ನೀವೆಷ್ಟು ಸೀಟು ಪಡೆದಿದ್ದೀರೋ ಅದು ಮುಖ್ಯವಲ್ಲ. ಆದರೆ, ಸಂವಿಧಾನಬದ್ದವಾಗಿ ಸೃಜನೆಯಾಗಿರುವ ಮುಖ್ಯಮಂತ್ರಿಯ ಸ್ಥಾನದಲ್ಲಿ ನೀವಿಂದು ಕುಳಿತಿದ್ದೀರಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರೇ.. ಈ ರಾಜ್ಯದ ಪ್ರಭಾವಿ ಸ್ಥಾನದಲ್ಲಿ ಕುಳಿತು ಇಂತಹ ಮಾತನ್ನು ನೀವು ಆಡುತ್ತೀರಿ ಎಂದರೆ, ಅದು ನಮ್ಮ ರಾಜ್ಯದ ದೌರ್ಭಾಗ್ಯ.
ವಿಚಾರ ಏನೆಂದರೆ,
ಬೆಂಗಳೂರಿನ ಗಾಂಧಿ ಭವನದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಸೇರಿದಂತೆ ಹಿರಿಯ ಗಾಂಧೀವಾದಿಗಳನ್ನು ಉದ್ದೇಶಿಸಿ ಮಾತನಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ರಾಜ್ಯ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ.
ಭ್ರಷ್ಟಾಚಾರವನ್ನು ತಾವು ಸ್ವಚ್ಛ ಮಾಡಲು ಯತ್ನಿಸಿದರೆ ತನ್ನನ್ನು ಅಧಿಕಾರದಲ್ಲಿರಲು ಬಿಡುವುದಿಲ್ಲ ಎಂಬ ಮಾತನ್ನು ಕೂಡ ಹೇಳಿದ್ದಾರೆ.
ಇದನ್ನು ಅವರು ಯಾವ ಉದ್ದೇಶವಿಟ್ಟುಕೊಂಡು ಹೇಳಿದರೋ ಗೊತ್ತಿಲ್ಲ. ಆದರೆ, ಮುಖ್ಯಮಂತ್ರಿಯಂತಹ ಸ್ಥಾನದಲ್ಲಿ ಕುಳಿತು ಇಂತಹ ಮಾತು ಆಡುವುದು ಸರ್ವಥಾ ಸರಿಯಾದುದಲ್ಲ.
ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕೆಂದು ನಾನು ಹೊರಟರೆ 2 ನಿಮಿಷ ಕೂಡ ನನ್ನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಇರಲು ಬಿಡುವುದಿಲ್ಲ ಎಂದು ಸಿಎಂ ಹೇಳಿದ್ದಾರೆ.
ಅಲ್ಲಾ ಸ್ವಾಮಿ ಕುಮಾರಸ್ವಾಮಿಯವರೇ, ಮುಖ್ಯಮಂತ್ರಿಯಂತಹ ಪ್ರಭಾವಿ, ವಿಶೇಷಾಧಿಕಾರ ಹೊಂದಿರುವ ವ್ಯಕ್ತಿಯಾಗಿ ಇಂತಹ ಮಾತನ್ನಾಡುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ನೀವೇ ಚಿಂತಿಸಿ.
ಭ್ರಷ್ಟಾಚಾರ ಇದೆ ಎಂಬುದನ್ನು ರಾಜ್ಯದ ಜನರ ಮುಂದೆ ಒಪ್ಪಿಕೊಂಡರೆ ತಾವು ಸತ್ಯವಂತರು, ಇರುವುದನ್ನು ಒಪ್ಪಿಕೊಂಡರು ಮುಖ್ಯಮಂತ್ರಿಗಳು ಎಂಬ ಕರುಣೆ ನಿಮ್ಮ ಮೇಲೆ ಬರುತ್ತದೆ ಎಂದು ನೀವೆಣಿಸಿದ್ದರೆ ಅದು ಶುದ್ದ ಸುಳ್ಳು.
ಭ್ರಷ್ಟಾಚಾರವನ್ನು ನಿರ್ಮೂಲನ ಮಾಡಬೇಕೆಂದು ನಾನು ಹೊರಟರೆ 2 ನಿಮಿಷ ಕೂಡ ನನ್ನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಇರಲು ಬಿಡುವುದಿಲ್ಲ ಎನ್ನುತ್ತೀರಲ್ಲಾ, ಹಾಗಾದರೆ, ನಿಮ್ಮ ಸ್ಥಾನ ಅಷ್ಟು ಅಭದ್ರವಾಗಿದೆ ಎಂದಾಯಿತು ಅಲ್ಲವೇ? ಇಂತಹ ಅಭದ್ರ ಅಧಿಕಾರದಲ್ಲಿ ಕುಳಿತು ಈ ರಾಜ್ಯದ ಜನತೆ ಅದಿನ್ನೆಂತಹ ನ್ಯಾಯವನ್ನು ತಾವು ಒದಗಿಸಲು ಸಾಧ್ಯ? ಸಮ್ಮಿಶ್ರ ಸರ್ಕಾರವೋ ಎಂತಹ ಮಣ್ಣೋ ಅದೆಲ್ಲಾ ಮುಖ್ಯವಲ್ಲ. ತಾವೀಗ ಮುಖ್ಯಮಂತ್ರಿ, ಸಂವಿಧಾನ ಬದ್ದವಾಗಿ ತಮಗೆ ಇರುವ ಅಧಿಕಾರವನ್ನು ಉಪಯೋಗಿಸಿ ಭ್ರಷ್ಟಾಚಾರ ನಿರ್ಮೂಲನೆಗೆ ದಿಟ್ಟ ಹೆಜ್ಜೆ ಇಡುತ್ತೇನೆ ಎಂದು ಹೇಳುವ ಧೈರ್ಯ ತಮಗಿಲ್ಲ ಎಂದಾದರೆ, ನೀವು ಆ ಸ್ಥಾನಕ್ಕೆ ಲಾಯಕ್ಕಲ್ಲ ಎಂಬುದು ಸತ್ಯ.
ಭ್ರಷ್ಟಾಚಾರ ಇದೆ ಎಂದು ಗೊತ್ತಾದ ಇಲಾಖೆಯಿಂದ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದೇ ಇದಕ್ಕಿರುವ ಉಪಾಯ ಎಂದಿದ್ದೀರಲ್ಲಾ, ನೀವೇನು ಮುಖ್ಯಮಂತ್ರಿ ಅಂದುಕೊಂಡಿದ್ದೀರೋ? ಅಥವಾ ಗೋಲಿ ಆಡುವ ಹುಡುಗ ಅಂದುಕೊಂಡಿದ್ದೀರೋ? ಭ್ರಷ್ಟಾಚಾರ ಇದೆ ಎಂದು ಗೊತ್ತಾದಾಗ ಇಲಾಖೆಯಿಂದ ವರ್ಗಾವಣೆ ಮಾಡಿ, ಬೇರೊಂದು ಇಲಾಖೆಗೆ ವರ್ಗಾವಣೆ ಮಾಡಿದ ಮಾತ್ರಕ್ಕೆ ಆ ಭ್ರಷ್ಟ ಅಧಿಕಾರಿ ಸತ್ಯ ಹರಿಶ್ಚಂದ್ರನಾಗಿಬಿಡುತ್ತಾನೆಯೇ?
ಹಾಗಾದರೆ ಒಂದು ಕೆಲಸ ಮಾಡಿ… ಒಂದು ತಂಡ ರಚನೆ ಮಾಡಿ ಯಾವ ಯಾವ ಇಲಾಖೆಯ, ಯಾವ ಯಾವ ಕಚೇರಿಯಲ್ಲಿ ಭ್ರಷ್ಟಾಚಾರವಿದೆ ಎಂಬುದನ್ನು ಒಂದು ಪಟ್ಟಿ ಮಾಡಿ… ಆ ಎಲ್ಲಾ ಕಚೇರಿಗಳಿಗೆ ಭ್ರಷ್ಟರನ್ನು ಸಾರಾಸಗಟಾಗಿ ವರ್ಗಾವಣೆ ಮಾಡಿಬಿಡಿ. ಅಲ್ಲಿಗೆ ನಿಮ್ಮ ಪ್ರಕಾರ ನಮ್ಮ ರಾಜ್ಯ ಭ್ರಷ್ಟಾಚಾರ ಮುಕ್ತ ರಾಜ್ಯವಾದಂತಾಯಿತು ಅಲ್ಲವೇ.. ಈ ಯೋಚನೆ ಮಕ್ಕಳ ಕಾಮಿಕ್ ಪುಸ್ತಕಕ್ಕೂ ಲಾಯಕ್ಕಲ್ಲ ತಿಳಿಯಿರಿ..
ಇನ್ನು, ಇಲ್ಲಿಯವರೆಗೆ ಎಷ್ಟು ದುಡ್ಡು ಮಾಡಿಕೊಂಡಿದ್ದೀರಿ ಎಂದು ಅಧಿಕಾರಿಗಳನ್ನು ನಾನು ಕೇಳುವುದಿಲ್ಲ, ಆದರೆ ಇನ್ನು ಮುಂದೆ ರಾಜ್ಯ ಮತ್ತು ರಾಜ್ಯದ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದಿದ್ದೀರಿ.. ಅಲ್ಲಿಗೆ ಇಲ್ಲಿಯವರೆಗೂ ಭ್ರಷ್ಟಾಚಾರದಲ್ಲಿ ದುಡ್ಡು ಮಾಡಿರುವ ಎಲ್ಲರಿಗೂ ಕ್ಲೀನ್ ಚಿಟ್ ದೊರೆತಂತಾಯಿತು ಅಲ್ಲವೇ?
ಅಲ್ಲರೀ ಸ್ವಾಮಿ ಮುಖ್ಯಮಂತ್ರಿಗಳೇ, ಯಾರಪ್ಪನ ಮನೆ ದುಡ್ಡು ಈ ಭ್ರಷ್ಟರೆಲ್ಲಾ ತಿಂದಿರುವುದು? ಜನಗಳು ಕಷ್ಟಪಟ್ಟು ದುಡಿದು, ಪಾವತಿಸಿದ ತೆರಿಗೆ ಹಣವನ್ನು ಹೆಗ್ಗಣಗಳಂತೆ ಭ್ರಷ್ಟರು ತಿಂದು ತೇಗಿರುವುದು. ಇಲ್ಲಿಯವರೆಗೂ ಎಷ್ಟು ದುಡ್ಡು ಮಾಡಿಕೊಂಡಿದ್ದೀರಿ ಎಂದು ಕೇಳುವುದಿಲ್ಲ ಎಂದು ನೀವು ಹೇಳುವುದಕ್ಕೆ ಅವರೇನು ನಿಮ್ಮನೆ ಹಣ ತಿಂದಿಲ್ಲ.
ಅಷ್ಟಕ್ಕೂ ನಿಮಗೆ ಭ್ರಷ್ಟರ ಬಗ್ಗೆ ಅಷ್ಟೊಂದು ಪ್ರೀತಿಯಿದ್ದರೆ, ಯಾವ ಯಾವ ಅಧಿಕಾರಿ ಎಷ್ಟು ಹಣ ತಿಂದಿದ್ದಾನೆ ಎಂಬುದನ್ನು ತನಿಖೆ ನಡೆಸಿ, ಪಟ್ಟಿ ಮಾಡಿ, ಅಷ್ಟೂ ಹಣವನ್ನು ನಿಮ್ಮ ಸ್ವಂತ ಖಜಾನೆಯಿಂದ ಸರ್ಕಾರಕ್ಕೆ ಕಟ್ಟಿಕೊಡಿ.. ಆಗ ಒಪ್ಪಿಕೊಳ್ಳೋಣ.
ಮುಖ್ಯಮಂತ್ರಿಯಂತಹ ಸ್ಥಾನದಲ್ಲಿ ಕುಳಿತು, ಕಣ್ಣೀರು ಹಾಕುವುದು, ಕರುಣೆ ಪಡೆದುಕೊಳ್ಳುವ ರೀತಿಯಲ್ಲಿ ಮಾತನಾಡುವುದು, ನಡೆದುಕೊಳ್ಳುವುದು ಓರ್ವ ಸಮರ್ಥ ನಾಯಕನಿಗೆ ಇರಬೇಕಾದ ಲಕ್ಷಣವಲ್ಲ. ನಾಯಕನಾದವರು ಯಾವುದಕ್ಕೂ ಹೆದರದೇ, ಏನೇ ಬಂದರೂ ಚಾಣಕ್ಷತನದಿಂದ ಎದುರಿಸುತ್ತೇನೆ, ತನ್ನನ್ನು ಸಮರ್ಪಿಸಿಕೊಂಡಾದರೂ ತನ್ನ ರಾಜ್ಯ ಅಥವಾ ರಾಷ್ಟ್ರದ ಜನರ ಹಿತವನ್ನು ಕಾಪಾಡುತ್ತೇನೆ ಎಂದು ಮುನ್ನುಗ್ಗಬೇಕು. ಅದಾಗದಿದ್ದಾಗ, ಅಂತಹ ಸ್ಥಾನದಲ್ಲಿ ಕುಳಿತುಕೊಳ್ಳಬಾರದು..
ಚಿಂತಿಸಿ ನೋಡಿ ಏನು ಮಾಡುತ್ತೀರಿ ಎಂದು… ಸಮರ್ಥವಾಗಿ ಭ್ರಷ್ಟಾಚಾರನ್ನು ತೊಳೆಯುವ ಪ್ರಯತ್ನ ನಿಮ್ಮಿಂದ ಸಾಧ್ಯವಾದರೆ ಮಾಡಿ.. ಅದು ನಿಮ್ಮಿಂದ ಸಾಧ್ಯವಿಲ್ಲ ಎಂದರೆ, ರಾಜೀನಾಮೆ ನೀಡಿ ಮನೆಗೆ ಹೋಗಿ.. ಆಯ್ಕೆ ನಿಮ್ಮದು.
-ಎಸ್.ಆರ್. ಅನಿರುದ್ಧ ವಸಿಷ್ಠ
Discussion about this post