ಸುಮಲತಾ ಅಂಬರೀಶ್ ರವರು ಪಕ್ಷೇತರರಾಗಿ ನಿಲ್ಲುವುದರಿಂದ ಆಗುವ ನಷ್ಟಗಳು
1. ಪೂರ್ಣ ಪ್ರಮಾಣದಲ್ಲಿ (Full Pledge) ಬಿಜೆಪಿ ಕಾರ್ಯಕರ್ತರು ಬೆಂಬಲ ನೀಡುವುದಿಲ್ಲ. RSS ಆಗಲಿ ಮೋದಿ ಅಭಿಮಾನಿಗಳೇ ಆಗಲಿ ಹೃದಯಪೂರ್ವಕವಾಗಿ ಬೆಂಬಲಿಸುವುದಿಲ್ಲ. ನಿಷ್ಠಾವಂತರಿಗೆ ಸುಮಲತಾರವರ ನಿಷ್ಠೆಯ ಬಗ್ಗೆ ಒಂದು ಅನುಮಾನ ಇದ್ದೇ ಇರುತ್ತದೆ. ಬಿಜೆಪಿ ಕಾರ್ಯಕರ್ತರು ಹಣಕ್ಕಿಂತಾ ಸಿದ್ಧಾಂತಕ್ಕಾಗಿ ಕೆಲಸ ಮಾಡುವವರು ಎಂಬುದನ್ನು ಇಲ್ಲಿ ಗಮನಿಸಬೇಕು.
2. ಸುಮಲತಾ ಪಕ್ಷೇತರರಾಗಿ ಸ್ಪರ್ದಿಸಿದರೆ ಬಿ ಎಸ್ ವೈ ಸೇರಿದಂತೆ ಎಲ್ಲ ಪ್ರಮುಖ ಬಿಜೆಪಿ ನಾಯಕರಿಗೂ ಮಂಡ್ಯ ಕ್ಷೇತ್ರ Second Priority ಆಗಿಬಿಡುತ್ತದೆ. ಅವರು ಉಳಿದ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಗೆಲುವಿನ ಕಡೆ ಗಮನ ಕೊಡುವಷ್ಟು ಸುಮಲತಾರವರಿಗೆ ಖಂಡಿತಾ ಕೊಡುವುದಿಲ್ಲ. ಒಂದು ವೇಳೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದರೆ ಅನಿವಾರ್ಯವಾಗಿ ಎಲ್ಲರೂ ಬಂದು ಪ್ರಚಾರ ಮಾಡಲೇಬೇಕಾಗುತ್ತದೆ. ಗೆಲ್ಲಿಸಲು ನೂರು ಪ್ರತಿಶತ ಎಫರ್ಟ್ ಹಾಕುತ್ತಾರೆ.
3. ಕಾಂಗ್ರೆಸ್ ನಲ್ಲಿರುವ ಸುಮಲತಾ ಬೆಂಬಲಿಗರನ್ನು ನಂಬಲಾಗುವುದಿಲ್ಲ. ಯಾಕೆಂದರೆ ಚುನಾವಣಾ ಸಮಯದಲ್ಲಿ ಪಕ್ಷದ ಆದೇಶಕ್ಕೆ ಮಣಿದು ಅವರು ಕೈಕೊಡುವ ಸಾಧ್ಯತೆಗಳೇ ಜಾಸ್ತಿ. ಉದಾಹರಣೆಗೆ ಬಿ ಎಸ್ ವೈ ಕೆಜೆಪಿ ಕಟ್ಟುವಾಗ ನಿಮ್ಮ ಜೊತೆ ಬರ್ತೀನಿ ಅಂತ ಹೇಳಿದ್ದ 70% ಜನ ಬೆಂಬಲಿಗರು ಸಮಯದಲ್ಲಿ ಕೈಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಹೀಗಾಗಿ ಅಡ್ಡಗೋಡೆಯ ಮೇಲೆ ದೀಪ ಇಟ್ಟು ಕೈ ಸುಟ್ಟುಕೊಳ್ಳುವುದಕ್ಕಿಂತಾ ಒಂದು ಪಕ್ಷದೊಂದಿಗೆ ಗುರುತಿಸಿಕೊಳ್ಳುವುದೇ ಬುದ್ಧಿವಂತಿಕೆ. ಎರಡು ದೋಣಿಯ ಮೇಲೆ ಕಾಲಿಡುವುದು ಬುದ್ಧಿವಂತಿಕೆಯಲ್ಲ.
4. ಪಕ್ಷೇತರವಾಗಿ ಸ್ಪರ್ಧಿಸಿದರೆ ಸುಮಲತಾ ಪರವಾಗಿ ಮೋದಿ ರ್ಯಾಲಿ ಸಿಗುವುದಿಲ್ಲ. ಕಳೆದ ಬಾರಿ ಮೈಸೂರು ಕ್ಷೇತ್ರದಲ್ಲಿ ಪ್ರತಾಪ ಸಿಂಹ ನಿಂತಾಗ ಚುನಾವಣೆಯ ದಿಕ್ಕು ಬದಲಿಸಿದ್ದು ಮೋದಿ ರ್ಯಾಲಿಯೇ ಎಂಬುದನ್ನು ಇಲ್ಲಿ ಸ್ಮರಿಸಬಹುದು. ಬಿಜೆಪಿ ಪಕ್ಷದಿಂದ ನಿಂತರೆ ಮಂಡ್ಯದಲ್ಲೊಂದು ಮೋದಿ ರ್ಯಾಲಿ ಮಾಡಬಹುದು. ಆಗ ಸುಮಲತಾ ವರ್ಚಸ್ಸು ರಾಷ್ಟ್ರಮಟ್ಟಕ್ಕೆ ಏರುತ್ತದೆ. ಕ್ಷೇತ್ರದಲ್ಲಿ ಮೋದಿ ಹವಾ ಅಂಡರ್ ಕರೆಂಟ್ ಆಗಿ ಹರಿಯುತ್ತಿರುವುದನ್ನು ಯಾರೂ ನಿರಾಕರಿಸಲಾರರು. ಒಂದು ರ್ಯಾಲಿ ಮಂಡ್ಯದ ರಾಜಕೀಯ ಚಿತ್ರಣವನ್ನು ಬದಲಾಯಿಸಬಲ್ಲದು. ಅದಕ್ಕೆ ಮಂಡ್ಯದ ಗಂಡು ಎಂದು ಖ್ಯಾತರಾದ ಅಂಬರೀಶ್ ರವರ ಸ್ಥಳೀಯ ವರ್ಚಸ್ಸು ಪೂರಕವಾಗಿ ಸೇರುವುದು ಅತ್ಯಂತ ಅವಶ್ಯಕ.
5. ಅನುಕಂಪದ ಅಲೆ ಸಧ್ಯದ ಪರಿಸ್ಥಿತಿಯಲ್ಲಿ ಒಂದು ಮಟ್ಟಿಗೆ ಲಾಭದಾಯಕವಾಗಿದೆ. ಆದರೆ ಅನುಕಂಪದ ಅಲೆಯನ್ನು ಏಳಿಸುವ ಕಲೆಯಲ್ಲಿ ಗೌಡರ ಕುಟುಂಬದವರ ಮುಂದೆ ನೀವು ಏನೂ ಅಲ್ಲ. ಚುನಾವಣಾ ಸಮಯದಲ್ಲಿ ದೊಡ್ಡ ಗೌಡರು ಹಾಗೂ ಕುಮಾರಣ್ಣ ಹಾಕುವ ಕಣ್ಣೀರು ಜನರ ಮನಸ್ಸಿನಿಂದ ಅಂಬಿ ಅಗಲಿಕೆಯ ವಿಚಾರವನ್ನೇ ಮಸುಕುಮಾಡಿಬಿಡಬಹುದು. ಹೀಗಾಗಿ ಒಂದು ಪಕ್ಷವನ್ನು ಮತ್ತು ಅದರ ಸಂಘಟನೆಯ ಬಲವನ್ನು ನೆಚ್ಚುವುದು ಒಳಿತು. ಮೋದಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಚುನಾವಣಾ ವಿಷಯವಾಗಿ ಮಾರ್ಪಾಡಿಸುವುದರಿಂದ ನಿಮ್ಮ ಗೆಲುವಿಗೆ ಸರಾಗವಾಗಲಿದೆ.
6. ಅಸಂಘಟಿತ ಕಾರ್ಯಕರ್ತ ಬಲದಿಂದ ಚುನಾವಣೆ ಗೆಲ್ಲಲಾಗುವುದಿಲ್ಲ. ಶಿಸ್ತುಬದ್ಧ ಸಂಘಟನೆಯಿಂದ ಮಾತ್ರ ಗೆಲುವು ಸಾಧ್ಯ. ಒಂದಷ್ಟು ಕಾಂಗ್ರೆಸ್ ಕಾರ್ಯಕರ್ತರು + ಒಂದಷ್ಟು ಅಂಬಿ ಅಭಿಮಾನಿಗಳು ಒಂದಷ್ಟು ಅತೃಪ್ತ ಜೆಡಿಎಸ್ ಕಾರ್ಯಕರ್ತರು ಸೇರಿಕೊಂಡು ಸುಮಲತಾರನ್ನು ಗೆಲ್ಲಿಸಲು ಸಾಧ್ಯವಿಲ್ಲ. ಕಾರ್ಯಕರ್ತರಲ್ಲಿ ಒಗ್ಗಟ್ಟು, ಒಮ್ಮತ, ಒಮ್ಮನಸ್ಸೇ ಇರುವುದಿಲ್ಲ. ಪ್ರತಿಷ್ಠೆಯ ಸಂಘರ್ಷಗಳು ಕಾರ್ಯಕರ್ತರ ನಡುವೆ ತಲೆದೋರಬಹುದು. ಚುನಾವಣೆಯಲ್ಲಿ ಇದು ದುಬಾರಿಯಾಗಿ ಪರಿಣಮಿಬಹುದು. ಇತ್ತ ಬಿಜೆಪಿಯ ವಿಚಾರದಲ್ಲಿ ಮಂಡ್ಯ ಈಗ ಬದಲಾಗಿದೆ. ಬಿಜೆಪಿ ಮೇಲ್ನೋಟಕ್ಕೆ ಅಸ್ತಿತ್ವದಲ್ಲಿ ಇಲ್ಲ ಎನಿಸಿದರೂ ಬೇರೆಲ್ಲಾ ಪಕ್ಷಕ್ಕಿಂತಾ ಬಲವಾದ ಸಂಘಟನೆ ಮಂಡ್ಯದಲ್ಲಿ ಬಿಜೆಪಿಗಿದೆ. ಹಿಂದೂಪರ ಸಂಘಟನೆಗಳು ಪ್ರಬಲವಾಗಿ ಕ್ರಿಯಾಶೀಲವಾಗಿದೆ. ಅವರಿಗೊಂದು ಸಮರ್ಥ ನಾಯಕತ್ವ ದೊರಕಿಬಿಟ್ಟರೆ ಖಂಡಿತಾ ಅಚ್ಚರಿಯ ಫಲಿತಾಂಶ ನೀಡಬಲ್ಲರು! ಇಂದು ಮಂಡ್ಯ ಆಗಲೀ ಹಾಸನ ಆಗಲೀ ಗೌಡರ ಕುಟುಂಬದ ಗುಲಾಮಗಿರಿಯಲ್ಲಿಲ್ಲ. ಪಕ್ಕದ ಹಾಸನದ ಪ್ರೀತಮ್ ಗೌಡರೇ ಇದಕ್ಕೆ ಸಾಕ್ಷಿಯಾಗಿ ಇಲ್ಲವೇ? ಏನೇ ಹೇಳಿದರೂ ಜಿಲ್ಲೆಯಲ್ಲಿ ಬಿಜೆಪಿಯದ್ದೇ ಅಂತ ಕನಿಷ್ಠ 3 ಲಕ್ಷ ವೋಟುಗಳಿವೆ. ಕಳೆದ ಚುನಾವಣೆಯಲ್ಲಿ ಚಂದಗಾಲು ಶಿವಣ್ಣ ಮತ್ತು ಡಾ ಸಿದ್ಧರಾಮಯ್ಯನವರಿಗೆ ಬಿದ್ದ ಮತಗಳ ಸಂಖ್ಯೆ ಇದಕ್ಕೆ ಪುಷ್ಠಿ ಕೊಡುತ್ತದೆ. ಸಿದ್ಧಾಂತಕ್ಕಾಗಿ ಬಡಿದಾಡುವ ಸಂಘಪರಿವಾರದ ಒಬ್ಬ ಕಾರ್ಯಕರ್ತ ಹಣಕ್ಕಾಗಿ ಕೆಲಸ ಮಾಡುವ ಬೇರೆ ಪಕ್ಷಗಳ ನೂರು ಕಾರ್ಯಕರ್ತರಿಗೆ ಸಮ. ಜಿಲ್ಲೆಯಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಮೋದಿ ಪ್ರಭಾವ ಇದೆ. ಜನರು ಸ್ವಯಂಪ್ರೇರಿತರಾಗಿ ಬಿಜೆಪಿ ಪರ ಪ್ರಚಾರ ಮಾಡುವ ಸನ್ನಿವೇಶ ಸೃಷ್ಟಿಯಾಗಿದೆ. ಅದನ್ನು ಉಪಯೋಗಿಸಿಕೊಳ್ಳಲು ನಿಮ್ಮಂಥಾ ಸಮರ್ಥರು ಬೇಕಷ್ಟೇ. ಆದರೆ ಸುಮಲತಾ ಅಂಬರೀಷ್ ಪಕ್ಷೇತರರಾಗಿ ಸ್ಪರ್ಧಿಸಿದರೆ ಈ ಸಾಧ್ಯತೆಗಳಿರುವುದಿಲ್ಲ.
7. ಇನ್ನು ಚುನಾವಣೆ ನಂತರ ಮುಂದೇನು? ಎಂದು ಯೋಚಿಸಿದರೆ, ಒಂದು ವೇಳೆ ಸುಮಲತಾ ಪಕ್ಷೇತರರಾಗಿ ನಿಂತು ಗೆದ್ದರು ಎಂದಿಟ್ಟುಕೊಳ್ಳೋಣ. ಕೇಂದ್ರದಲ್ಲಿ ಮೋದಿ ಸರ್ಕಾರ ಬರೋದು ಬಹುತೇಕ ಪಕ್ಕಾ ಆಗಿದೆ. ಆಗ ಎನ್ ಡಿ ಎ ಗೆ ಬೆಂಬಲ ಕೊಡುತ್ತೀರಾ? ನಿಮ್ಮ ಬೆಂಬಲ ಅವರಿಗೆ ಬೇಕೇ ಆಗುವುದಿಲ್ಲ. ನೀವು ಕೇವಲ ಒಬ್ಬ ಸಾಮಾನ್ಯ ಎಮ್ ಪಿ ಆಗಿರುತ್ತೀರ ಅಷ್ಟೇ! ಮಂಡ್ಯಕ್ಕೆ ಏನು ಕೊಡುಗೆ ಸಲ್ಲಿಸಲೂ ನಿಮ್ಮಿಂದ ಆಗುವುದಿಲ್ಲ. ಅದೇ ಬಿಜೆಪಿಯಿಂದ ಗೆದ್ದರೆ ಮಹಿಳಾ ಕೋಟಾದಲ್ಲಿ ನಿಮಗೆ ಒಬ್ಬ ಸಾಮಾನ್ಯ ಎಮ್ಪಿ ಗಿಂತಾ ಹೆಚ್ಚಿನ ಅಧಿಕಾರ ಸಿಗೋದು ಖಂಡಿತಾ. ಅಭಿವೃದ್ಧಿ ಪರವಾಗಿರುವ ಮೋದಿ ಸರ್ಕಾರದ ಯೋಜನೆಗಳನ್ನು ನೇರ ಮಂಡ್ಯಕ್ಕೆ ತಂದು ಜಿಲ್ಲೆಯ ಅಭಿವೃದ್ಧಿಯನ್ನೂ ಮಾಡಬಹುದು ಜೊತೆಗೆ ನಿಮ್ಮ ವಯಕ್ತಿಕ ವರ್ಚಸ್ಸೂ ಬೆಳಗುತ್ತದೆ. ಮೊದಲೇ ಸಮರ್ಥ ನಾಯಕರಿಲ್ಲದೇ ಕಂಗೆಟ್ಟಿರುವ ಹಳೇ ಮೈಸೂರು ಭಾಗದ ಬಿಜೆಪಿಗೆ ನೀವೇ ಪ್ರಶ್ನಾತೀತ ನಾಯಕಿಯಾಗಿ ಬೆಳೆಯಬಹುದು. ಮೋದಿ ಸರ್ಕಾರದಲ್ಲಿ ಮಹಿಳೆಯರಿಗೆ ವಿಶೇಷ ಗೌರವ ಮತ್ತು ಪ್ರಾತಿನಿಧ್ಯವಿರುವುದರಿಂದ ಮುಂದಿನ ದಿನಗಳಲ್ಲಿ ಪಕ್ಷದ ನಿಷ್ಠಾವಂತ ಸೇವೆಯ ಕಾರಣದಿಂದ ಸುಷ್ಮಾ ಸ್ವರಾಜ್, ಉಮಾಭಾರತಿ, ಸ್ಮೃತಿ ಇರಾನಿ, ಮನೇಕಾ ಗಾಂಧಿ, ನಿರ್ಮಲಾ ಸೀತಾರಾಮನ್, ಹರ್ ಸಿಮ್ರತ್ ಕೌರ್ ಬಾದಲ್ ಇತ್ಯಾದಿ ಹೆಸರುಗಳ ಸಾಲಿಗೆ ನಿಮ್ಮ ಹೆಸರೂ ಸೇರುವ ಸಾಧ್ಯತೆಗಳು ಇಲ್ಲದಿಲ್ಲ.
8. ಒಂದು ವೇಳೆ ಸೋತರು ಎಂದಿಟ್ಟುಕೊಳ್ಳೋಣ. ಅಲ್ಲಿಗೆ ಸುಮಲತಾ ಅಂಬರೀಶ್ ರಾಜಕೀಯ ಜೀವನ ಅಂತ್ಯ ಎಂಬುದು ಕಟುಸತ್ಯ. ಅತ್ತ ಕಾಂಗ್ರೆಸ್ ನಿಂದ ಬಂಡಾಯವೆದ್ದ ಕಾರಣ ಅಲ್ಲಿಯೂ ಸ್ಥಳವಿಲ್ಲ. ಇತ್ತ ಕುಟುಂಬದ ವ್ಯಾಮೋಹದಲ್ಲಿ ಮುಳುಗಿರುವ ಜೆಡಿಎಸ್ ನಲ್ಲಂತೂ ಅಂಬಿ ಕುಟುಂಬದವರಿಗೆ ಜಾಗವೇ ಇಲ್ಲ. ಇನ್ನು ಬಿಜೆಪಿಗೆ ಸೋತ ಮೇಲೆ ಹೋದರೆ ಈಗಿರುವಷ್ಟು ಗೌರವ ಇರುವುದಿಲ್ಲ. ಹೀಗಾಗಿ ಈಗಲೇ ಬಿಜೆಪಿ ಸೇರಿದರೆ ಸೋತರೂ ವಿಧಾನ ಪರಿಷತ್ ಸ್ಥಾನವೋ, ಪಕ್ಷದ ಮಹಿಳಾ ಮೋರ್ಚಾದ ಹುದ್ದೆಯೋ, ನಿಗಮ ಮಂಡಳಿ ಸಂಸ್ಥೆಗಳಲ್ಲೋ, ಅಥವಾ ಇನ್ನಾವುದೋ ಮುಖ್ಯ ಜವಾಬ್ದಾರಿಯನ್ನು ನಿಮಗೆ ವಹಿಸಿಯೇ ವಹಿಸುತ್ತಾರೆ. ಯಾಕೆಂದರೆ ಬಿಜೆಪಿ ಒಂದು ವಿಶಾಲ ಸಾಗರದಂಥಾ ಪ್ರಬಲ ರಾಷ್ಟ್ರೀಯ ಪಕ್ಷ. ಅದರಲ್ಲೂ ಹಳೇ ಮೈಸೂರಿನ ಭಾಗದಲ್ಲಿ ಪಕ್ಷ ಬೆಳೆಸಲು ನಿಮ್ಮ ಅವಶ್ಯಕತೆ ಖಂಡಿತಾ ಪಕ್ಷಕ್ಕೆ ಇದ್ದೇ ಇರುತ್ತದೆ. ಹೀಗಾಗಿ ಸೋತ ಕಾರಣಕ್ಕೆ ನಿಮ್ಮನ್ನು ಬಿಟ್ಟುಕೊಡುವ ಪ್ರಶ್ನೆಯೇ ಇರುವುದಿಲ್ಲ.
9. ಒಟ್ಟಾರೆ ನಿಮ್ಮ ಈ ಬಾರಿಯ ಚುನಾವಣಾ ಫಾರ್ಮುಲಾ
ಅಂಬಿ ಅಭಿಮಾನಿಗಳು + ಮೋದಿ ಅಭಿಮಾನಿಗಳು + ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು + ಅತೃಪ್ತ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು + ಹಿಂದೂಪರ ಸಂಘಟನೆಗಳು + ಸಿನಿಮಾ ರಂಗದ ಸ್ಟಾರ್ ಗಳ ಪ್ರಚಾರ + ಮೋದಿ ರ್ಯಾಲಿ + ಎಸ್ ಎಮ್ ಕೃಷ್ಣ ವರ್ಚಸ್ಸು + ಮೋದಿ ವರ್ಚಸ್ಸು + ಸುಮಲತಾ ವರ್ಚಸ್ಸು + ಅನುಕಂಪದ ಅಲೆ + ಜೆಡಿಎಸ್ ಕುಟುಂಬ ರಾಜಕಾರಣದ ವಿರುದ್ಧ ಜನರ ಅಸಮಾಧಾನದ ಅಲೆ + ಮಂಡ್ಯದ ಸೊಸೆ ವರ್ಸಸ್ ಹಾಸನದ ಮಗ ಸ್ಥಳೀಯತೆಯ ಸೂಕ್ಷ್ಮ = ಗೆಲುವು
ಎಂದಾಗಬೇಕೇ ವಿನಃ
ಪಕ್ಷೇತರ ಅಭ್ಯರ್ಥಿ ಏಕಾಂಗಿ ಸುಮಲತಾ + ಚುನಾವಣಾ ಸಮಯದಲ್ಲಿ ಕೈಕೊಟ್ಟ ಕಾಂಗ್ರೆಸ್ ಕಾರ್ಯಕರ್ತರು + ಹೃದಯಪೂರ್ವಕವಾಗಿ ತೊಡಗಿಸಿಕೊಳ್ಳದ ಬಿಜೆಪಿ ಕಾರ್ಯಕರ್ತರು + ನ್ಯೂಟ್ರಲ್ ಆಗಿ ಚುನಾವಣಾ ಪ್ರಚಾರದಿಂದ ದೂರವುಳಿದ ಹಿಂದೂಪರ ಸಂಘಟನೆಗಳು + ಗೊಂದಲ = ಸೋಲು
ಎಂದಾಗಬಾರದು ಅಷ್ಟೇ!
10. ಕೊನೆಯದಾಗಿ, ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಗುಡಿಗೇರಿ ಗುರು ಕುಟುಂಬದ ವಿಚಾರದಲ್ಲಿ ನೀವು ನಡೆದುಕೊಂಡ ರೀತಿ ಮಂಡ್ಯದ ದೇಶಭಕ್ತ ಯುವಕರ ಹೃದಯ ಗೆದ್ದಿದೆ. ನಿಮಗೊಂದು ವಿಶಿಷ್ಟ ರಾಷ್ಟ್ರೀಯವಾದದ ಇಮೇಜನ್ನು ತಂದುಕೊಟ್ಟಿದೆ. ದಶಕಗಳಿಂದ ಮಂಡ್ಯದ ನೆಲಕ್ಕಂಟಿರುವ ಜಾತಿ ರಾಜಕಾರಣ, ಹೆಂಡದ ರಾಜಕಾರಣ, ನಂಗಾನಾಚ್ ರಾಜಕಾರಣ, ಸಿನಿಮಾ ರಾಜಕಾರಣ, ಅಡ್ಜಸ್ಟ್ ಮೆಂಟ್ ರಾಜಕಾರಣಗಳ ಕಳಂಕವನ್ನು ತೊಡೆದುಹಾಕಲು ಇದು ಸಕಾಲ. ಅಂಬಿ ನಿಧನದ ನಂತರ ಇಷ್ಟು ದಿನ ನೀವು ಇಟ್ಟಿರುವ ಪ್ರಬುದ್ಧ ಹೆಜ್ಜೆಗಳು ಜನರಲ್ಲಿ ಈ ನಿಟ್ಟಿನಲ್ಲಿ ನೀವು ಬಹುದೂರ ಸಾಗಬಲ್ಲಿರಿ, ಆ ಶಕ್ತಿ ನಿಮ್ಮಲ್ಲಿದೆ ಎಂಬ ಆಶಾವಾದ ಹುಟ್ಟಿಸಿವೆ. ಹೀಗಾಗಿ ಅದಕ್ಕೆ ಪೂರಕವಾಗಿ ಸ್ಪಂದಿಸಿ ದೂರದೃಷ್ಟಿಯ ನಿರ್ಧಾರ ಮಾಡಿ. ನಿಮ್ಮ ನಿರ್ಧಾರಕ್ಕಾಗಿ ಮಂಡ್ಯದ ಪ್ರತಿಯೊಬ್ಬ ದೇಶಭಕ್ತ ಯುವಕ ಕಾಯುತ್ತಿದ್ದಾನೆ.
ಸುಮಲತಾ ಅಂಬರೀಶ್ ರವರೇ,
ನಾನು ಗಮನಿಸಿದಂತೆ ಅಂಬಿ ನಿಧನದ ನಂತರ ನೀವು ಇದುವರೆಗೂ ಇಟ್ಟಿರುವ ಪ್ರತಿ ಹೆಜ್ಜೆಗಳು ರಾಜಕೀಯವಾಗಿ ಬಹಳ ಪ್ರಬುದ್ಧತೆಯಿಂದ ಕೂಡಿವೆ.
ಉದಾಹರಣೆಗೆ…..
1. ವಿಧಾನ ಪರಿಷತ್ ಸದಸ್ಯ ಕೆ ಟಿ ಶ್ರೀಕಂಠೇಗೌಡರ ಕೀಳು ಮಟ್ಟದ ಜಾತಿ ರಾಜಕೀಯ ಪ್ರೇರಿತ “ಗೌಡತಿ ಅಲ್ಲ” ಸ್ಟೇಟ್ ಮೆಂಟಿಗೆ ರಿಯಾಕ್ಟ್ ಮಾಡದೇ ಸಂಯಮ ಕಾದುಕೊಂಡು ಜನರ ಬೆಂಬಲ ಗಳಿಸಿದ್ದು.
2. “ಮಂಡ್ಯ ಜಿಲ್ಲೆಗೆ ಅಂಬರೀಶ್ ಕುಟುಂಬದ ಕೊಡುಗೆ ಏನು?” ಎಂಬ ಸಿಎಮ್ ರ ಪುತ್ರ ಪ್ರೇಮ ಪ್ರೇರಿತ “ದೃತರಾಷ್ಟ್ರ ಹೇಳಿಕೆ” ಗೆ ಪ್ರತಿಕ್ರಿಯೆ ನೀಡದೇ ತೀರ್ಮಾನವನ್ನು ಜನತೆಗೆ ಬಿಟ್ಟು ಜನರೇ ಕುಮಾರಸ್ವಾಮಿಯವರ ತಪ್ಪನ್ನು ಗುರುತಿಸುವಂತೆ ಮಾಡಿದ್ದು.
3. “ರಾಜಕೀಯ ನನ್ನ ಗುರಿಯಲ್ಲ. ಮಂಡ್ಯದ ಕುರಿತಾದ ಅಂಬಿ ಪ್ರೀತಿಯನ್ನು ಗಮನದಲ್ಲಿರಿಸಿ ಮಂಡ್ಯದ ಜನರ ಋಣ ತೀರಿಸಿ ಅವರ ಕನಸುಗಳನ್ನು ಸಾಕಾರಗೊಳಿಸುವುದು ನನ್ನ ಗುರಿ.” ಎಂದು ಮಂಡ್ಯ ಜನರ ಮನಸ್ಸನ್ನು ಭಾವನಾತ್ಮಕವಾಗಿ ಗೆದ್ದಿದ್ದು.
4. ಸುಮಲತಾ ರಾಜಕೀಯ ಪ್ರವೇಶಕ್ಕೆ ಜನರ ಒತ್ತಾಯದ ಸುದ್ದಿ ದೊಡ್ಡಮಟ್ಟದಲ್ಲಿ ಕೇಳಿಬರುವಾಗ ಪರಸ್ಪರ ಕೆಸರೆರಚಾಟಕ್ಕೆ ಆಸ್ಪದ ನೀಡದೇ ಸಾಮಾಜಿಕ ಜಾಲತಾಣಗಳಲ್ಲಿ ಮಗನ ಸಿನಿಮಾ ಪ್ರಚಾರಕ್ಕೆ ಸಂಬಂಧಿಸಿದ ಪೋಸ್ಟ್ ಗಳನ್ನು ಹಾಕಿ ಅತ್ತ ಕಡೆ ಮಾತ್ರ ಗಮನ ಕೊಟ್ಟು ತಮ್ಮ “ವ್ಯಕ್ತಿತ್ವದ ಗಾಂಭೀರ್ಯ” ವನ್ನು ಹೆಚ್ಚಿಸಿಕೊಂಡದ್ದು.
5. ರಾಜಕೀಯ ಪ್ರವೇಶಿಸಿದರೆ ಅದು ಮಂಡ್ಯದಿಂದ ಮಾತ್ರ ಎಂದು ಕಡ್ಡಿ ತುಂಡಾದಂತೆ ಹೇಳಿದ್ದಷ್ಟೇ ಅಲ್ಲದೇ ಕೊನೇ ಕ್ಷಣದವರೆಗೂ ಕಾಂಗ್ರೆಸ್ ಪಕ್ಷದ ನಿಷ್ಠೆ ಬಿಟ್ಟುಕೊಡದೇ, ಸಿದ್ಧರಾಮಯ್ಯನವರನ್ನು ಭೇಟಿ ಮಾಡುವವರೆಗೂ ಹೋಗಿ ಅವರ ಬಾಯಲ್ಲೇ “ಟಿಕೇಟ್ ಇಲ್ಲ” ಎನ್ನಿಸಿ “ಕಾಂಗ್ರೆಸ್ ಪಕ್ಷದ ಬೆಂಬಲಿಗರ” ಅನುಕಂಪಕ್ಕೂ ಪಾತ್ರರಾದದ್ದು.
6. ಪುಲ್ವಾಮಾದಲ್ಲಿ ಹುತಾತ್ಮರಾದ ಮಂಡ್ಯದ ವೀರಯೋಧ “ಗುಡಿಗೇರಿ ಗುರು” ಅವರ ಕುಟುಂಬಕ್ಕೆ ಸುದ್ದಿ ತಿಳಿದ ತಕ್ಷಣ ವಿದೇಶದಿಂದಲೇ ಸ್ವಗ್ರಾಮದಲ್ಲೇ ಜಮೀನು ದಾನ ನೀಡುವ ಘೋಷಣೆ ಮಾಡಿ “ಸಂವೇದನಾಶೀಲತೆ”ಯನ್ನು ತೋರಿದ್ದು ಮತ್ತು ಭಾರತಕ್ಕೆ ಬಂದ ಕೂಡಲೇ ಕೊಟ್ಟ ಮಾತಿನಂತೆ ಜಮೀನು ಹಸ್ತಾಂತರ ಮಾಡಿ ಅಂಬರೀಶ್ ರ ದಾನ ಧರ್ಮ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂಬ ಬದ್ಧತೆ ಮೆರೆದದ್ದು. (ಬಹುಶಃ ಸುಮಲತಾರವರು ಜಮೀನಿನ ಬದಲು ಕೋಟಿ ಹಣ ನೀಡಿದ್ದರೂ ಈ ಭಾವನೆ ನಿರ್ಮಾಣವಾಗುತ್ತಿರಲಿಲ್ಲ.)
7. “ಟಿಕೇಟ್ ಕಥೆ ಏನಾದರೂ ಆಗಲಿ ಎದುರಾಳಿ ಯಾರಾದರೂ ಆಗಲಿ ಗೆಲುವೇ ಸಿಗಲಿ ಸೋಲೇ ಬರಲಿ ನಾನು ಸ್ಪರ್ಧಿಸೋದು ಸ್ಪರ್ಧಿಸೋದೇ” ಎಂಬ ಖಡಕ್ಕು ನಿರ್ಧಾರ ತೆಗೆದುಕೊಳ್ಳುವ ಮನೋಭಾವ ಪ್ರದರ್ಶಿಸಿ ಮಂಡ್ಯದಲ್ಲಿ ಮನೆ ಬಾಡಿಗೆ ಪಡೆದದ್ದು ಮತ್ತು ಪ್ರಚಾರ ಕಾರ್ಯಕ್ಕೆ ತಯಾರಾಗಿರುವ ಸೂಚನೆ ನೀಡಲು ಪೋಟೋ ಶೂಟ್ ಮಾಡಿಸಿ ಬೆಂಬಲಿಗರಿಗೆ ಚುನಾವಣೆತೆ ತಯಾರಾಗುವಂತೆ ಪರೋಕ್ಷ ಸೂಚನೆ ನೀಡಿದ್ದು.
8. ಎಸ್ ಎಮ್ ಕೃಷ್ಣ, ಜಿ ಮಾದೇಗೌಡ ಮುಂತಾದ ಹಿರಿಯರೂ ಸೇರಿದಂತೆ ಮಂಡ್ಯ ಜಿಲ್ಲೆಯ ಎಲ್ಲ ಪ್ರಮುಖ ರಾಜಕೀಯ ನಾಯಕರನ್ನು ಮತ್ತು ಚುಂಚನಗಿರಿ ಕ್ಷೇತ್ರದ ಪೂಜ್ಯ ಸ್ವಾಮಿ ನಿರ್ಮಲಾನಂದರನ್ನು ಭೇಟಿಯಾಗಿ ಸಲಹೆ ಕೇಳುವ ಜೊತೆಗೆ ತಮ್ಮ “ಇರಾದೆ” ಯನ್ನು ವ್ಯಕ್ತಪಡಿಸಿ ಬೆಂಬಲ ಕೋರಿದ್ದು. ಪಕ್ಷದ ಕಛೇರಿಗಳಿಗೆ ಭೇಟಿ ಕೊಟ್ಟು ಸಣ್ಣ ಪುಟ್ಟ ನಾಯಕರನ್ನೂ ಮಾತನಾಡಿಸಿ ಚುನಾವಣೆಗೆ ಮೊದಲೇ ಮಾನಸಿಕ ಬೆಂಬಲ ಪಡೆದುಕೊಂಡದ್ದು.
9. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷಗಳ ವಿರುದ್ಧ ಮಾತನಾಡದೇ ಅವಶ್ಯ ಬಿದ್ದಾಗ ಸೂಕ್ತ ಹೇಳಿಕೆಗಳ ಮೂಲಕ ಎದುರಾಳಿಗಳಿಗೆ ಸದ್ದಿಲ್ಲದೇ ಮರ್ಮಾಘಾತ ನೀಡಿದ್ದು ಮತ್ತು ಬಿಜೆಪಿಯೊಂದಿಗೆ ಅಂತರ ಕಾಯ್ದುಕೊಂಡೇ ಬಿಜೆಪಿಯ ಬಾಗಿಲು ತಮಗಾಗಿ ಕೊನೆಯವರೆಗೂ ತೆರೆದಿರುವಂತೆ ನೋಡಿಕೊಂಡದ್ದು.
ಮಾನ್ಯ ಸುಮಲತಾ ಅಂಬರೀಶ್ ರವರೇ
ಇದುವರೆಗೂ ನೀವು ಇಟ್ಟಿರುವ ಹೆಜ್ಜೆಗಳು ಮಂಡ್ಯದ ಜನರ ಮನಗೆದ್ದಿವೆ. ಆದರೆ ಇನ್ನು ಮುಂದೆ ನೀವಿಡುವ ಹೆಜ್ಜೆಗಳು ಅದರಲ್ಲೂ ಹತ್ತನೇ ಹೆಜ್ಜೆ (ಪಕ್ಷದ ಆಯ್ಕೆ) ಇಷ್ಟೇ ಪ್ರಬುದ್ಧತೆಯಿಂದ ಕೂಡಿದ್ದರೆ ಮಾತ್ರ ಗೆಲುವು ಸಾಧ್ಯ. ಇಲ್ಲದಿದ್ದರೆ ವಿರೋಧಿಗಳು ನಿಮ್ಮನ್ನು ಮತ್ತು ನಿಮ್ಮ ಕುಟುಂಬದವರ ಏಳಿಗೆಯನ್ನು ಇಲ್ಲಿಗೇ ಮುಗಿಸಿಬಿಡುವ ಸಂಚಿನ ತಯಾರಿಯಲ್ಲಿದ್ದಾರೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆ ಇಡಿ. ಮಂಡ್ಯದ ಜನರ ಬದಲಾವಣೆಯ ತುಡಿತವನ್ನು ಗ್ರಹಿಸಿ. ಯುವಕರ ನಾಡಿಮಿಡಿತವನ್ನು ಅರಿಯಿರಿ. ರಾಷ್ಟ್ರೀಯತೆಯ ಭಾವನೆಯನ್ನು ಬಯಸುತ್ತಿರುವ ಮಂಡ್ಯದ ನವಯುವಕರ ಆಶಯದಂತೆ ಹೊಸ ಕ್ರಾಂತಿಕಾರಿ ಹೆಜ್ಜೆ ಇಡಿ. ವಿಶೇಷವಾಗಿ ಹುತಾತ್ಮ ಯೋಧನ ವಿಚಾರದಲ್ಲಿ ನೀವು ನಡೆದುಕೊಂಡ ರೀತಿ ನಿಮಗೆ ಒಂದು ವಿಶೇಷವಾದ ಇಮೇಜ್ ಅನ್ನು ತಂದುಕೊಟ್ಟಿದೆಯೆಂಬುದನ್ನು ಗಮನಿಸಿ.
ಹೀಗಾಗಿ ಹತ್ತಾರು ವರ್ಷಗಳ ಕಾಲದ ಜಾತಿ ರಾಜಕಾರಣ, ಹಣದ ರಾಜಕಾರಣ, ಹೆಂಡದ ರಾಜಕಾರಣ, ಸಿನಿಮಾ ರಾಜಕಾರಣವನ್ನು ನೋಡಿ ಕಂಗೆಟ್ಟು ಬದಲಾವಣೆ ಬಯಸುತ್ತಿರುವ ಮಂಡ್ಯದ ಮಕ್ಕಳನ್ನು ರಾಷ್ಟ್ರವನ್ನು ಪ್ರೀತಿಸುವ ಭಾವನೆಯನ್ನು ಉದ್ದೀಪನಗೊಳಿಸುವ ಹೊಸ ರಸ್ತೆಯಲ್ಲಿ ಕೈಹಿಡಿದು ನಡೆಸುವತ್ತ ಹೆಜ್ಜೆ ಹಾಕಿ. ಫಲಿತಾಂಶದ ಬಗ್ಗೆ ಯೋಚಿಸಬೇಡಿ. ಗೆದ್ದರೆ ಅಧಿಕಾರ, ಜನರ ಸೇವೆಗೆ ಅವಕಾಶ. ಒಂದು ವೇಳೆ ಸೋತರೂ ಮಂಡ್ಯದ ಮಣ್ಣಿಗಂಟಿರುವ ಕಳಂಕವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇಡಲಾಗುವ ಮೊಟ್ಟಮೊದಲ ಹೆಜ್ಜೆಯ ಹರಿಕಾರರು ನೀವು ಎಂಬ ಗೌರವ. ಯೋಚಿಸಿ. ತೀರ್ಮಾನಿಸಿ. ನಿಮ್ಮ ತೀರ್ಮಾನದಿಂದ ಮಂಡ್ಯ ಬದಲಾಗಲಿ. ಮಂಡ್ಯದ ಎಮ್ ಪಿ ಸೀಟು ದೇಶಕ್ಕೆ ಕೊಡುಗೆಯಾಗಲಿ. ಧನ್ಯವಾದಗಳು.
ಲೇಖನ: ನಿತ್ಯಾನಂದ ವಿವೇಕವಂಶಿ
Discussion about this post