ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ರಾಜತಾಂತ್ರಿಕತೆಗೆ ಮತ್ತೊಮ್ಮೆ ಗೆಲುವು ದೊರೆತಿದ್ದು, ತಾನು ಬಂಧಿಸಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಲು ಪಾಕಿಸ್ಥಾನ ಒಪ್ಪಿದೆ.
ಈ ಕುರಿತಂತೆ ಖುದ್ಧು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಮಾತನಾಡಿದ್ದು, ನಾವು ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಲು ಸಿದ್ದರಿದ್ದೆವೆ. ನಾಳೆ ಅವರನ್ನು ನಾವು ಭಾರತಕ್ಕೆ ಕಳುಹಿಸುತ್ತೆವೆ ಎಂದಿದ್ದಾರೆ.
ಅಭಿನಂದನ್ ವಿಚಾರದಲ್ಲಿ ಇಂದು ಮಧ್ಯಾಹ್ನದವರೆಗೂ ಪಾಕಿಸ್ಥಾನದ ವರಸೆ ಬದಲಿತ್ತು. ವರದಿಗಳ ಆಧಾರದಲ್ಲಿ ಪಾಕ್ ವಿದೇಶಾಂಗ ಸಚಿವರು ಮಾತನಾಡಿದ್ದು, ಅಭಿನಂದನ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ಪಾಕಿಸ್ಥಾನ ಒಪ್ಪಿದೆ. ಆದರೆ, ಅದಕ್ಕೂ ಮುನ್ನ ಭಾರತದ ಗಡಿಯಲ್ಲಿ ನಿಯೋಜನೆ ಮಾಡಲಾಗಿರುವ ಭಾರತೀಯ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಷರತ್ತು ಹಾಕಿತ್ತು.
ಆದರೆ, ಪಾಕಿಸ್ಥಾನದ ಷರತ್ತಿಗೆ ತಿರುಗೇಟು ನೀಡಿದ್ದ ಭಾರತ, ನಮ್ಮ ದಾಳಿ ಉಗ್ರರ ವಿರುದ್ಧವೇ ಹೊರತೂ ಪಾಕಿಸ್ಥಾನದ ವಿರುದ್ಧವಲ್ಲ. ನಮ್ಮ ಅಭಿನಂದನ್ ಅವರನ್ನು ಯಾವುದೇ ಷರತ್ತುಗಳು ಇಲ್ಲದೇ ಸುರಕ್ಷಿತವಾಗಿ ಬಿಡುಗಡೆ ಮಾಡಿ. ಇಲ್ಲದೇ ಹೋದಲ್ಲಿ ಪರಿಣಾಮ ಎದುರಿಸಿ. ದೇಶದ ಭದ್ರತೆ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಪ್ರಶ್ನೆಯೇ ಇಲ್ಲ ಎಂಬ ಖಡಕ್ ಸಂದೇಶವನ್ನು ಭಾರತ ರವಾನಿಸಿತ್ತು.
ಅಂತಾರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಜಿನೀವಾ ಸಮಾವೇಶದ ಒಪ್ಪಂದದ ಪ್ರಕಾರ ನಡೆದುಕೊಳ್ಳದ ನೀವು, ನಮ್ಮ ವಾಯುಸೇನೆಯ ಯೋಧನನ್ನು ಅಕ್ರಮವಾಗಿ ಬಂಧಿಸಿದ್ದೀರಿ. ಇದರ ಕುರಿತಾಗಿ ಯುಎನ್ ನಿಯಮಗಳ ಪ್ರಕಾರ ನಮಗೆ ಅಧಿಕೃತವಾಗಿ ಮಾಹಿತಿಯನ್ನೂ ಸಹ ನೀವು ನೀಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಯೋಧನನ್ನು ಗೌರವಯುತವಾಗಿ ನೀವು ನಡೆಸಿಕೊಳ್ಳಬೇಕು. ಅಲ್ಲದೇ ಅತ್ಯಂತ ಶೀಘ್ರದಲ್ಲಿ ಅವರನ್ನು ಸುರಕ್ಷಿತವಾಗಿ ನಮ್ಮ ದೇಶಕ್ಕೆ ಕಳುಹಿಸುವ ಕುರಿತಾಗಿ ನೀವು ಭರವಸೆ ನೀಡಬೇಕು. ಇದರ ಹೊರತಾಗಿ ಏನಾದರೂ ತೊಂದರೆಯಾದರೆ ಪರಿಣಾಮ ಎದುರಿಸುತ್ತೀರಿ ಎಂದು ಎಚ್ಚರಿಸಿತ್ತು.
ಇದೇ ವೇಳೆ, ಜಾಗತಿಕ ಮಟ್ಟದಲ್ಲಿ ಪಾಕ್ ಮೇಲೆ ಒತ್ತಡ ತರುವಲ್ಲಿ ಮೋದಿ ನೇತೃತ್ವದ ಸರ್ಕಾರ ಯಶಸ್ವಿಯಾಗಿದೆ. ಅಂತಿಮವಾಗಿ ಭಾರತದ ರಾಜತಾಂತ್ರಿಕ ಚಾಣಾಕ್ಷತನಕ್ಕೆ, ಧೈರ್ಯಕ್ಕೆ ಹೆದರಿರುವ ಪಾಕ್ ಅಭಿನಂದನ್ ಬಿಡುಗಡೆಗೆ ಒಪ್ಪಿದೆ.
Discussion about this post