ಸೊರಬ: ತಾಲೂಕಿನ ಜನತೆ ನನ್ನನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆ ಮಾಡುತ್ತಿದ್ದರೆ ಇಂದು ಸರ್ಕಾರದ ದೊಡ್ಡ ಸ್ಥಾನದಲ್ಲಿರುತ್ತಿದ್ದೆ. ನಾನು ಸೋತಿದ್ದೇನೆ. ಸೋತ ಕೇವಲ ನಾಲ್ಕೇ ತಿಂಗಳಲ್ಲಿ ಮತ್ತೆ ಸಂಸದನಾಗುವ ಅವಕಾಶ ದೊರೆತಿದೆ. ನನ್ನನ್ನು ಗೆಲ್ಲಿಸಿದಲ್ಲಿ ತಾಲೂಕು ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆಂದು ಲೋಕಸಭಾ ಅಭ್ಯರ್ಥಿ ಮಧುಬಂಗಾರಪ್ಪ ಭರವಸೆ ನೀಡಿದರು.
ಪಟ್ಟಣದ ಬಂಗಾರಧಾಮದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಯಾರನ್ನೂ ಹೊಣೆಯಾಗಿಸಲು ಇಷ್ಟಪಡುವುದಿಲ್ಲ. ನಾನು ಹೊರದೇಶದ ಪ್ರವಾಸದಲ್ಲಿದ್ದೆ. ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರಾದಿಯಾಗಿ ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದ್ದರೂ ಅವರ ಪರವಾಗಿ ದುಡಿಯಲು ಸಿದ್ದನಾಗಿದ್ದೆ. ಆದರೆ ಹಿರಿಯರಾದ ಕಾಗೋಡು ತಿಮ್ಮಪ್ಪನವರು ಸೇರಿದಂತೆ ಜಿಲ್ಲೆ, ರಾಜ್ಯ, ರಾಷ್ಟ್ರ ನಾಯಕರು ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ನವರು ಪರಸ್ಪರ ಮನಸ್ತಾಪವನ್ನು ಬದಿಗೊತ್ತಿ ಎಲ್ಲರೂ ಸೇರಿ ಸಂಘಟನಾತ್ಮಕವಾಗಿ ಕೆಲಸ ಮಾಡಿದಲ್ಲಿ ನನ್ನ ಗೆಲುವು ಮೈತ್ರಿ ಸರ್ಕಾರದ ಗೆಲುವಾಗುತ್ತದೆ ಎಂದರು.
ರಾಮನಗರದಲ್ಲಿ ಸ್ಪರ್ಧೆ ಮಾಡುವುದಾಗಿ ಹಾಗೂ ಪರಿಷತ್ ಸದಸ್ಯನನ್ನಾಗಿ ಮಾಡುತ್ತಾರೆಂಬ ಸಾಕಷ್ಟು ಪ್ರಚಾರ ನಡೆದಿತ್ತು. ನಾನು ಇಷ್ಟಪಟ್ಟಿಲ್ಲ. ತಂದೆ ಬಂಗಾರಪ್ಪನವರು ಹಿಂಬಾಗಿಲ ರಾಜಕಾರಣವನ್ನು ಎಂದೂ ಕಲಿಸಿಲ್ಲ. ನೇರವಾಗಿ ಜನರ ಮಧ್ಯದಲ್ಲಿದ್ದು ರಾಜಕಾರಣ ಮಾಡುವುದನ್ನು ಕಲಿಸಿದ್ದಾರೆ. ತಂದೆಯವರ ಅನುಪಸ್ಥಿತಿಯಲ್ಲಿ ಕಾಗೋಡು ತಿಮ್ಮಪ್ಪನವರ ಮಾರ್ಗದರ್ಶನದಲ್ಲಿ ರಾಜಕಾರಣ ಮಾಡುತ್ತಿದ್ದೇನೆ ಎಂದರು.
ಸಾಗರ ಮಾಜಿ ಶಾಸಕ ಗೊಪಾಲಕೃಷ್ಣ ಬೇಳೂರು ಮಾತನಾಡಿ, ಭ್ರಷ್ಟಾಚಾರದ ಮೂಲಕ ಗಳಿಸಿದ ಹಣದಲ್ಲಿ ಯಡಿಯೂರಪ್ಪ ಚುನಾವಣೆ ನಡೆಸಲು ಮುಂದಾಗಿದ್ದಾರೆ. ಈ ಹಿಂದೆ ರಾಘವೇಂದ್ರ ಸಂಸದನಾಗಿ ಮಾಡಿದ ಸಾಧನೆ ಕೇವಲ ಬಸ್ಸ್ಟಾಂಡ್ ನಿರ್ಮಿಸಿದ್ದು ಬಿಟ್ಟರೇ ಇನ್ನಾವ ಸಾಧನೆಯನ್ನೂ ಮಾಡಿಲ್ಲ. ಹಾಗಾಗಿ ಬಸ್ಸ್ಟಾಂಡ್ ರಾಘು ಎಂದೇ ಪ್ರಸಿದ್ಧರು. ಸಂಸದರಾಗಿದ್ದ ಯಡಿಯೂರಪ್ಪ ತುಮರಿ ಸೇತುವೆ ನಿರ್ಮಿಸುತ್ತೇನೆಂದು ನಂಬಿಸಿ ಜನರಿಗೆ ಮೋಸ ಮಾಡಿದ್ದಾರೆ ಎಂದರು.
ಯಡಿಯೂರಪ್ಪನವರಿಗಿರೋದು ಒಂದೇ ಚಿಂತೆ. ಇಪ್ಪತ್ತು ತಿಂಗಳ ಅಧಿಕಾರ ನಡೆಸಿದ ನಾನು ಜೈಲಿಗೆ ಹೋಗಿದ್ದೆ. ಐದು ವರ್ಷ ಅಧಿಕಾರ ಪೂರೈಸಿದ ಸಿದ್ದರಾಮಯ್ಯ ಜೈಲಿಗೆ ಹೋಗಿಲ್ವಲ್ಲವೆಂದು. ಮೈತ್ರಿ ಸರ್ಕಾರದ ಅಭಿವೃದ್ಧಿಗಳು ಯಡಿಯೂರಪ್ಪವರಿಗೆ ಕಣ್ಣು ಕಾಣದಂತಾಗಿದ್ದು, ಕಿವಿಯೂಕೇಳದಂತಾಗಿದೆ. ಸುಳ್ಳು ಹೇಳುವುದರಲ್ಲಿ ಯಡಿಯೂರಪ್ಪ ನಿಸ್ಸೀಮರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಲು ಸುಮಾರು ಸಾವಿರ ಜನರಿಗೆ ಎಂಎಲ್ಸಿ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದ ಅವರು ಅಪವಿತ್ರ ಮೈತ್ರಿ ಸರ್ಕಾರವೆಂದು ಬೊಬ್ಬೆ ಹೊಡೆದು ಕೊಳ್ಳುತಿರುವ ಇವರು ಈ ಹಿಂದೆ ಮೈತ್ರಿ ಮಾಡಿಕೊಂಡಿದ್ದು ಅಪವಿತ್ರ ಮೈತಿಯಾಗಿರಲಿಲ್ಲವೆ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿ.ನಾ. ಶ್ರೀನಿವಾಸ್, ಸೊರಬ ಬ್ಲಾಕ್ ಅಧ್ಯಕ್ಷ ಜೆ. ಶಿವಾನಂದಪ್ಪ, ಚೌಟಿ ಚಂದ್ರಶೇಖರ ಪಾಟೀಲ್, ಜೆಡಿಎಸ್ ಸೊರಬ ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಕೆ.ಪಿ. ರುದ್ರಗೌಡ, ಮುಖಂಡರಾದ ಕೆ. ಮಂಜುನಾಥ್ ಹಳೇಸೊರಬ, ಹುಲ್ತಿಕೊಪ್ಪ ಶ್ರೀಧರ್, ಎಂ.ಡಿ. ಶೇಖರ್, ಕೆ. ಅಜ್ಜಪ್ಪ, ಹಿರೇಕೌಂಶಿ ರಶೀದ್, ಪ್ರಶಾಂತ್ ಮೇಸ್ತ್ರಿ, ಕೆ.ಜಿ. ಲೋಲಾಕ್ಷಮ್ಮ, ಕರುಣಾಕರ, ಪಕೀರಪ್ಪ ಮಾಕೊಪ್ಪ, ಜಯಶೀಲ ಗೌಡ, ಸುನೀಲ್ ಗೌಡ, ಸುರೇಶ್ ಹಾವಣ್ಣನವರ್, ರಾಜು ಕುಪ್ಪಗಡ್ಡೆ, ಸುಮಾಗಜಾನನ, ರಾಜೇಶ್ವರಿ ಗಣಪತಿ, ವಿರೇಶ್ ಕೊಟಗಿ, ಶಿವಲಿಂಗೇಗೌಡ, ತಾರಾಶಿವಾನಂದ್, ನಾಗರಾಜ್ ಚಂದ್ರಗುತ್ತಿ, ಜಿ. ಕೆರಿಯಪ್ಪ ಮತ್ತಿತರರಿದ್ದರು.
(ವರದಿ: ಮಧುರಾಮ್, ಸೊರಬ)
Discussion about this post