ಲಕ್ನೌ:ಅ: 24:ಮುಸ್ಲಿಂ ಸಮುದಾಯದ ತ್ರಿವಳಿ ತಲಾಕ್ ನ್ನು ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಮುಸ್ಲೀಂ ಸಹೋದರಿಯರೂ ಸಮಾನ ಹಕ್ಕುಗಳನ್ನು ಪಡೆಯಬೇಕು. ಅವರ ಹಕ್ಕುಗಳನ್ನೂ ನಾವು ರಕ್ಷಿಸಬೇಕು. ಈ ವಿಚಾರದಲ್ಲಿ ರಾಜಕೀಯಬೇಡ ಎಂದು ಪ್ರತಿಪಾದಿಸಿದ್ದಾರೆ.
ಉತ್ತರ ಪ್ರದೇಶದ ಬುಂದೇಲಖಂಡದ ಮಹೋಬಾದಲ್ಲಿ ನಡೆದ ಬಿಜೆಪಿ ಮಹಾಪರಿವರ್ತನ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ, ತ್ರಿವಳಿ ತಲಾಕ್ ವಿಚಾರವನ್ನು ಹಿಂದೂ ವಿರುದ್ಧ ಮುಸ್ಲೀಂ ಅಥವಾ ಬಿಜೆಪಿ ವಿರುದ್ಧ ಇತರ ಪಕ್ಷಗಳ ವಿವಾದವನ್ನಾಗಿ ಮಾಡಬೇಡಿ ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ತನ್ನ ಹೇಳಿಕೆಯಲ್ಲಿ ಮಹಿಳೆಯರ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆಯಬಾರದು ಮತ್ತು ಧರ್ಮದ ಆಧಾರದಲ್ಲಿ ಯಾವುದೇ ತಾರತಮ್ಯವಿರಕೂಡದು ಎಂದು ಸ್ಪಷ್ಟವಾಗಿ ತಿಳಿಸಿದೆ. ಮತಧರ್ಮದ ಹೆಸರಿನಲ್ಲಿ ಅಸಮಾನತೆಗೆ ಅವಕಾಶ ಕೊಡಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ ಎಂದರು.
ಸಂವಿಧಾನಕ್ಕೆ ತಕ್ಕಂತೆ ಸರ್ಕಾರ ಕೆಲಸ ಮಾಡಲಿದೆ ಮತ್ತು ನ್ಯಾಯಾಂಗ ಕೂಡ ಅದನ್ನೇ ಅಪೇಕ್ಷಿಸುತ್ತದೆ ಎಂದಿರುವ ಪ್ರಧಾನಿ ಮೋದಿ, ಎಲ್ಲರಿಗು ಸಮಾನತೆ ನೀಡಲು ತಮ್ಮ ಸರ್ಕಾರ ಬದ್ಧ ಎಂದಿದ್ದಾರೆ. ತ್ರಿವಳಿ ತಲಾಕ್ ವಿಷಯವನ್ನು ರಾಜಕೀಯವನ್ನಾಗಿ ಮಾಡುತ್ತಿದ್ದು, ಈ ವಿಚಾರದಲ್ಲಿ ಕೆಲವು ರಾಜಕೀಯ ಪಕ್ಷಗಳು ಮತ ಬ್ಯಾಂಕ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿವೆ ಎಂದು ವಾಗ್ದಾಳಿ ನಡೆಸಿದರು.
ದೂರವಾಣಿಯಲ್ಲಿ ಮೂರು ಬಾರಿ ತಲಾಖ್ ಎಂದು ಹೇಳಿ ನಮ್ಮ ಮುಸ್ಲೀಂ ಸಹೋದರಿಯರಿಗೆ ವಿವಾಹ ವಿಚ್ಚೇಧನ ನೀಡುವ ವ್ಯವಸ್ಥೆಯನ್ನು ನಾವು ಒಪ್ಪಿಕೊಳ್ಳುವುದು ಹೇಗೆ? ಎಂದು ಪ್ರಶ್ನಿಸಿರುವ ಅವರು, ತ್ರಿವಳಿ ತಲಾಕ್ ನಿಂದ ಮುಸ್ಲೀಂ ಸಹೋದರಿಯರ ಬದುಕೇ ಹಾಳಾಗುತ್ತದೆ. ಇದನ್ನು ಕೋಮಿನ ಕಣ್ಣಿನಲ್ಲಿ ನೋಡಬಾರದು, ಎಲ್ಲರಿಗೂ ಸಮಾನತೆ ತರುವ ದೃಷ್ಟಿಯಿಂದ ಚಿಂತಿಸಬೇಕು ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಚರ್ಚೆಗಳು ನಡೆಯಬೇಕು. ಸರ್ಕಾರ ತನ್ನ ನಿಲುವನ್ನು ಮಂಡಿಸಿದೆ ತ್ರಿವಳಿ ತಲಾಕ್ ನಿಂದ ವಿಷಯಾಂತರಿಸುವವರು ಜನತೆಯನ್ನು ಪ್ರಚೋದಿಸುತ್ತಿದ್ದಾರೆ. ತ್ರಿವಳಿ ತಲಾಕ್ ನಿಂದ ದೇಶದ ಮುಸ್ಲೀಂ ಮಹಿಳೆಯರ ಬದುಕು ಹಾಳಾಗಲು ಬಿಡುವುದಿಲ್ಲ. ಮುಸ್ಲೀಂ ಮಹಿಳೆಯರ ಹಕ್ಕನ್ನೂ ನಾವು ರಕ್ಷಿಸಬೇಕು. ಅವರೂ ಸಮಾನ ಹಕ್ಕುಗಳನ್ನು ಪಡೆಯಬೇಕು ಎಂದರು.
ರಾಜಕೀಯ ಮತ್ತು ಚುನಾವಣೆ ತಮ್ಮದೇ ಆದ ಸ್ಥಾನಗಳನ್ನು ಹೊಂದಿವೆ. ಆದರೆ ಮುಸ್ಲೀಂ ಮಹಿಳೆಯರಿಗೆ ಸಂವಿಧಾನದ ಪ್ರಕಾರ ಅವರ ಹಕ್ಕು ದೊರೆಯುವಂತೆ ಮಾಡುವುದು ಸರ್ಕಾರದ ಮತ್ತು ದೇಶದ ಜನತೆಯ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಹೆಣ್ಣು ಭ್ರೂಣಹತ್ಯೆಯನ್ನು ಖಂಡಿಸಿದ ಪ್ರಧಾನಿ, ಹೆಣ್ಣು ಭ್ರೂಣಹತ್ಯೆ ಪಾಪದ ಕೆಲಸ. ಇದನ್ನು ನಿಲ್ಲಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.
=
Discussion about this post