ಬೆಂಗಳೂರು, ಅ.5: ಕಳಪೆ ಗುಣಮಟ್ಟದ ಪಡಿತರವನ್ನು ವಿತರಣೆ ಮಾಡಿದರೆ ನ್ಯಾಯ ಬೆಲೆ ಅಂಗಡಿ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಪಡಿತರದಲ್ಲಿ ಕಳಪೆ ಗುಣಮಟ್ಟವಿದ್ದರೆ ಅದನ್ನು ವಿತರಿಸದೆ ಮಳಿಗೆಗಳಿಗೆ ಹಿಂದಿರುಗಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳಪೆ ಆಹಾರ ಧಾನ್ಯಕ್ಕೆ ದಾಸ್ತಾನು ಮಳಿಗೆಯ ವ್ಯವಸ್ಥಾಪಕರನ್ನೇ ಹೊಣೆ ಮಾಡಲಾಗುವುದು. ರಾಜ್ಯದೆಲ್ಲೆಡೆ ಕೂಪನ್ ವಿತರಣೆ ಕೇಂದ್ರಗಳನ್ನು ಹೆಚ್ಚಿಸಲಾಗುತ್ತಿದೆ. ಆಧಾರ್ ನೋಂದಣಿ ಸಮಯದಲ್ಲಿ ನೀಡಿರುವ ಮೊಬೈಲ್ ಸಂಖ್ಯೆಯಲ್ಲೆ ಪಡಿತರ ಚೀಟಿಗೆ ಸಂಬಂಧಿಸಿದ ಸಂದೇಶ ಕಳಿಸಬೇಕು. ಒಂದು ವೇಳೆ ಮೊಬೈಲ್ ನಂಬರ್ ಬದಲಾಗಿದ್ದರೆ, ಆಧಾರ್ ಸಂಖ್ಯೆ ಜತೆ ಬದಲಾಯಿಸಿಕೊಳ್ಳಬೇಕು ಎಂದರು.
ಪಡಿತರ ಚೀಟಿದಾರರಿಗೆ ಗೋಧಿ ಬದಲು ಅಕ್ಕಿಯನ್ನೇ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ಪಡಿತರ ಚೀಟಿದಾರರ ಪ್ರತೀ ಯೂನಿಟ್ ಗೆ 3 ಕೆ.ಜಿ.ಅಕ್ಕಿ, 2 ಕೆ.ಜಿ.ಗೋಧಿ ನೀಡಲಾಗುತ್ತಿದ್ದು ಈಗ ಗೋಧಿ ಪಡೆಯುವುದು ಕಡ್ಡಾಯವಲ್ಲ. 5 ಕೆ.ಜಿ. ಅಕ್ಕಿಯನ್ನೇ ಪಡೆಯಬಹುದು. ರಾಗಿ ನೀಡುವಿಕೆ ಮುಂದುವರಿಯಲಿದೆ ಎಂದು ತಿಳಿಸಿದರು.
ಅವ್ಯವಹಾರ ನಡೆದಿಲ್ಲ: ಕರ್ನಾಟಕ ರಾಜ್ಯ ಏಡ್ಸ್ ಪ್ರೆಫಿಷನಲ್ ಸೊಸೈಟಿ ವತಿಯಿಂದ ಹೆಚ್ಐವಿ ಮತ್ತು ಏಡ್ಸ್ ತಡೆಗಟ್ಟುವ ಕಾರ್ಯಕ್ರಮದಲ್ಲಿ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟ ಪಡಿಸಿದ ಅವರು, ಈ ಸಂಬಂಧ ಆರೋಗ್ಯ ಸಚಿವರಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಬಿಬಿಎಂಪಿ ಸದಸ್ಯ ಎನ್.ಆರ್. ರಮೇಶ್ ಅವರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅದು ರಾಜಕೀಯ ಪ್ರೇರಿತ ಎಂದು ತಳ್ಳಿ ಹಾಕಿದರು.
Discussion about this post