Read - < 1 minute
ಬೆಂಗಳೂರು, ಸೆ.16: ಮಳೆ ಕೊರತೆ ಮಧ್ಯೆ ಬಂಪರ್ ಈರುಳ್ಳಿ ಬೆಳೆ. ಆದರೆ, ರೈತರಿಗೆ ಮಾತ್ರ ಭಾರೀ ನಿರಾಸೆ. ಇದಕ್ಕೆಲ್ಲ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದ್ದರಿಂದ ಉಳ್ಳಾಗಡ್ಡಿಯನ್ನೇ ನಂಬಿದ್ದ ಅನ್ನದಾತನಿಗೆ ಕಣ್ಣೀರು ತರಿಸಿದೆ.
ರಾಜ್ಯದಲ್ಲಿ ಮುಂಗಾರು ವೈಫಲ್ಯವಾಗಿದೆ. ಬಾಗಲಕೋಟೆ, ಬೆಳಗಾವಿ ಹಾಗೂ ಕೊಪ್ಪಳ ಜಿಲ್ಲೆಗಳ ನೀರಾವರಿ ಪ್ರದೇಶದ ರೈತರು ಅಲ್ಪ ನೀರಿನಲ್ಲೂ ಬಂಪರ್ ಈರುಳ್ಳಿ ಬೆಳೆದಿದ್ದಾರೆ. ಇದರಿಂದಾಗಿ ಎಕರೆಗೆ 80 ರಿಂದ 90 ಚೀಲದಂತೆ ಇಳುವರಿಯೂ ಬಂದಿತ್ತು. ಆದರೆ, ಮಾರುಕಟ್ಟೆಯಲ್ಲಿ ಮಾತ್ರ ಉತ್ತಮ ಬೆಲೆಯಿಲ್ಲ. ಕಳೆದ ಬಾರಿ ಕ್ವಿಂಟಾಲ್ ಈರುಳ್ಳಿ 4 ಸಾವಿರದಿಂದ 5 ಸಾವಿರವರೆಗೆ ಮಾರಾಟವಾಗಿತ್ತು. ಆದರೀಗ 300 ರೂಪಾಯಿಗೆ ಕುಸಿದಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.
ಇನ್ನು ಸಾಲಸೋಲ ಮಾಡಿ ಈರುಳ್ಳಿ ಬೆಳೆದ ರೈತರಿಗೆ ಮಾರುಕಟ್ಟೆಯಲ್ಲಿನ ಬೆಲೆಯಿಂದ ಮಾಡಿದ ಖರ್ಚು ಸರಿದೂಗಿಸುವುದು ಕಷ್ಟವಾಗಿದೆ.
ಇನ್ನೊಂದಡೆ ಹೊರ ಜಿಲ್ಲೆಗಳ ಈರುಳ್ಳಿ ಸಾಗಿಸಲು ಪ್ರತಿ ಚೀಲಕ್ಕೆ 150 ರಿಂದ 200 ರೂಪಾಯಿ ವ್ಯಯಿಸಬೇಕಿದೆ. ಹೀಗಾಗಿ ಈರುಳ್ಳಿ ಮಾರಾಟದಿಂದ ಬಂದ ಹಣ ಸಾಗಾಟಕ್ಕೆ ಸಾಕಾಗುವುದಿಲ್ಲ ಎನ್ನುತ್ತಾರೆ ರೈತರು.
ಒಟ್ಟಾರೆ ಮುಂಗಾರು ವೈಫಲ್ಯದ ಮಧ್ಯೆಯೂ ಕಷ್ಟುಪಟ್ಟು ಈರುಳ್ಳಿ ಬೆಳೆದ ರೈತರಿಗೆ ಈ ಬಾರಿ ಮತ್ತೆ ನಿರಾಸೆಯಾಗಿದೆ. ಕೂಡಲೇ ಸರ್ಕಾರ ಬೆಂಬಲ ಬೆಲೆ ಘೋಷಿಸಲಿ ಎನ್ನುವುದು ರೈತರ ಆಗ್ರಹವಾಗಿದೆ.
Discussion about this post