ಉಡುಪಿ, ಸೆ.28: ಬಂಟಕಲ್ಲಿನ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವರೆಡ್ ಕ್ರಾಸ್ ವಿಭಾಗ ಹಾಗೂ ರೋಟರ್ಯಾಕ್ಟ್ ಘಟಕಗಳ ಸುಮಾರು 150 ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಸೆಪ್ಟೆಂಬರ್ 25 ರಂದು ರಾಷ್ಟ್ರೀಯ ಸೇವಾ ದಿವಸದ ಅಂಗವಾಗಿ ಉಡುಪಿಯಲ್ಲಿರುವ ವಿಶೇಷ ಮಕ್ಕಳ ಶಾಲೆ ಆಶಾನಿಲಯಕ್ಕೆ ಬೇಟಿ ನೀಡಿ ವಿಶೇಷ ಮಕ್ಕಳೊಂದಿಗೆ ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ವಿಶೇಷ ಮಕ್ಕಳ ಜೊತೆ ಬೆರೆತು ಅವರಿಗಾಗಿ ವಿವಿಧ ರೀತಿಯ ಆಟೋಟ ಸ್ಪರ್ಧೆ, ಸಂಗೀತ, ನೃತ್ಯಗಳನ್ನು ಹಾಗೂ ಇನ್ನಿತರ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ಸುಸಂದರ್ಭದಲ್ಲಿ ಆಶಾನಿಲಯದ ಶಾಲೆಯ ಕಟ್ಟಡ ಅಭಿವೃದ್ಧಿಗಾಗಿ ಕಾಲೇಜಿನ ವಿದ್ಯಾರ್ಥಿಗಳಿಂದ, ಸಿಬ್ಬಂದಿಗಳಿಂದ ಹಾಗೂ ಶಿಕ್ಷಕ-ಶಿಕ್ಷಕಿಯರಿಂದ ಸಂಗ್ರಹಿಸಲಾದ ಮೊತ್ತವನ್ನು ಹಾಗೂ ವಿವಿಧ ರೀತಿಯ ಆಟಿಕೆಗಳು, ಪುಸ್ತಕಗಳು, ಬಟ್ಟೆಗಳನ್ನು ದಾನವಾಗಿ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ಮುಖ್ಯಸ್ಥರಾದ ಶ್ರೀ ನಾಗರಾಜ ರಾವ್ರವರು ಪ್ರಬಾರ ಕಾರಯನಿರ್ವಾಹಕಿಯಾದ ಶ್ರೀಮತಿ ಗ್ರೇಸಿಯವರಿಗೆ ಹಸ್ತಾಂತರಿಸಿದರು. ಉಪನ್ಯಾಸಕರಾದ ಶ್ರೀ ನಾರಾಯಣ ನಾಯಕ್, ಸೌಮ್ಯ ಭಟ್, ರೇಶ್ಮ ಹೆಬ್ಬಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಆಶಾನಿಲಯದ ಸುತ್ತಮುತ್ತಲಿನ ಪರಿಸರವನ್ನು ಶುಚಿಗೊಳಿಸುವುದರ ಮೂಲಕ ರಾಷ್ಟ್ರೀಯ ಸೇವಾ ದಿನವನ್ನು ಸ್ಮರಣೀಯ ರೀತಿಯಲ್ಲಿ ಆಚರಿಸಿದರು. ಶ್ರೀಮತಿ ಗ್ರೇಸಿಯವರು ಸಂಸ್ಥೆಗೆ ಹಾಗೂ ಎಲ್ಲಾ ಸ್ವಯಂಸೇವಕರಿಗೆ ತಮ್ಮ ಮನದಾಳದ ಕೃತಜ್ಙತೆಯನ್ನು ಸಲ್ಲಿಸಿದರು.
Discussion about this post