ನವದೆಹಲಿ, ಅ.12: ಪಾಕಿಸ್ಥಾನದ ಮೇಲೆ ಮತ್ತೊಮ್ಮೆ ತೀಕ್ಷ್ಣ ವಾಗ್ದಾಳಿ ನಡೆಸಿರುವ ಭಾರತ, ಪಾಕಿಸ್ಥಾನವು ವಿಶ್ವಶಾಂತಿಗೆ ದೊಡ್ಡ ಆತಂಕ ತಂದೊಡ್ಡಿದೆ ಎಂದು ವಿಶ್ವಸಂಸ್ಥೆಗೆ ಮನವರಿಕೆ ಮಾಡಿಕೊಟ್ಟಿದೆ.
ಪಾಕಿಸ್ತಾನದ ಅಣ್ವಸ್ತ್ರಗಳ ಅನಿಯಂತ್ರಿತ ಅಭಿವೃದ್ಧಿ ಹಾಗೂ ಜಿಹಾದಿ ಸಮೂಹಗಳು ಮತ್ತು ಆ ದೇಶ ಹೊಂದಿರುವ ಅಪವಿತ್ರ ಮೈತ್ರಿಯ ನಡುವೆ ಅತ್ಯಂತ ಅಪಾಯಕಾರಿ ಸಂಬಂಧವಿದೆ. ಇದರಿಂದ ವಿಶ್ವಕ್ಕೆ ದೊಡ್ಡಮಟ್ಟದಲ್ಲಿ ಆತಂಕ ಎದುರಾಗಿದೆ ಎಂದು ಭಾರತದ ರಾಜತಾಂತ್ರಿಕ ವೆಂಕಟೇಶ್ ವರ್ಮ, ವಿಶ್ವಸಂಸ್ಥೆಗೆ ತಿಳಿಸಿದ್ದಾರೆ.
ಅಣ್ವಸ್ತ್ರ ನಿಶ್ಯಸ್ತ್ರೀಕರಣ ಕುರಿತ ಸಮಾವೇಶದಲ್ಲಿ ಜಮ್ಮು ಮತ್ತು ಕಾಶ್ಮೀರ ವಿಷಯವನ್ನು ವಿನಾಕಾರಣ ಪ್ರಸ್ತಾಪ ಮಾಡಿರುವ ಪಾಕಿಸ್ಥಾನ ದೂತ ತೆಹಮಿನ ಜಾನ್ಜೌ ಅವರಿಗೆ ತಿರುಗೇಟು ನೀಡಿರುವ ವರ್ಮ, ಭಯೋತ್ಪಾದನೆ ಕಿಯಾಶೀಲವಾಗಿ ಉತ್ತೇಜನ ನೀಡುತ್ತಿರುವ ಪಾಕಿಸ್ಥಾನವು ಜಗತ್ತಿನ ಶಾಂತಿ ಮತ್ತು ಸ್ಥಿರತೆಗೆ ದೊಡ್ಡ ಆತಂಕ ಉಂಟು ಮಾಡಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.














