ಸಕ್ಕರೆ ಕಾಯಿಲೆ, ಬಿಪಿ, ಹೃದಯಾಘಾತ ಹಾಗೂ ಇನ್ನಿತರೆ ರೋಗಗಳಿಗೆ ಉನ್ನತ ಮಟ್ಟದ ಚಿಕಿತ್ಸೆ ಇದೆಯಾದರೂ ಇವುಗಳು ಬರದಂತೆ ತಡೆಯಲು ಜೀವನಶೈಲಿಯ ಬದಲಾವಣೆಯೇ ಮುಖ್ಯವಿಧಾನ.
ಆಹಾರ ಕ್ರಮ, ದುಶ್ಚಟಗಳಿಂದ ದೂರವಿರುವುದು, ಇವುಗಳ ಜೊತೆಯಲ್ಲಿ ವ್ಯಾಯಾಮವೂ ಅತಿ ಮುಖ್ಯ. ಆಜೀವನ ಪರ್ಯಂತ ದೇಹ ದಂಡನೆ ಅತಿಮುಖ್ಯ. ಇದೆಲ್ಲದರ ತಿಳಿವಳಿಕೆ ಇದ್ದೂ ಸಾಮಾನ್ಯವಾಗಿ ಬಹಳ ಕಡಿಮೆ ಜನರು ವ್ಯಾಯಾಮವನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ.
ಯುವ ಜನಾಂಗ, ವಯೋವೃದ್ಧರು ಹಾಗೂ ಅಂಗವಿಕಲರಂತೂ ಇದರ ಗೋಜಿಗೆ ಹೋಗುವುದಿಲ್ಲ. ಹಾಗಾದರೆ ಸರ್ಕಾರದ ವತಿಯಿಂದ ಪ್ರತಿದಿನ ವ್ಯಯಾಮ ಕಡ್ಡಾಯ ಮಾಡಿದರೆ? ಮಾನವ ಹಕ್ಕು ಸಮಿತಿಯಿಂದ ಛೀಮಾರಿ ಹಾಕಿಸಿಕೊಳ್ಳುವುದು ಖಚಿತ!
ಜನರಿಗೆ ವ್ಯಾಯಾಮವೂ ಆಗಿ ಹಕ್ಕು ಉಲ್ಲಂಘನೆ ಆಗದೇ ಹೋದರೆ? ಇಂತಹದ್ದೊಂದು ಕಾರ್ಯಕ್ರಮ ಭದ್ರಾವತಿ ನಗರಸಭೆಯಿಂದ ನಡೆಯುತ್ತಿದೆ!
ಭಾರತದ ಬೇರೆಲ್ಲಾ ನಗರ ಪಾಲಿಕೆಗಳಿಗೆ ಹೋಲಿಸಿದರೆ ಇಂತಹ ಕಾರ್ಯಕ್ರಮ ಎಲ್ಲೂ ನಡೆಯುತ್ತಿಲ್ಲ. ಹೇಗಪ್ಪಾ! ಭದ್ರಾವತಿ ನಗರಸಭೆ ಅಂಧರನ್ನೂ, ವೃದ್ಧರನ್ನೂ, ಅಂಗವಿಕಲರನ್ನೂ, ಕೆಲಸಕ್ಕೆ ಹೋಗುವವರನ್ನೂ, ಶ್ರೀಮಂತ, ಬಡವ, ಜಾತಿ-ಭಾಷೆಗಳ ಬೇಧವಿಲ್ಲದೇ ಉಚಿತ ವ್ಯಾಯಾಮ ಮಾಡಿಸುತ್ತಿದೆ ಎಂದು ತಿಳಿಯಬೇಕಾದರೆ ‘ಸ್ವಚ್ಛ ಭಾರತ’ ಯೋಜನೆಯಡಿ ನಗರಸಭೆಯಿಂದ ಕಸ ಸಂಗ್ರಹಿಸುವ ವಾಹನದ ಹಿಂದೆ ಹೋಗಬೇಕು.
ಕಸಕಡ್ಡಿಗಳನೂ ಬೇರ್ಪಡಿಸಿ ತನ್ನಿ ಎಂದು ಕಿರುಚುವ ಮೈಕಾಸುರನ ಕೂಗಿಗೆ ಇಡಿಯ ಭದ್ರಾವತಿ ಜನತೆ, ಹೆಂಗಸರು-ಗಂಡಸರು, ಕೆಲಸಕ್ಕೆ ಬೆಳಗಿನ ಪಾಳಿಗೆ ಹೋಗಬೇಕಾಗಿರುವವರು, ಅಂಧರು, ಅಂಗವಿಕಲರು, ವಯೋವೃದ್ಧರೆಂಬ ಬೇಧಭಾವವಿಲ್ಲದೇ ಎದ್ದು ಬಿದ್ದು ಜಡಿ ರಸ್ತೆಗೆ ಇಳಿಯಲೇಬೇಕು! ತಪ್ಪಿದರೆ ಕಸ ಮನೆಯಲ್ಲೇ ಉಳಿಯುತ್ತದೆ!
ಓಡೋಡಿ ಬಂದು ವಾಹನದ ಮೇಲೆ ನಿಂತಿರುವ ಪೌರಕಾರ್ಮಿಕರಿಗೆ ಕಸದ ಬುಟ್ಟಿ ಎತ್ತಿಕೊಟ್ಟರೆ ಆ ದಿನದ ವ್ಯಾಯಾಮ ಮುಗಿದಂತೆ! ಅಂಧ-ಅಂಗವಿಕಲ, ವಯೋವೃದ್ಧ ಬೇಧವಿಲ್ಲ! ಪೌರಕಾರ್ಮಿಕರು ವಾಹನದಿಂದ ಇಳಿಯುವುದೇ ಇಲ್ಲ! ಎಂತಹ ಅದ್ಬುತ ಯೋಜನೆ!
ಬೇರೆಲ್ಲಾ ನಗರಸಭಾ ವ್ಯಾಪ್ತಿಯಲ್ಲಿ ಪ್ರತಿದಿನ ಎಲ್ಲ ಮನೆಯವರು ಕಸವನ್ನು ಬೇರ್ಪಡಿಸಿ ಮನೆಯ ಮುಂದೆ ಎರಡು ಡಬ್ಬ-ಪ್ಯಾಕೇಟ್’ನಲ್ಲಿ ಇಟ್ಟಿರುತ್ತಾರೆ. ಪೌರಕಾರ್ಮಿಕರು ಯಾವುದೇ ಮೈಕಾಸುರನ ಹಾವಳಿಯಿಲ್ಲದೇ ತಾವೇ ತೆಗೆದುಕೊಂಡು ಹೋಗುತ್ತಾರೆ!
ಭದ್ರಾವತಿಯಲ್ಲಿ ಹಾಗಲ್ಲ! ಇಡೀ ಊರಿಗೆ ಊರೇ ಪ್ರತಿದಿನ ವಾಹನ ಬರುವ ಸಮಯಕ್ಕೆ ಸರಿಯಾಗಿ ಬೀದಿಗಿಳಿಯಲೇ ಬೇಕು! ಬೇರೆ ವಿಧಿಯಿಲ್ಲ. ರಾತ್ರಿ ಪಾಳಿ ಕೆಲಸ ಮಾಡಿ ಬಂದವರೂ ಕಸ ಎತ್ತಿಕೊಟ್ಟು ಮೇಲೆಯೇ ನಿದ್ರೆ! ಬೆಳಗ್ಗೆ ಕೆಲಸಕ್ಕೆ ಹೋಗುವವರು ಕಸದ ವಾಹನ ಹೋದಮೇಲೆಯೇ ಹೋಗಬೇಕು. ಅಂಧರು, ವೃದ್ಧರು ಹಾಗೂ ಅಂಗವಿಕಲರು ಅರ್ಧ ಗಂಟೆ ರಸ್ತೆ ಮೇಲೆಯೇ ಕಾಯಬೇಕು. ಮೈಕಾಸುರ ಬಂದಮೇಲೆ ತ್ವರಿತವಾಗಿ ಬರಲು ಆಗುವುದಿಲ್ಲ.
ಆಹಾ! ಎಂತಹ ಚಾಣಾಕ್ಷ ನಡೆ, ಒಂದೇ ಬಾಣದಿಂದ ಮೂರು ಹಕ್ಕಿಗಳು. ಭದ್ರಾವತಿ ನಗರ ಸಭೆ ವ್ಯಾಪ್ತಿಯಲ್ಲಿ ಅತ್ಯುತ್ತಮ ಕಸ ವಿಲೇವಾರಿ, ನಾಗರಿಕರಿಗೆ ಉಚಿತ ವ್ಯಾಯಾಮ ಹಾಗೂ ಪೌರಕಾರ್ಮಿಕರಿಗೆ ವಾಹನದ ಮೇಲೆ ನಿಂತು ಎದ್ದು ಬಿದ್ದು ಓಡಿ ಬರುವ ಜನರ ಪರದಾಟ ನೋಡುವ ಭಾಗ್ಯ. ಈಗ ಭದ್ರಾವತಿ ನಗರಸಭೆಯ ವ್ಯಾಪ್ತಿಯಲ್ಲಿ ಹೊಸ ಸಮಯ ವಿಧಾನ…
B K -Before ಕಸ
A K -After ಕಸ
(ಎಎಂ ಮತ್ತು ಪಿಎಂ ಹಳೆಯದಾಯಿತು ಅಪ್ಪವೇ!)
ಲೇಖನ: ಪ್ರಭ, ಭದ್ರಾವತಿ
Discussion about this post