ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಸ್ತುತ ಭಾರತ ದೇಶದಲ್ಲಿ ಉದ್ಯಮಕ್ಕೆ ಉತ್ತಮವಾದ ವಾತಾವರಣ ಹಾಗೂ ಬೆಂಬಲ ಇದೆ. ತೆರಿಗೆ ವ್ಯವಸ್ಥೆಯನ್ನು ಸರಳೀಕರಣ ಮಾಡಲಾಗುತ್ತಿದ್ದು, ಈ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಉದ್ಯಮಗಳನ್ನು ಯಶಸ್ವಿಯಾಗಿ ಬೆಳೆಸಬಹುದು ಎಂದು GST ಉಪ ಆಯುಕ್ತೆ ಸಹನಾ ಬಾಳ್ಕಲ್ ಹೇಳಿದರು.
ಬೆಂಗಳೂರಿನ ಹವ್ಯಕ ಭವನದಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಆಯೋಜಿತವಾಗಿದ್ದ ‘ಹವ್ಯಕ ಉದ್ಯಮಿಗಳು ಹಾಗೂ ಕೈಗಾರೋದ್ಯಮಿಗಳ ಸಮಾವೇಶ’ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಜವಾಗಿ ಪರಿಸರದ ಪರಿಚಯ ಇರುವ ಮತ್ತು ವಿಶಿಷ್ಟ ಆಹಾರ ಸಂಸ್ಕೃತಿ ಹೊಂದಿರುವ ಹವ್ಯಕರು ಇಕೋಟೂರಿಸಮ್ ಹಾಗೂ ಹವ್ಯಕ ಆಹಾರೋದ್ಯಮ ಇತ್ಯಾದಿಗಳನ್ನು ಸ್ಥಾಪಿಸುವತ್ತ ಯೋಚಿಸಬಹುದು. ಇದು ತಂತ್ರಜ್ಞಾನದ ಯುಗವಾಗಿದ್ದು, ತಂತ್ರಜ್ಞಾನವನ್ನು ಬಳಸಿಕೊಂಡು ಜಾಗತಿಕ ಮಟ್ಟಕ್ಕೆ ಉದ್ಯಮವನ್ನು ಬೆಳೆಸಲು ಆಲೋಚಿಸಬೇಕು ಎಂದು ಸಲಹೆ ನೀಡಿದರು.
ಬಿಸಿನೆಸ್ ಬೈಯ್ ಬ್ರಾಹ್ಮಿಣ್ಸ್ (BBB) ಸಂಸ್ಥಾಪಕರಾದ ಅನಂತ ನಾಗರಾಜ್ ಮಾತನಾಡಿ, ನಮ್ಮ ಸಂಘಟನೆಗಳು ಕೇವಲ ಪೂಜೆ – ಪುನಸ್ಕಾರಗಳಿಗೆ ಸೀಮಿತವಾಗಬಾರದು. ಧಾರ್ಮಿಕತೆ ನಮ್ಮ ಮೂಲವೇ ಆದರೂ ಇಂದಿನ ಕಾಲಕ್ಕೆ ಅನುಸಾರವಾಗಿ ನಮ್ಮ ಸಂಘಟನೆಗಳು ವ್ಯಾಪಾರ – ಉದ್ದಿಮೆಗಳಿಗೂ ಪ್ರಾಶಸ್ತ್ಯ ನೀಡುವ ಅವಶ್ಯಕತೆ ಇದೆ. ನಾವು ಸಂಘಟಿತರಾದಾಗ ಎಲ್ಲರೂ ಯಶಸ್ವಿಗಳಾಗಲು ಸಾಧ್ಯ. ಎಲ್ಲಾ ಕಥೆಗಳಲ್ಲೂ ‘ಬಡ ಬ್ರಾಹ್ಮಣನೊಬ್ಬನಿದ್ದನ್ನು’ ಎಂದು ಓದಿರುತ್ತೇವೆ. ನಾವು ‘ಬಡ’ ಬ್ರಾಹ್ಮಣರಾಗಿಯೇ ಇರದೇ, ‘ಬಡಾ’ ಬ್ರಾಹ್ಮಣರಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾಸಭೆಯ ಅಧ್ಯಕ್ಷರಾದ ಡಾ.ಗಿರಿಧರ ಕಜೆ, ಸ್ಟಾರ್ಟ್ಪ್ ಆರಂಭವಾದ ನಂತರ ವಿಷನ್ ಅಪ್ ಮಾಡಿ ಉದ್ಯಮವನ್ನು ಬೆಳಸಿದರೆ ಮಾತ್ರ ಯಶಸ್ಸು ಸಾಧ್ಯ. ಇಲ್ಲದಿದ್ದರೆ ಸ್ಟಾರ್ಟ್ಪ್’ಗಳು ಆರಂಭವಾದಲ್ಲೇ ಎಂಡ್ ಅಪ್ ಆಗುತ್ತದೆ. ಜಗತ್ತು AI ಬಗ್ಗೆ ಮಾತನಾಡುತ್ತಿದೆ. ಆದರೆ ನಮ್ಮ ಸಮಾಜ NI ಅನ್ನು ಹೊಂದಿದ್ದೇವೆ. NI ಎಂದರೆ ಸಹಜ ಬುದ್ಧಿಮತ್ತೆ ( Natural Intelligence) ಸಹಜ ಪ್ರತಿಭೆ ಸಮಾಜಕ್ಕೆ ಇರುವ ವರವಾಗಿದ್ದು, ಇದನ್ನು ಬಳಸಿಕೊಂಡು ನಾವು ವಯಕ್ತಿಕವಾಗಿ ಯಶಸ್ವಿಯಾಗುವುದಷ್ಟೇ ಅಲ್ಲದೇ ಜಗತ್ತಿನ ಒಳಿತಿಗೆ ಬಳಸಿಕೊಳ್ಳಬೇಕು ಎಂದರು.
ಡಿಸೆಂಬರ್ 27,28 ಹಾಗೂ 29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದ್ದು, 7 ಕ್ಷೇತ್ರಗಳ 81 ಸಾಧಕರಂತೆ ಒಟ್ಟು 567 ಸಾಧಕರನ್ನು ಸನ್ಮಾನಿಸಲಾಗುವುದು. ಇದು ಹವ್ಯಕ ಸಮಾಜದ ವೈಶಿಷ್ಟ್ಯವನ್ನು ಜಗತ್ತಿನ ಮುಂದೆ ತೆರೆದಿಡುವ ಬೃಹತ್ ಐತಿಹಾಸಿಕ ಕಾರ್ಯಕ್ರಮ ಇದಾಗಲಿದೆ ಎಂದು ಮಾಹಿತಿ ನೀಡಿದರು.
ಸಣ್ಣ ಉದ್ದಿಮೆಗಳು ಇಂದು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವುಗಳನ್ನು ಎದುರಿಸುವ ಮಾರ್ಗಗಳ ಬಗ್ಗೆ ಕಾಸಿಯಾ ಪ್ರಧಾನ ಕಾರ್ಯದರ್ಶಿ ಸುರೇಶ್ ಸಾಗರ್ ಮಾತನಾಡಿದರು.
ಕೃತಕ ಬುದ್ಧಿಮತ್ತೆ (AI) ಯ ಕುರಿತಾಗಿ ಸವಿಸ್ತಾರವಾಗಿ ವಿವರಿಸಿದ ಗೂಗಲ್’ನ ತಂತ್ರಜ್ಞ ನಾರಾಯಣ ಹೆಗಡೆ, ಕೃತಕ ಬುದ್ಧಿಮತ್ತೆಯನ್ನು ಉದ್ಯಮಗಳಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಹಾಗೂ ಕೃತಕ ಬುದ್ಧಿಮತ್ತೆಯ ಸಾಧಕ – ಭಾದಕಗಳ ಕುರಿತಾಗಿ ಚರ್ಚಿಸಿದರು.
ಟಯೋಟಾ ಇಂಡಸ್ಟ್ರೀಸ್’ನ ಡಿ.ಜಿ.ಎಮ್ ಸದಾನಂದ ಹರಿದಾಸ್ ಮಾತನಾಡಿ, ನಮ್ಮಲ್ಲಿ ಶ್ರೇಷ್ಠವಾದ ಬುದ್ಧಿಶಕ್ತಿಯಿದ್ದು, ಚಾಣಕ್ಯನಂತೆ ಚಲಬಿಡದೇ ತೊಡಗಿಸಿಕೊಂಡಾಗ ಯಶಸ್ಸು ನಮ್ಮದಾಗುತ್ತದೆ. ವಿಭಿನ್ನ ಪ್ರಯೋಗಗಳ ಮೂಲಕ ಉದ್ಯಮವನ್ನು ಜನಸ್ನೇಹಿಯಾಗಿಸಬಹುದು ಎಂದರು.
ಕೈಗಾರಿಕೋದ್ಯಮಿಗಳಿಗೆ ಸನ್ಮಾನ : ಯಶಸ್ವಿ ಉದ್ಯಮಿಗಳಾದ ಪ್ರಸನ್ನ ಶಾಸ್ತ್ರಿ, ರಾಮಕೃಷ್ಣ ನಿಸರಾಣಿ, ಲಕ್ಷ್ಮೀನಾರಾಯಣ ಹೆಗಡೆ, ನಾರಾಯಣ ಪ್ರಸನ್ನ ಹಾಗೂ ಕಿರಣ್ ಜಂಬಾನಿ ಅವರನ್ನು ಹವ್ಯಕ ಮಹಾಸಭೆಯಿಂದ ಗೌರವಿಸಿ; ಸನ್ಮಾನಿಸಲಾಯಿತು.
ಮಹಾಸಭೆಯ ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ ಹವ್ಯಕ ಮಹಾಸಭೆಯ ಕಾರ್ಯಚಟುವಟಿಕೆಗಳ ಕುರಿತಾಗಿ ಮಾಹಿತಿ ನೀಡಿ, ಕೈಗಾರಿಕೋದ್ಯಮಿಗಳು ಮಹಾಸಭೆಯ ಜೊತೆ ಕೈಜೋಡಿಸುವ ಕುರಿತು ಹಾಗೂ ಸಂಘಟಿತರಾಗುವ ಕುರಿತು ಮಾತುಗಳನ್ನಾಡಿದರು.
ಮಹಾಸಭೆಯ ಉಪಾಧ್ಯಕ್ಷರಾದ ಶ್ರೀಧರ ಭಟ್ ಕೆಕ್ಕಾರು, ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ, ಆದಿತ್ಯ ಹೆಗಡೆ ಕಲಗಾರು, ಸಂಚಾಲಕರಾದ ರಾಮಚಂದ್ರ ಭಟ್ ಕೆಕ್ಕಾರು ಹಾಗೂ ಶ್ರೀರಾಮ ಎಂ.ಎನ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಖ್ಯಾತ ಗಾಯಕ ಗಣೇಶ್ ದೇಸಾಯಿ ತಂಡದವರಿಂದ ನಡೆದ ‘ಭಾವಸಂಜೆ’ ಸಂಗೀತ ಕಾರ್ಯಕ್ರಮ ಜನಮನರಂಜಿಸಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post