆ ಮಾಡಲು ಇಚ್ಛಿಸುತ್ತಾರೆ. ಆದರೆ, ಇಂತಹ ಓರ್ವ ದಕ್ಷ ಅಧಿಕಾರಿಯನ್ನು ಜನರೊಂದಿಗೆ ನೇರ ಸಂಪರ್ಕ ಇಲ್ಲದ ಬೆಂಗಳೂರಿನ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯದರ್ಶಿಯನ್ನಾಗಿ ನಿಯೋಜಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
Discussion about this post