ಕಲ್ಪ ಮೀಡಿಯಾ ಹೌಸ್ | ತಿರುಮಲ |
ದೇವರಲ್ಲಿ ನಾವು ಬೇಡುವುದಾದರೆ ದೊಡ್ಡ ದೊಡ್ಡ ಸಂಗತಿಗಳನ್ನು ಮಾತ್ರ ಬೇಡಬೇಕು ಎಂದು ಶ್ರೀಮನ್ ಮಧ್ವಾಚಾರ್ಯ ಮಹಾ ಪರಂಪರೆಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ತಿರುಮಲ ತಿರುಪತಿ ದೇವಸ್ಥಾನಗಳ Thirupathi Thirumala Temple ವತಿಯಿಂದ ಶನಿವಾರ ಆಯೋಜಿಸಿದ್ದ ಗೌರವ ಸನ್ಮಾನ ಸ್ವೀಕರಿಸಿದ ನಂತರ ಅವರು ಸಂದೇಶ ನೀಡಿದರು.

ಆಚಾರ್ಯ ಮಧ್ವರ ಪರಂಪರೆಯ ಮೇರು ಪಂಕ್ತಿಯ ಯತಿಗಳಾದ ಶ್ರೀ ವ್ಯಾಸರಾಜರು ತಿರುಪತಿ ತಿಮ್ಮಪ್ಪನನ್ನು ಅನನ್ಯವಾಗಿ ಆರಾಧಿಸಿದರು. ಇಲ್ಲಿಯೇ ನೆಲೆ ನಿಂತು ಪೂಜಾ ಕೈಂಕರ್ಯ ಸಮರ್ಪಿಸಿದರು. ಮತ್ತೆ ಪೂಜಾ ಹಕ್ಕುಗಳನ್ನು ಇಲ್ಲಿನ ಅರ್ಚಕ ವೃಂದಕ್ಕೆ ಬಿಟ್ಟುಕೊಟ್ಟು ಆದರ್ಶ ಮೆರೆದರು. ಹಾಗಾಗಿ ಮಾಧ್ವ ಪೀಠಾಧಿಪತಿಗಳಿಗೆ ತಿಮ್ಮಪ್ಪನ ಸನ್ನಿಧಾನದಲ್ಲಿ ವಿಶೇಷ ಗೌರವಾದರ ಇಂದಿಗೂ ಲಭ್ಯವಿದೆ ಎಂದರು.
ಬೇಡುವುದು ನಮ್ಮ ಹಕ್ಕು. ಹಾಗಾಗಿ ಲೋಕದ ಪಾಲಕನಾದ ತಿರುಪತಿ ತಿಮ್ಮಪ್ಪನಲ್ಲಿ ಜ್ಞಾನ ಮತ್ತು ಮೋಕ್ಷವನ್ನು ಕೇಳೋಣ. ಮಾನವ ಜನ್ಮ ದೊರಕಿರುವಾಗ ಇದಕ್ಕಿಂತ ದೊಡ್ಡ ಬೇಡಿಕೆ ಇನ್ನಾವುದೂ ಇಲ್ಲ ಎಂಬುದನ್ನು ಅರಿಯೋಣ ಎಂದರು.

ಮಹಾಭಾಗ್ಯ ನಮ್ಮ ಬಳಿಗೇ ಬಂದಾಗ ನಾವು ಮಹೋನ್ನತವಾದದ್ದನ್ನೇ ದೇವರಲ್ಲಿ ಪಡೆದುಕೊಂಡು ಮರಳಬೇಕು ಎಂದವರು ಆಶಿಸಿದರು.
ತಿಮ್ಮಪ್ಪ ಕಾಂಚನಬ್ರಹ್ಮ. ನಮ್ಮ ಉಡುಪಿ ಕೃಷ್ಣ ಅನ್ನಬ್ರಹ್ಮ. ತಿರುಪತಿಯ ಒಂದು ಅಂಶವೇ ನಮ್ಮ ಆರಾಧ್ಯದೈವ ಉಡುಪಿ ಕೃಷ್ಣನಲ್ಲೂ ಇದೆ. ಆತನ ಸನ್ನಿಧಿಯವರಾದ ನಮಗೆ ತಿಮ್ಮಪ್ಪನೇ ಕರೆಸಿಕೊಂಡಿರುವುದು ಮಾಧ್ವ ಪೀಠಗಳಿಗೆ ಹೆಮ್ಮೆ ಮತ್ತು ಮಹಾನುಗ್ರಹ ಎಂದು ಭಾವಿಸಿದ್ದೇವೆ ಎಂದರು.

ವೆಂಕಟೇಶ್ವರನಲ್ಲಿ ಏನು ಬೇಡಬೇಕು ಎಂಬುದಕ್ಕೆ ಸೋಂದಾ ಶ್ರೀ ವಾದಿರಾಜರು ಎಲ್ಲರಿಗೂ ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದಾರೆ. ಸಿರಿ ನಿವಾಸನಲ್ಲಿ ಜ್ಞಾನವನ್ನು ಬೇಡಿದರೆ ಅದರ ಹಿಂದೆ ಎಲ್ಲ (ಪಾರಮಾರ್ಥಿಕ ಮತ್ತು ಲೌಕಿಕ) ಸುಖ ಭೋಗಗಳೂ ಹಿಂಬಾಲಿಸಿ ಬರುತ್ತವೆ. ಇದನ್ನು ಅರ್ಥ ಮಾಡಿಕೊಂಡರೆ ಮಾತ್ರ ತಿರುಪತಿ, ತಿರುಮಲದ ಯಾತ್ರೆ ಸಾರ್ಥಕ್ಯ ಪಡೆಯುತ್ತದೆ ಎಂದು ಶ್ರೀಗಳು ಭಕ್ತಗಣಕ್ಕೆ ಸಲಹೆ ನೀಡಿದರು.
ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರಿಗೆ ಟಿಟಿಡಿ ವತಿಯಿಂದ ಛತ್ರ, ಚಾಮರ ಮತ್ತು ಮಂಗಳವಾದ್ಯ ಸಮೇತ ಸ್ವಾಗತ ನೀಡಿ, ತಿಮ್ಮಪ್ಪನ ದರುಶನ ಮಾಡಿಸಿ, ಶೇಷ ವಸ ಸಮರ್ಪಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮಠದ ಸುಗುಣಮಲಾ ಸಂಪಾದಕ ಮಹಿತೋಷ ಆಚಾರ್ಯ, ಪುತ್ತಿಗೆ ಮಠದ ಪ್ರಮುಖರಾದ ರತೀಶ ಆಚಾರ್ಯ, ನಾಗರಾಜಾಚಾರ್ಯ ಇತರರು ಹಾಜರಿದ್ದರು.










Discussion about this post