Read - 2 minutes
ಮೈಸೂರು, ಅ.9: “ಇಲ್ಲಿ ಕಾವೇರಿ, ಅಲ್ಲಿ ಮಹದಾಯಿ, ದೂರದಲಿ ರಾವಿ ಸೌಹಾರ್ದ, ಸಂಧಾನ ವಿಫಲವಾಯಿತು ತಾಯೇ”
ಕವಯಿತ್ರಿ ನೀಲಗಂಗಾ ಚರಂತಿ ಮಠರವರ ಕವನ ವಚನದೊಂದಿಗೆ ಎರಡನೇ ದಿನದ ದಸರಾ ಕವಿಗೋಷ್ಟಿ ಸಂಪೂರ್ಣವಾಗಿ ರಾಜ್ಯದ ನೆಲ,ಜಲ, ನುಡಿ, ಮಹಿಳೆಯರ ಸಮಸ್ಯೆಗಳನ್ನೇ ಅನಾವರಣಗೊಳಿಸಿತು. ಇದರೊಟ್ಟಿಗೆ ಬರದ ಛಾಯೆ, ಗಡಿಯ ಆಪತ್ತುಗಳನ್ನು ಕಳವಳವೂ ಗೋಷ್ಠಿಯಲ್ಲಿ ವ್ಯಕ್ತವಾಯಿತು.
ಇನ್ನು ಕವಿ ಶರಣಪ್ಪ ಗಬ್ಬೂರ, “ನೀರಿಗಾಗಿ ಅಲೆದ ಅನ್ನದಾತನಿಗೆ, ಪೋಲಿಸರ ಗುಂಡೇಟು”, “ರಾವಣ ರಾಜಕಾರಣಿಗಳ ಸಂಘರ್ಷದಿಂದ ದೇಶ ದೇಶಗಳ ನಡುವೆ ಉರಿ ಉರಿಯಾಗುತ್ತಿರುವುದನ್ನು ಕಂಡು, ತನ್ನ ತನವನ್ನೆ ಕಳೆದುಕೊಂಡು ಕವಿತೆ ನೊಂದುಕೊಂಡು..! ಸಾಲಿನ ಕವನ ಓದಿ ದೇಶದಲ್ಲಿನ ಗಡಿ ದಳ್ಳುರಿ, ಸಂಘರ್ಷ, ದೇಶದ ಈಗಿನ ಸ್ಥಿತಿ ಕಂಡು ಮಮ್ಮಲ ಮರುಗಿದರು.
ಹೀಗೆ ದಸರಾ ಕವಿಗೋಷ್ಠಿ ಆಯೋಜಿಸಿದ್ದ ಪ್ರಧಾನ ಕವಿಗೋಷ್ಠಿಯಲ್ಲಿ ಸಾಲು ಸಾಲು ಕವಿತೆಗಳು ಕವಿತೆಯ ಲೋಕದಲ್ಲಿ ಪ್ರಸ್ತುತ ವಿಷಯಗಳ ವಿದ್ಯಮಾನಗಳ ಅಲೆ ಹರಡಿತು. ಕೃಷ್ಣ ಜನಮನ ಅವರು “ನಾನೊಮ್ಮೆ ಬಸವನನ್ನು ಹುಡುಕುತ್ತಿದ್ದೆ, ಬಸವ ಹರಳಯ್ಯ ಮಧುವರಸರ ಮಗ ಮಗಳಿಗೆ ಮದುವೆ ಮಾಡಿಸುತ್ತಿದ್ದರು. ಕುತೂಹಲದಿಂದ ಕಿಟಕಿಯಿಂದ ಸ್ವಲ್ಪ ಇಣುಕಿ ನೋಡಿದೆ, ಮದುವೆಗೆ ಬಂದಿದ್ದ ಕೇವಲ ಹತ್ತಿಪ್ಪತ್ತು ಜನರಲ್ಲಿ ಅಂಬೇಡ್ಕರ್ರೂ ಮುಂದಿನ ಸಾಲಿನಲ್ಲಿ ಕೂತಿದ್ದವರು……… ಎಂದು ಸಮಾಜದಲ್ಲಿನ ಜಾತಿಯತೇ ಅಂತರವನ್ನು ತಿಳಿಸಿಕೊಟ್ಟರು.
ಸಿದ್ದರಾಜ ಪೂಜಾರಿ ಅವರು “ನಾಗರಿಕತೆಯ ಚಿತ್ರಗಳು ಕವಿತೆಯಲ್ಲಿ ಸ್ವರ್ಗ ಸದೃಶ ನಮ್ಮ ಕಾಶ್ಮೀರದ ರಸ್ತೆಗಳ ಎರಡೂ ಬದಿಗೆ ಕೆಂಪು ಕಾರ್ಪೆಟ್ ಹಾಸಿಗೆ ಹಾಸಿದ ಹಾಗೆ ಗುಲ್ಮೊಹರ್ ಹೂಗಳು ಈಗಲೂ ಸುಳಿಯುತ್ತಿವೆ. ಆದರೆ, ಆ ರಸ್ತೆಗಳ ದಾರಿಯಲ್ಲಿ ಸಾಗಲು ಎಲ್ಲರೂ ಭಯ ಪಡುತ್ತಾರೆ ಎಂಬ ಸಾಲುಗಳು ಕಾಶ್ಮೀರಿ ಸಂಘರ್ಷವನ್ನು ಪರಿಸ್ಥಿತಿ ಬಿಚ್ಚಿಟ್ಟರು.
ಸುಕನ್ಯಾ ಅವರು ಕೇಳಮ್ಮ ಕವನ ಓದಿ, ಯಾಕಮ್ಮ ಹೋದೆ ಭುವಿಯ ಒಳಗೆ ಒಬ್ಬಳೇ, ಕರದುಕೊಂಡು ಹೋಗಬಾರದಿತ್ತೆ ಹೆಣ್ಣು ಜಾತಿಯನ್ನೇ? ಅಮ್ಮಾ ವೈದೇಹಿ ಮೈಥಿಲಿ, ಸೀತೆ, ಎಲ್ಲ ನಿನ್ನ ಹೆಸರು, ಹೀಗೊಂದು ನಿನ್ನ ನೆನಪಲಿ ತಾಯೇ ನನ್ನ ಕಣ್ಣೀರು ಎಂದು ಎಂದಿನಿಂದಲೂ ಮುಂದುವರಿದಿರುವ ಮಹಿಳೆಯರ ಮೇಲಿನ ಶೋಷಣೆಗೆ ಕೊರಗಿದರು.
ಸುಜಾತ ಅವರು, ಆ ಮತ ಈ ಮತ ಮನುಜ ಮತ ಇರುವಾಗ ಯಾತಕೆ ಧರ್ಮಗಳು ಹೇಳಿವೆಯೇನು ಉಗ್ರವಾದವನು, ಬದುಕಿಗೆ ಬೆಂಕಿ ಇಟ್ಟರೆ ಏನು ಉಪಯೋಗ…. ಎಂದು ಪ್ರಶ್ನಿಸುವ ಮೂಲಕ ಸಾಮರಸ್ಯದ ಅಗತ್ಯತೆ ಸಾರಿದರು.
ಬಹುತೇಕ ಕವಿಗಳು ನಾಡು, ನುಡಿ ಹಾಗೂ ಜೀವ ಜಲಕ್ಕೆ ಬಂದೊದಗಿರುವ ವಿಪತ್ತನ್ನು ತಮ್ಮದೇ ದಾಟಿಯಲ್ಲಿ ವಿವರಿಸುತ್ತಾ, ಅಸಮಾನತೆಯ ವಿರುದ್ಧ ದನಿ ಎತ್ತತ್ತಾ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ರವರ ಶಾಂತಿ, ಸೌಹಾರ್ದತೆ ಹಾಗೂ ಜಾತ್ಯತೀತ ಮನೋಭಾವ ಪಸರಿಸುವ ಸಂದೇಶ ಸಾರುವ ಮುನ್ನುಡಿಯನ್ನು ಕವಿತೆಯ ಮೂಲಕ ತುಂಬಿದ ಸಭೆಗೆ ನೀಡಿದರು.
ಕವನ ಸ್ವಾದಿಸುವ ಗುಣವಿರಬೇಕು: ನಾಗತಿಹಳ್ಳಿ ಚಂದ್ರಶೇಖರ್
ಕಾವ್ಯವನ್ನು ಸ್ವಾದಿಸಿದವನಿಗೆ ಮಾತ್ರ ಕಾವ್ಯಗಳ ಅರ್ಥವಾಗುತ್ತದೆ. ಆದರೆ ಇಂದು ಕವನ ವಾಚಿಸುವವರಿದ್ದಾರೆಯೇ ಹೊರತು, ಅವುಗಳನ್ನು ಕೇಳುವವರು ಇಲ್ಲವಾಗಿದ್ದು, ಯುವಪಡೆ ಕವಿತೆಗಳ ರಚನೆಗೆ ಮುಂದಾಗಬೇಕಿದೆ ಎಂದು ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಶನಿವಾರ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ನಡೆದ ದಸರಾ ಕವಿಗೋಷ್ಠಿಯ ವಿಶೇಷ ಆಹ್ವಾನಿತರಾಗಿ ಮಾತನಾಡಿದರು. ಬುದ್ಧ, ಬಸವ ಹಾಗೂ ಅಂಬೇಡ್ಕರ್ ರವರ ಸಿದ್ಧಾಂತ ಪ್ರತಿಪಾದಿಸುವ ಕಾವ್ಯಗಳು ಪ್ರಸ್ತುತದಲ್ಲಿ ಮೌಲ್ಯವನ್ನು ತಂದುಕೊಟ್ಟಿದೆ. ಕಾವ್ಯದ ಸ್ವಾದ ಸಿಗಬೇಕಾದರೆ ಪರಿಪೂರ್ಣ ಆಲಿಸುವಿಕೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಹಾಗೂ ಸಾಹಿತಿ ಡಾ. ಎಚ್.ಎಸ್ ವೆಂಕಟೇಶಮೂರ್ತಿ ಮಾತನಾಡಿ, ಕವಿಗಳ ಆಯ್ಕೆಯ ವಸ್ತುವಿನ ವೈವಿಧ್ಯತೆ ತಮ್ಮನ್ನು ಬೆರಗು ಮೂಡಿಸಿರುವುದಾಗಿ ತಿಳಿಸಿದರು. ಕವಿಗಳ ನೇರ ಸ್ಪಂದನೆ, ತಮ್ಮದೇ ಭಾಷಾ ಶೈಲಿ ಹಾಗೂ ವಾಚನ ಧಾಟಿ ಮನಸೋರೆಗೊಳಸಿರುವುದಾಗಿ ಸಂತಸ ವ್ಯಕ್ತಪಡಿಸಿದರು.
ಅನಾದಿ ಕಾಲದಿಂದಲೂ ಕಾಡುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚಲ್ಲುವ ಸಾಲುಗಳು ಹಾಗೂ ಭಾಷೆಯ ಬಿನ್ನತೆ ಕವಿತೆಗಳಿಗೆ ಹೊಸ ಉರುಪನ್ನು ನೀಡಿದೆ.ಪದ್ಯ, ಗದ್ಯ ಹಾಗೂ ಪ್ರಾಂತೀಯ ಭಾಷಾ ವೈವಿಧ್ಯತೆಯ ರೂಪಾಂತಕವಾಗಿರುವ ಕವಿತೆಗಳು ಭಾಷೆಯ ಸಾಂಗತ್ಯದ ಆಯಾಮವನ್ನು ಕಟ್ಟಿಕೊಡುವುದಾಗಿ ವಿವರಿಸಿದರು.
ಖ್ಯಾತ ಕವಿ ಲಲಿತಾ ಸಿದ್ಧಬಸವಯ್ಯ ಮಾತನಾಡಿ, ಕವಯಿತ್ರಿಯರ ಕವಿತೆಗಳ ಹಿಂದೆ ಸಾವಿರಾರು ನೊಂದ ಹೆಣ್ಣು ಮಕ್ಕಳ ಧ್ವನಿ ಅಡಗಿರುತ್ತದೆ ಎಂದು ನುಡಿದರು. ಕಾರ್ಯಧ್ಯಕ್ಷ ಡಾ. ನೀಲಗಿರಿ ತಳವಾರ ಹಾಗೂ ದಸರಾ ಕವಿಗೋಷ್ಠಿ ಉಪ ಸಮಿತಿಯ ಪದಾಧಿಕಾರಿಗಳು ಇದ್ದರು.
Discussion about this post