1990
ಕೆಲವೊಮ್ಮೆ ಯಾವುದೇ ಸುಳಿವು ಬಿಡದೆ ಹೋದರೂ ಕೊಲೆಗಾರರು ಸಿಕ್ಕಿ ಬೀಳುತ್ತಾರೆ. ಕೊಲೆಗಾರರು ನಮ್ಮ ಕಣ್ಣೆದುರಿಗೇ ಇದ್ದರೂ ಬೇಗ ಬಲೆಗೆ ಬೀಳುವುದಿಲ್ಲ. ಪಂಜಾಬ್ನ ಪ್ರಖ್ಯಾತ ವೈದ್ಯರೊಬ್ಬರು ಬೆಂಗಳೂರಿನಲ್ಲಿ ಮೆಡಿಕಲ್ ವಿದ್ಯಾರ್ಥಿಗಳಿಂದ ದಾರುಣವಾಗಿ ಕೊಲೆಯಾದ ಘಟನೆ ಇದಕ್ಕೊಂದು ಉದಾಹರಣೆ. ಕುತೂಹಲದ ಸಂಗತಿ ಏನೆಂದರೆ, ರಾಷ್ಟ್ರಪತಿ ಗ್ಯಾನಿ ಜೈಲ್ಸಿಂಗ್ ಅವರ ಖಾಸಾ ಮೊಮ್ಮಗ ಹಂತಕರ ನಡುವೆಯೇ ಇದ್ದ! ಕೊಲಡ ನಡೆದಿದ್ದು ಆತನದೇ ಕಾರಿನಲ್ಲಿ!!
ಅವತ್ತು ನಾನು ಯಾವುದೋ ಪ್ರಕರಣದ ಮಾಹಿತಿ ನೀಡಲು ಕ್ರೈಂ ಡಿಸಿಪಿ ಕಚೇರಿಗೆ ಹೋಗಿದ್ದೆದ. ಡಿಸಿಪಿ ಎದುರು ಹೆಂಗಸರೊಬ್ಬರು ಬಿಕ್ಕಳಿಸುತ್ತಿದ್ದುದು ಕಂಡು ಬಂತು. ನಹಾನು ಕುತೂಹಲದಿಂದ ‘ಏನಂತೆ ಸಾರ್ ಇವರ ಪ್ರಾಬ್ಲಂ,’ ಎಂದೆ. ಆಗ ಡಿಸಿಪಿಯವರು ‘ಇವರ ಗಂಡ ಡಾ.ಪ್ಯಾರಾ ಸಿಂಗ್ ಎಂಬುವರು ಮಗನನ್ನು ಮೆಡಿಕಲ್ ಕಾಲೇಜಿಗೆ ಸೇರಿಸಲು ಪಂಜಾಬ್ನಿಂದ ಬೆಂಗಳೂರಿಗೆ ನಿಗೂಢವಾಗಿ ನಾಪತ್ತೆಯಾಗಿದ್ದಾರಂತಲ್ಲ,’ ಎಂದರು. ನನಗೆ ತಕ್ಷಣ, ದಾವಣಗೆರೆ ಬಳಿ ಸರ್ದಾಜಿಯೊಬ್ಬರ ಮೃತ ದೇಹ ಪತ್ತೆಯಾದ ಸುದ್ದಿ ಪತ್ರಿಕೆಯಲ್ಲಿ ಬಂದಿದ್ದು ಫ್ಲ್ಯಾಷ್ ಆಯಿತು. ಅವರಿಗೆ ಆ ವಿಷಯ ತಿಳಿಸಿದೆ. ಅಲ್ಲಿಂದ ತನಿಖೆ ವೇಗ ಪಡೆದುಕೊಂಡಿತು. ಹಂತಕರ ಪತ್ತೆಗೆ ಹಲವಾರು ಪೊಲೀಸ್ ತಂಡಗಳನ್ನು ರಚಿಸಿ, ಕೊನೆಗೆ ಕೊಲೆಗಡುಕರು ನನ್ನ ಕೈಗೇ ಸಿಕ್ಕಿಬಿದ್ದರು.
ಡಾ.ಪ್ಯಾರಾ ಸಿಂಗ್ ಅಮೃತಸರದಲ್ಲಿ ದೊಡ್ಡ ಕ್ಲಿನಿಕ್ ನಡೆಸುತ್ತಿದ್ದರು. ಅವರ ಪತ್ನಿಯೂ ವೈದ್ಯೆಯಾಗಿದ್ದರು. ಮಗನಿಗೆ ಪ್ರತಿಷ್ಠಿತ ಮೆಡಿಕಲ್ ಕಾಲೇಜೊಂದರಲ್ಲಿ ಸೀಟು ಕಾಲೇಜಿಗೆ ಡೊನೆಷನ್ ತುಂಬಲೆಂದು 2 ಲಕ್ಷ 30 ಸಾವಿರ ರೂ. ತೆಗೆದುಕೊಂಡು 1990ರ ಜೂನ್ 14ರಂದು ಬೆಂಗಳೂರಿಗೆ ಆಗಮಿಸಿ ಹೋಟೆಲ್ ರಾಜ್ಮಹಲ್ನಲ್ಲಿ ಉಳಿದುಕೊಂಡಿದ್ದರು. ಪಂಜಾಬ್ನಲ್ಲಿಯೇ ಇದ್ದ ಅವರ ಆಪ್ತಮಿತ್ರ ಡಾ|ರಾಮ್ ಲುಬಿಯಾ ಸುಂದರ್ ಎಂಬುವರ ಮಗ ಚಂದನ್ ಸಿಂಗ್ ಆದಾಗಲೇ ಆ ಕಾಲೇಜಿನಲ್ಲಿ ಓದುತ್ತಿದ್ದ. ಹಣ ಕಟ್ಟಲು ತಮ್ಮ ಮಗನ ನೆರವು ಪಡೆಯುವಂತೆ ಸುಂದರ್ ತಿಳಿಸಿದ್ದರು. ಅದರಂತೆ ಪ್ಯಾರಾ ಸಿಂಗ್ ಅವರು ಚಂದನ್ನನ್ನು ಸಂಪರ್ಕಿಸಿದರು. ಆತ, ಮರುದಿನ ಬೆಳಗ್ಗೆ ಕರೆದುಕೊಂಡು ಹೋಗುತ್ತೇನೆ ಎಂದ.
ಹೋಟೆಲ್ ರೂಮ್ನಲ್ಲಿ ಪ್ಯಾರಾ ಸಿಂಗ್, ತಮ್ಮ ಮಗನ ವೈದ್ಯಕೀಯ ಶಿಕ್ಷಣದ ಕನಸು ಕಾಣುತ್ತಿದ್ದರೆ… ಆತ್ತ ಚಂದನ್ ಸಿಂಗ್, ಅವರ ಕೊಲೆ ಮಾಡಿ ಡೊನೆಷನ್ ಹಣ ಲಪಟಾಯಿಸಲು ಸಂಚು ರೂಪಿಸುತ್ತಿದ್ದ. ಮರುದಿನ ಬೆಳಗ್ಗೆ ಚಂದನ್ ಹೋಟೆಲ್ ಬಳಿ ಬಂದು ಅವರನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ಹರಟ. ಆ ಕಾರು ಕಾಲೇಜಿನ ಕಡೆ ಹೋಗುವ ಬದಲು, ಆ ದಿನಗಳಲ್ಲಿ ನಿರ್ಜನ ಪ್ರದೇಶವಾಗಿದ್ದ ಕೋರಮಂಗಲದ ಕಡೆಗೆ ಸಾಗಿತು. ಕಾರಿನ ಸೀಟಿನಲ್ಲಿ ಇನ್ನೂ ಇಬ್ಬರು ವಿದ್ಯಾರ್ಥಿಗಳಿದ್ದರು. ಅವರು-ಸಿರಿಯಾ ಮೂಲಕ ಓರಾಬಿ ಅಲಿ ಹುಸೇನ್ ಬಕ್ರಿ ಮತ್ತು ಅಮ್ಜದ್ ಅಲಿ ಹುಸೇನ್ ಬಕ್ರಿ ಸಹೋದರರು. ಆ ಇಬ್ಬರು ಆಗರ್ಭ ಶ್ರೀಮಂತರಾಗಿದ್ದರು. ಹಾಸ್ಟೆಲ್ ಬದಲಿಗೆ ಅವರು, ಪಂಚತಾರಾ ಹೋಟೆಲ್ ಒಂದರಲ್ಲಿ ರೂಮ್ ಮಾಡಿಕೊಂಡಿದ್ದರು! ಕಾರು ಚಲಿಸುತ್ತಿರುವಂತೆಯೇ ಅವರಿಬ್ಬರು ಹಿಂದಿನಿಂದ ಪ್ಯಾರಾ ಸಿಂಗ್ ಅವರ ಕುತ್ತಿಗೆಗೆ ಹಗ್ಗ ಬಿಗಿದರು. ‘ಗೆರೊಟ್ಟೆ’ ಎಂದು ಕರೆಯಲಾಗುವ ಈ ಮರ್ಡರ್ ಸ್ಟೈಲ್ ಆ ದಿನಗಳ ಸಿನಿಮಾಗಳಲ್ಲಿ 88 ಕುಪ್ರಸಿದ್ಧವಾಗಿತ್ತು. ಈ ದಾಳಿಯಿಂದ ಕಂಗೆಟ್ಟ ಸಿಂಗ್ ತಪ್ಪಿಸಿಕೊಳ್ಳಲು ಚಡಪಡಿಸಿದರು. ಆದರೆ ಕೊನೆಗೂ ಸೋತು ಕೊನೆಯುಸಿರೆಳೆದರು.
ದಾವಣಗೆರೆಗೆ ಹೋಗಿ ಅಲ್ಲಿನ ಡ್ಯಾಮ್ವೊಂದರ ಬಳಿ ಹೆಣ ಎಸೆಯಲು ಪ್ರಯತ್ನಿಸಿದರಾದರೂ ಜನ ಸಂಚಾರ ಹೆಚ್ಚಿದ್ದ ಕಾರಣ ಸಾಧ್ಯವಾಗಲಿಲ್ಲ. ಕೊನೆಗೆ, ಶಾಮನೂರು ಕೆರೆಗೆ ಶವ ಎಸೆದು ಬಿಟ್ಟರು. ಈ ದೃಶ್ಯವನ್ನು ದೂರದಿಂದ ನೋಡಿದ ಕೆಲವು ರೈತರು ಕಾರಿನ ಬಳಿ ಓಡಿ ಬರುವಷ್ಟರಲ್ಲಿ ಇವರು ಪರಾರಿಯಾಗಿದ್ದರು. ಆದರೆ ಅಲ್ಲಿನ ಜನ ಎಸೆದ ಕಲ್ಲೇಟಿಗೆ ಕಾರಿನ ಹಿಂದಿನ ಗಾಜು ಜಖಂಗೊಂಡಿತು.
ಸಿಂಗ್ ದೂರವಾಣಿ ಕರೆಗೆ ಸ್ಪಂದಿಸದೆ ಇದ್ದಾಗ ಅವರ ಕುಟುಂಬದವರು ಗಾಬರಿಗೊಂಡು ಬೆಂಗಳೂರಿಗೆ ಬಂದರು. ಚಂದನ್ನನ್ನು ವಿಚಾರಿಸಿದರೆ, ತಾನು ಅಂದು ಬೆಳಿಗ್ಗೆ ಹೋಟೆಲ್ಗೆ ಹೋಗಿದ್ದಾಗ ಅವರು ಅಲ್ಲಿರಲೇ ಇಲ್ಲ ಎಂದ. ಅಷ್ಟೇ ಅಲ್ಲ. ಅವರನ್ನು ಹುಡುಕಲು ಆ ಕುಟುಂಬಕ್ಕೆ ಸಹಾಯ ಮಾಡುವಂತೆ ನಟಿಸಿದ. ಹಾಗಾಗಿ ಆತನ ಬಗ್ಗೆ ಯಾರಿಗೂ ಅನುಮಾನವೇ ಬರಲಿಲ್ಲ. ದಾವಣಗೆರೆಯ ಪೊಲೀಸ್ ತಂಡ ಆತನ ವಿಚಾರಣೆ ನಡೆಸಿ ಹೋಯಿತು. ಬೆಂಗಳೂರಿನ ವಿಶೇಷ ತನಿಖಾ ತಂಡವೂ ವಿಚಾರಿಸಿ, ಆತ ಎಂದು ನಿರ್ಧರಿಸಿತು. ಹಾಗಾಗಿ ತನಿಖೆ ಬೇರೆ ದಿಕ್ಕಿನಲ್ಲಿ ಸಾಗತೊಡಗಿತು.
ಈ ನಡುವೆ ನನ್ನ ಠಾಣೆ ವ್ಯಾಪ್ತಿಯ ಚರ್ಚ್ ಸ್ಟ್ರೀಟ್ನ ರಸ್ತೆಯೊಂದರಲ್ಲಿ ಬಿಟ್ಟು ಹೋಗಿದ್ದ ಕಾರೊಂದು ಗಮನಕ್ಕೆ ಬಂತು.
(ಮುಂದುವರೆಯುವುದು)















