ಬೆಂಗಳೂರು, ಅ.3: ಕಾವೇರಿ ಕೊಳ್ಳದ ಜಲಾಶಯಗಳ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬೇಕು ಎಂಬ ಈ ಮೊದಲಿನ ನಿರ್ಣಯವನ್ನು ಇಂದು ನಡೆದ ವಿಶೇಷ ವಿಧಾನಮಂಡಲ ಪರಿಷ್ಕರಣೆ ಮಾಡಿ, ರೈತರ ಹಿತ ರಕ್ಷಣೆಗಾಗಿಯೂ ನೀರು ಬಳಸಿಕೊಳ್ಳಲು ನಿರ್ಣಯ ಅಂಗೀಕರಿಸಲಾಯಿತು.
ಸುಪ್ರೀಂಕೋರ್ಟ್ ತೀರ್ಪು ಪಾಲನೆ ಮಾಡದೇ ಇರುವುದರಿಂದ ನ್ಯಾಯಾಂಗ ನಿಂದನೆಗೆ ಗುರಿಯಾಗುವ ಆತಂಕದಿಂದ ರಾಜ್ಯ ಸರ್ಕಾರ ಮತ್ತೊಮ್ಮೆ ಜಾಣ ನಡೆಯನ್ನು ಅನುಸರಿಸಿದ್ದು, ಜನ, ಜಾನುವಾರುಗಳ ಮತ್ತು ರೈತರ ಹಿತ ರಕ್ಷಣೆಗೆ ನೀರನ್ನು ಬಳಕೆ ಮಾಡಲು ಅನುಕೂಲವಾಗುವಂತೆ ನಿರ್ಣಯ ಕೈಗೊಳ್ಳಲಾಗಿದೆ.
ಹಾಲಿ ಜಲಾಶಯಗಳಲ್ಲಿರುವ ಹೆಚ್ಚುವರಿ ನೀರನ್ನು ಜಲಾನಯನದ ನಾಲೆಗಳಿಗೆ ಬಿಟ್ಟರೆ ಆ ನೀರು ಮತ್ತೆ ನದಿ ಮೂಲಕ ತಮಿಳುನಾಡಿಗೆ ಹರಿಯುತ್ತದೆ. ಸುಪ್ರೀಂಕೋರ್ಟ್ ಹೇಳಿರುವಂತೆ ನೀರು ಹರಿಸಿದಂತಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಸರ್ಕಾರ ಇದೆ.
ಕುಡಿಯುವ ನೀರನ್ನು ಹೊರತುಪಡಿಸಿ ಉಳಿದ ಹೆಚ್ಚುವರಿ ನೀರನ್ನು ಈ ರೀತಿ ತಮಿಳುನಾಡಿಗೆ ಬಿಡುವ ಮೂಲಕ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡದಂತೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.
ಈ ಬಗ್ಗೆ ಸುದೀರ್ಘವಾಗಿ ಉಭಯ ಸದನಗಳಲ್ಲಿ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ.ಕಾವೇರಿ ಕೊಳ್ಳದ ಜಲಾಶಯಗಳಾದ ಕೆಆರ್ಎಸ್, ಹೇಮಾವತಿ, ಹಾರಂಗಿ, ಕಬಿನಿ ಜಲಾಶಯಗಳಲ್ಲಿನ ನೀರನ್ನು ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕೆಂದು ಕಳೆದ ಬಾರಿ ನಡೆದ ವಿಶೇಷ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
ಆದರೆ ಸುಪ್ರೀಂಕೋರ್ಟ್ ನಿರ್ಣಯವೇನೇ ಇರಲಿ ಅ.1 ರಿಂದ 6ರವರೆಗೆ ಪ್ರತಿದಿನ ಆರು ಸಾವಿರ ಕ್ಯೂಸೆಕ್ ನೀರು ಹರಿಸಬೇಕು.ನಾಲ್ಕು ದಿನಗಳೊಳಗಾಗಿ ನೀರು ನಿರ್ವಹಣಾ ಮಂಡಳಿ ರಚಿಸಬೇಕೆಂದು ಆದೇಶ ನೀಡಿತ್ತಲ್ಲದೆ, ರಾಜ್ಯ ಸರ್ಕಾರಕ್ಕೆ ಕೊನೆಯ ಅವಕಾಶವೆಂದು ಕಟ್ಟಪ್ಪಣೆ ಮಾಡಿತ್ತು. ಇದರಿಂದ ಕಂಗಾಲಾದ ರಾಜ್ಯ ಸರ್ಕಾರ ಮತ್ತೆ ವಿಶೇಷ ಅಧಿವೇಶನ ಕರೆದಿತ್ತು. ಇಂದು ಬೆಳಗ್ಗೆ ರಾಜ್ಯ ಸರ್ಕಾರ ತೀರ್ಪು ಪರಿಷ್ಕರಣೆಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸೆ.30ರಂದು ನೀಡಲಾಗಿರುವ ಆದೇಶ ಪಾಲನೆಯಾಗಿರುವ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ತಾಕೀತು ಮಾಡಿದೆ. ಮತ್ತೆ ನೀರು ಬಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಲು ಕಷ್ಟವಾಗಿರುವುದರಿಂದ ವಿಧಾನಸಭೆಯಲ್ಲಿ ಈ ಮೊದಲು ಕೈಗೊಂಡ ನಿರ್ಣಯವನ್ನು ಮಾರ್ಪಾಡು ಮಾಡಿಕೊಳ್ಳಲಾಗಿದೆ.
ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಕೈಗೊಂಡ ನಿರ್ಧಾರಕ್ಕೆ ಬದ್ಧರಾಗಿರಬೇಕೆಂದು ಪ್ರತಿಪಕ್ಷಗಳು ಹೇಳುತ್ತಿವೆ. ನೀರು ಬಿಡುವ ನಿರ್ಧಾರ ಕೈಗೊಂಡರೆ ಪ್ರತಿಪಕ್ಷಗಳು ಸರ್ಕಾರಕ್ಕೆ ಸಹಕಾರ ನೀಡುವ ಸಾಧ್ಯತೆ ಕಡಿಮೆ ಇದೆ. ಹಾಗಾಗಿ ತಮಿಳುನಾಡಿಗೆ ನೀರು ಬಿಡುವುದಕ್ಕಿಂತ ನಮ್ಮ ನಾಲೆಗಳಿಗೆ ನೀರು ಹರಿಸುವುದು. ಅದರಿಂದ ಬರುವ ಬಸಿನೀರು ಹಾಗೂ ನಾಲೆ ನೀರು ಸೇರಿ ತಮಿಳುನಾಡಿಗೆ ಹರಿಯುತ್ತದೆ ಎಂಬ ಲೆಕ್ಕಾಚಾರ ಸರ್ಕಾರದ್ದಾಗಿದೆ.
Discussion about this post