ಹೌದು ಕಳೆದ ಕೆಲದಿನಗಳ ಹಿಂದೆ ಬೆಂಗಳೂರಿನ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ್ದರು ಅಂತಹ ದೇಶದ್ರೋಹಿಗಳನ್ನು ಬಂಧಿಸಬೇಕು ಎನ್ನುವ ಆಗ್ರಹದೊಂದಿಗೆ ಶುರುವಾದ ಪ್ರತಿಭಟನೆಯ ಕಾವು ಹೋರಾಟದ ರೂಪ ಪಡೆದುಕೊಳ್ಳುತ್ತದೆ. ಇತ್ತೀಚಿನ ಕೆಲದಿನಗಳಲ್ಲಿ ದೇಶಭಕ್ತ ಭಾರತೀಯರನ್ನು ಕೆದಕುವ ಉದ್ದೇಶದಿಂದ ಈ ಮೂಲಕ ದೇಶವನ್ನು ಒಡೆಯಬೇಕೆಂದುಕೊಂಡಿರುವ ಕೆಲ ತಲೆಹಿಡುಕರ ಬೆಂಬಲದೊಂದಿಗೆ ಕೆಲವು ಯುವಕರು ‘ದೇಶ ವಿರೋಧಿ’ ಘೋಷಣೆಗಳನ್ನು ಕೂಗುತ್ತಾರೆ. ಇದಕ್ಕೆ ‘ಆಜಾದಿಯ ಕೂಗು’ ಅನ್ನುವ ಹೆಸರುಕೊಟ್ಟು ಅವರನ್ನು ರಾತ್ರೋರಾತ್ರಿ ಹೀರೋ ಮಾಡುವ ಕೆಲವು ಮಹಾಬುದ್ಧಿವಂತರು ಬೇರೆ. “ಯಾರೂ ಇಲ್ಲದ ಕಾಡಲ್ಲಿ ನಾನೇ ರಾಜ” ಅಂತ ಅಂದುಕೊಳ್ಳುವವರಿಗೆ ನಾವೇನೂ ಸಹಾಯ ಮಾಡಲು ಸಾದ್ಯವಿಲ್ಲ.
ಈಗ ನಡೆಯುತ್ತಿರುವ ಹೋರಾಡಕ್ಕೆ ಮೂಲ ಕಾರಣವಾದದ್ದು ಅಲ್ಲಿ ನಡೆದಂತಹ ಒಂದು ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಕಾಶ್ಮೀರೀ ಸಂತ್ರಸ್ತರನ್ನು ಆಹ್ವಾನಿಸುವುದು ಒಂದು ಉತ್ತಮ ನಡೆ. ಈ ಮೂಲಕ ಕಾಶ್ಮೀರದಲ್ಲಿ ಗಡಿಯಾಚೆಗಿನ ಉಗ್ರರು ನೀಡುತ್ತಿರುವ ಉಪಟಳ, ಅದರಿಂದ ಜನಸಾಮಾನ್ಯರು ಅನುಭವಿಸುತ್ತಿರುವ ನೋವು ಇವುಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವುದರ ಮೂಲಕ ಕಾಶ್ಮೀರದ ಸಮಸ್ಯೆಯನ್ನು ರಾಷ್ಟ್ರೀಯ ವಿಷಯವನ್ನಾಗಿಸಿ, ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಪ್ರಯತ್ನ ನಡೆಸಬೇಕು. ಇದರೊಂದಿಗೆ ಭಾರತದ ಇತರ ಪ್ರಜೆಗಳಂತೆಯೇ ಕಾಶ್ಮೀರಿಗಳು ನೆಮ್ಮದಿಯ ಬದುಕು ಕಾಣುವಂತಾಗಬೇಕು ಅನ್ನುವುದು ಭಾರತದಂತಹ ದೇಶದಲ್ಲಿನ ಬಹಳ ಆರೋಗ್ಯಕರ ಬೆಳವಣಿಗೆ. ಆದರೆ ನಮ್ಮ ದುರಾದೃಷ್ಟವೋ ಏನೋ ! ಅಮ್ನೆಸ್ಟಿಯಲ್ಲಿ ನಡೆದ ಘಟನೆ ಸಂಪೂರ್ಣವಾಗಿ ಇದಕ್ಕೆ ತದ್ವಿರುದ್ಧವಾಗಿ ನಡೆಯಿತು. ಅಲ್ಲಿ ಕರೆಸಿದ್ಧ ಕಾಶ್ಮೀರಿಗಳು ಉಗ್ರಗಾಮಿಗಳ ಜಾಗದಲ್ಲಿ ಸೇನೆಯನ್ನು ನಿಲ್ಲಿಸಿದರು. ಪಾಕ್ ಕೊಡುತ್ತಿರುವ ತೊಂದರೆಯನ್ನು ಭಾರತದ ಸರಕಾರಗಳ ತಲೆಗೆ ಕಟ್ಟಿದರು. ಸೇನೆಯ ಜವಾನರಿಗೆ ಬೊಟ್ಟು ಮಾಡುವ ಮೂಲಕ ದೇಶದ ಅಸ್ತಿತ್ವದ ಭರವಸೆಯ ಬುಡಕ್ಕೆ ಕೈ ಹಾಕಿದ್ದರು. “ಕಾಶ್ಮೀರ ನಮ್ಮ ದೇಶದ ಮುಕುಟ” ಎನ್ನುವ ಬದಲಿಗೆ ‘ಕಾಶ್ಮೀರಕ್ಕೆ ಸ್ವಾತಂತ್ರ್ಯಕೊಡಿ’ ಎಂದು ಅರಚಿದರು. ಯಾವುದೇ ದೇಶದ ಪ್ರಜೆಗೆ ಇಂತಹ ದೇಶ ವಿರೋಧಿ ಕೂಗು ಕೇಳಿದಾಗ ರಕ್ತ ಕುದಿಯುವುದು ಸಹಜವೇ. ಇನ್ನೊಂದು ವಿಷಯವೆಂದರೆ ಭಯೋತ್ಪಾದನೆಯ ಕರಾಳ ಹಸ್ತ ಈ ರೂಪದಲ್ಲಿ ಕಾಶ್ಮೀರದ ಹೆಸರಿನಲ್ಲಿ ದಕ್ಷಿಣದ ಬೆಂಗಳೂರಿಗೂ ಚಾಚಿಯಾಗಿದೆ. ಇದು ದೇಶದ ಸಾರ್ವಭೌಮತ್ವವನ್ನು ನುಂಗಿ ಹಾಕುವ ಅಪಾಯದ ಸೂಚನೆಯಲ್ಲವೇ?
‘ಅಮ್ನೆಸ್ಟಿ ಥಿಯೋಸೋಫಿಕಲ್ ಸೊಸೈಟಿ’ಯಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ ಎನ್ನುವಾಗಲೇ ನಾವು ಅರ್ಥಮಾಡಿಕೊಳ್ಳಬೇಕಿತ್ತು. ನಾವು ಭಾರತೀಯರು ಸ್ವಲ್ಪ ಮುಗ್ಧಮನಸ್ಸಿನವರೇ ಹಾಗಾಗಿಯೇ ಪದೇ-ಪದೇ ನಂಬಿ ಮೋಸ ಹೋಗುತ್ತೇವೆ. ಆದರೆ ಈ ಬಾರಿ ನಮ್ಮ ಬುದ್ಧಿವಂತ ವಿದ್ಯಾರ್ಥಿಗಳು ಇದನ್ನು ಆಗಲೇ ಯೋಚಿಸಿದ್ದರು. ಈ ಕಾರಣದಿಂದಲೇ ಅಮ್ನೆಸ್ಟಿಯ ನಿಜ ಬಣ್ಣ ಬಯಲಾಯಿತು. ಇದರ ಸಂಪೂರ್ಣ ಶ್ರೇಯಸ್ಸು ನಮ್ಮ ವಿದ್ಯಾರ್ಥಿವೃಂದಕ್ಕೆ ಸಲ್ಲುತ್ತದೆ. ಅಷ್ಟಕ್ಕೂ ಈ ಅಮ್ನೆಸ್ಟಿಯ ಜಾತಕ ಬಿಡಿಸಿ ನೋಡಿದರೆ ಮೇಲಿನ ಘಟನೆ ಹೆಚ್ಚಿನ ಅಶ್ಚರ್ಯ ಹುಟ್ಟಿಸುವುದಿಲ್ಲ. ಏಕೆಂದರೆ ಕಥೆಯೇ ಹಾಗಿದೆ. ‘ಅಮ್ಮೆಸ್ಟಿ ಇಂಟರ್ ನ್ಯಾಶನಲ್ ಸ್ವಯಂ ಸೇವಾ ಸಂಸ್ಥೆ’ ಬ್ರಿಟನ್ನಿನ ಕೂಸು. ಭಾರತದ ಪುಟ್ಟ ಮಗುವಿಗೂ ಬ್ರಿಟೀಷರೆಂದರೆ “ಒಡೆದು ಆಳುವ ಕುಟಿಲ ನೀತಿಯವರು” ಎಂಬ ನಗ್ನ ಸತ್ಯ ಗೊತ್ತಿದೆ. ಅದು ಹೇಳಿಕೊಂಡಿರುವ ಉದ್ದೇಶವಂತೂ ನಮ್ಮ ಯೋಚನೆಯನ್ನು ದೃಢಪಡಿಸುತ್ತದೆ. ‘ಮಾನವ ಹಕ್ಕು ಉಲ್ಲಂಘನೆ ವಿರುದ್ಧ ಹೊರಾಟ ನಡೆಸಿ ಸಂತ್ರಸ್ತರಿಗೆ ನ್ಯಾಯ ಕೊಡಿಸುವುದು’ ವಾಹ್! ಎಷ್ಟು ಸುಂದರವಾಗಿದೆ, ಆದರೆ ಒಂದೇ ಅನುಮಾನ ಈ ಸಂಸ್ಥೆಯ ಸಂತ್ರಸ್ತರು ಯಾರು? ಎನ್ನುವುದು! ಇಷ್ಟು ಸ್ಪಷ್ಟ ಬಲಿಷ್ಟ ಉದ್ದೇಶ ಇಟ್ಟುಕೊಂಡು ಸಂಸ್ಥೆಗೆ ಭಾರತ – ಪಾಕ್ ವಿಭಜನೆಯಾದ ಸಂದರ್ಭದಲ್ಲಿ ಸಂತ್ರಸ್ತರು ಸಿಗಲಿಲ್ಲ, ಮುಂಬೈ ಪಟಾಣಕೋಟ್ , ಸಿಖ್ ಹತ್ಯಾಕಾಂಡ, ದೇಶದಾದ್ಯಂತ ನಡೆದ ಹತ್ತಾರು ಬಾಂಬ್ ಸ್ಫೋಟಗಳಲ್ಲಿನ ಸಂತ್ರಸ್ತರು ಯಾಕೆ ಕಾಣಲಿಲ್ಲ ? ಎನ್ನುವ ಪ್ರಶ್ನೆಗೆ ಉತ್ತರಿಸಿದರೆ ನಮ್ಮ ದೇಶಭಾಂಧವರಿಗೆ ನಿಮ್ಮಿಂದ ಬಲು ದೊಡ್ಡ ಉಪಕಾರವಾಗುತ್ತದೆ.
‘ಬ್ರೋಕನ್ ಫ್ಯಾಮೀಲೀಸ್ ಹೆಸರಿನಲ್ಲಿ ದೇಶಾದ್ಯಂತ ಕಾಶ್ಮೀರಿ ಸಂತ್ರಸ್ತರ ಬಗ್ಗೆ ಕಾರ್ಯಕ್ರಮ ಮಾಡುತ್ತಾ ಸಾಮಾಜಿಕ ಸಾಮರಸ್ಯ ಮೆರೆಯ ಹೊರಟ ನಿಮ್ಮ ಯಾವುದೇ ಕಾರ್ಯಕ್ರಮಗಳಲ್ಲಿ ಕಾಶ್ಮೀರದಲ್ಲಿ ನಿರಾಶ್ರಿತರಾಗಿ ಸತತ 25 ವರುರ್ಷಗಳಿಂದ ಅನಾಥರಾಗಿ ಬದುಕುತ್ತಿರುವ ಎಷ್ಟು ಕಾಶ್ಮೀರಿ ಪಂಡಿತರ ಬಗ್ಗೆ ಜನ- ಜಾಗೃತಿ ಮೂಡಿಸಿದ್ದೀರಿ? ಏಕೆಂದರೆ 1985 ರ ಗಲಭೆಯಲ್ಲಿ ಕಾಶ್ಮೀರವನ್ನು ತೊರೆದು ಬೀದಿಗೆ ಬಿದ್ದವರಲ್ಲಿ ಶೇ.95 ಕ್ಕಿಂತಲೂ ಹೆಚ್ಚಿನವರು ಕಾಶ್ಮೀರಿ ಪಂಡಿತರು ಹೌದಲ್ಲವೇ?
ಒಂದು ಕಾರ್ಯಕ್ರಮ ಇಡೀ ರಾಜ್ಯದ ಶಾಂತಿ ಕದಡಿತು. ದೇಶದ ಬಗ್ಗೆ ಅಭಿಮಾನವಿರುವ ಪ್ರತಿ ಕನ್ನಡಿಗನೂ, ಪ್ರತಿ ಭಾರತೀಯನೂ ಈ ‘ದೇಶ ವಿರೋಧಿ’ ಕಾರ್ಯಕ್ರಮದ ಮೇಲೆ, ಆಯೋಜಕರ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು. ದೇಶದ ವಿದ್ಯಾರ್ಥಿ ಶಕ್ತಿ ಇಂತಹ ತಪ್ಪು ನಡೆಗಾಗಿ ಸರ್ಕಾರ ಸಂಸ್ಥೆಯ ಹಾಗೂ ಈ ಕಾರ್ಯಕ್ರಮದ ರೂವಾರಿಗಳ ಮೇಲೆ ಕ್ರಮ ಕೈಗೊಳ್ಳ ಬೇಕು ಎಂದು ಧರಣಿ ಆರಂಭಿಸಿತು. ಪ್ರತಿಭಟನೆ ನಡೆಸಿತು ಶಾಂತಿಯುತವಾಗಿ ಅಂತಹವರಿಗೆ ದೇಶಭಕ್ತಿಯ ಪಾಠ ಹೇಳಲು ಹೊರಟಿದ್ದ ಮುಗ್ಧ ವಿದ್ಯಾರ್ಥಿಗಳ ಮೇಲೆ ಸರ್ಕಾರ ಲಾಠಿ ಬೀಸಿತು. ಗಂಭೀರ ಗಾಯಗೊಂಡರೂ ಬ್ಯಾಂಡೇಜ್ ಸುತ್ತಿಕೊಂಡು ಮತ್ತೆ ದನಿಎತ್ತಿದ ವಿದ್ಯಾರ್ಥಿಗಳನ್ನು ಕಂಡು ಭಂಡ ಸರ್ಕಾರ ನಡುಗಿತು. ಈ ಭಾರಿ ಮಾಧ್ಯಮಗಳಿಗೂ ಇದಕ್ಕೆ ಪರದೆ ಹಾಕಲು ಸಾಧ್ಯವಾಗಲಿಲ್ಲ. ರಾಜ್ಯದೆಲ್ಲೆಡೆ ಲಕ್ಷಗಳ ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟಿಸಿ ನೂರಾರು ವಿದ್ಯಾರ್ಥಿ ನಾಯಕರು ಬಂಧಿತರಾದರು ಆದರೆ ಈ ದೇಶದ ವಿಪರರ್ಯಾಸವೆಂದರೆ, ಆಜಾದಿ ಘೋಷಣೆ ಕೂಗಿದೆ, ಹಾಗೂ ಇದಕ್ಕೆ ಅವಕಾಶ ನೀಡಿದವರಾರು ಬಂಧಿತರಾಗಲಿಲ್ಲ ಬಹುಶಃ ಇಂತಹ ವೈಪರೀತ್ಯ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ.
ಇಷ್ಟಾದರೂ ಆಕ್ರೋಷದ ಬೆಂಕಿ ಆರುವ ಸಾದ್ಯತೆ ಕಾಣದಾದಾಗ ದೇಶ ವಿರೋಧಿ ಸೇನಾ ವಿರೋಧಿ ಘೋಷಣೆ ಕೂಗಿರುವುದು ನಮ್ಮ ಸದಸ್ಯರಲ್ಲಿ ಅಂತ ಅಮ್ನೆಸ್ಟಿ ಕೈ ತೊಳೆದು ಕೊಳ್ಳುವ ಪ್ರಯತ್ನ ಮಾಡಿದೆ. ಆದರೆ ನಮ್ಮಿಂದ ಆರಿಸಲ್ಪಟ್ಟ ನಮ್ಮ ಜನ ಫ್ರತಿನಿಧಿಗಳು, ನಮ್ಮ ರಾಜ್ಯ ಸರ್ಕಾರ ಮಾತ್ರ ನಮಕ್ ಹರಾಮ್ ಕೆಲಸ ಮಾಡಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಬ್ರಿಟೀಷ್ ದಾಸ್ಯದ ಮನಸ್ಥಿತಿಯಲ್ಲಿ ಬೆಳೆದ ನೆಹರೂ ವಾದಿಗಳಿಗೆ ಬ್ರಿಟನ್ ಚಿಂತನೆಯ ಗಾಳಿಯು ಭಾರತೀಯ ಸೌಗಂಧಕ್ಕಿಂತ ಹತ್ತಿರವಾದದ್ದು. ಆದರೂ ಆಡಳಿತಗಾರನಾಗಿ ದೇಶದ್ರೋಹಿ ಚಟುವಟಿಕೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದ ಬದಲಾಗಿ “ಸೈನಿಕರೂ ತಪ್ಪು ಮಾಡಿರಬಹುದಲ್ಲವೇ? ಅಮ್ನೆಸ್ಟಿ ಇಂತಹ ಕೆಲಸ ಮಾಡಿದೆ ಎಂದು ನನಗನ್ನಿಸುತ್ತಿಲ್ಲ!” ಎನ್ನುವಂತಹ ಅರಳೀಕಟ್ಟೆಯಲ್ಲಿ ಸಂಜೆಯ ಹೊತ್ತು ಕುಳಿತು ಗೆಳತಯರೊಂದಿಗೆ ಹರಟುವ ತಾತಯ್ಯನಂತೆ ಅತ್ಯಂತ ಬೇಜವಾಬ್ದಾರಿತನ ಹೇಳಿಕೆ ನಮ್ಮ ಗೃಹ ಸಚಿವ ರಿಂದ ಬಂದಿರುವುದು ತೀರ ಬೇಸರ ಮೂಡಿಸಿದೆ.
ಈ ಸಂದರ್ಭದಲ್ಲಿ ದೇಶ ಕಂಡ ಪ್ರಶ್ನಾತೀತ ನಾಯಕ ಜೆ ಪಿ ಚಳುವಳಿಯ ರೂವಾರಿ ಜಯಪ್ರಕಾಶ್ ನಾರಾಯಣ ಪದೇ – ಪದೇ ನೆನಪಾಗುತ್ತಾರೆ. ಅದೇ ಪಕ್ಷ, ಅದೇ ಗರಡಿ, ಅದೇ ಗಾಂಧೀಜಿಯ ಆದರ್ಶದಲ್ಲಿ ಬೆಳೆದು, ಬಾಳಿದ ಜೆ ಪಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲ್ಪಟ್ಟಾಗ ಅದರ ವಿರೋಧವಾಗಿ ಆಂದೋಲನವನ್ನೇ ರೂಪಿಸಿಬಿಟ್ಟರು. ಪುಣ್ಯಕ್ಕೆ ನಮ್ಮ ಬುದ್ಧಿ ವಂತರಿಗೆ ಅದು ದೇಶದ್ರೋಹವೆಂದು ಅನಿಸಲಿಲ್ಲ. ಆದರೂ ಸರ್ಕಾರದ ವಿರುದ್ಧ ದನಿಯೆತ್ತಿದ ತಪ್ಪಿಗಾಗಿ, ಭಾರತೀಯ ಪ್ರಜೆಗಳ ಮೂಲಭೂತ ಸ್ವಾತಂತ್ರ್ಯಕ್ಕಾಗಿ, ಭಾರತ ಪ್ರಜಾಪ್ರಭುತ್ವದ ರಕ್ಷಣೆಗಾಗಿ, ತಮ್ಮ ಇಳಿ ವಯಸ್ಸಿನಲ್ಲೇ ತಾವು ಬೆಳೆದ, ಬೆಳೆಸಿದ ವ್ಯವಸ್ಥೆಯ ವಿರುದ್ಧವೇ ಜನ ಜಾಗೃತಿ ಮೂಡಿಸಿದರು. ಇದಕ್ಕಾಗಿ ಅವರು ಅನುಭವಿಸಿದ ಕಷ್ಟಗಳೆಷ್ಟೋ. ಅವರಿಗೆ ದೇಶದ ಬಗ್ಗೆ ಕಾಳಜಿ ಇತ್ತು. ನಿಜವಾದ ದೇಶಪ್ರೇಮವಿತ್ತು. ನಿಸ್ವಾರ್ಥತೆ ಇತ್ತು. ಹೀಗಾಗಿಯೇ ಈ ಹೋರಾಟದಲ್ಲಿ ಪ್ರಶ್ನಾತೀತ ನಾಯಕರಾಗಿ ಬೆಳೆದು ಯಶಸ್ವಿಯಾದರೂ ಪಟ್ಟವೇರಲಿಲ್ಲ. ತಮ್ಮ ಆದರ್ಶದ ಗಣಿಯಾದ ಗಾಂಧೀಜಿ ನೆಹರೂರನ್ನು ಬೆಂಬಲಿಸಿದಾಗಲೂ ಒಪ್ಪಲಾಗಾದೇ ಹೋದರು. ಸ್ವಾತಂತ್ರ್ಯ ದೊರೆತಾಗ ಬ್ರಿಟೀಷ್ ವೈಸರಾಯ್ ಭಾರತದಲ್ಲಿ ಇರಲು ಒಪ್ಪಿಗೆ ಕೊಟ್ಟ ತಮ್ಮದೇ ಕಾಂಗ್ರೆಸ್ಸಿನ ವಿರುದ್ಧ ದನಿಯೆತ್ತಿದರು. ಬಹಳ ಜನರಿಗೆ ತಿಳಿಯದೇ ಇರುವ ಅದ್ಭುತ ಸತ್ಯವೆಂದರೆ ದೇಶದ ಮೊದಲ ಕಾಂಗ್ರೆಸ್ಸೇತರ ಸರ್ಕಾರದ ರೂವಾರಿಯ ಪತಿ ಇದೇ ಕಾಂಗ್ರೆಸ್ ಅಧಿನಾಯಕ ಗಾಂಧೀಯ ಆಶ್ರಯದಲ್ಲಿ ಹಲವಾರು ವರುಷಗಳ ಕಾಲ ಸಮಾಜಕ್ಕಾಗಿ ಕಳೆದರು .ಜೆಪಿ ಜೀ ಇಂದು ಇದ್ದಿದ್ದರೆ ಇಂದಿನ ಭಂಡ ಆಡಳಿತ ನೋಡಿ ಕಣ್ಣೀರಿಡುತ್ತಿದ್ದರೇನೋ!?
ನಮ್ಮ ರಾಜ್ಯದ ಎಲ್ಲಾ “ಧೀಮಂತ” ನಾಯಕರು ಒಮ್ಮೆ ಈ ಪುಣ್ಯ ಪುರುಷನ ಕಡೆಗೊಮ್ಮೆ ನೋಡಿ! ಪಕ್ಷವೂ ಇರಲಿ, ರಾಜಕಾರಣವೂ ಇರಲಿ ಆದರೆ ಇವು ನಿಮ್ಮ ದೇಶಪ್ರೇಮವನ್ನು, ದೇಶಾಭಿಮಾನವನ್ನೂ ಸಾಯಿಸದಿರಲಿ ದೇಶ ಅಂತ ಬಂದಾಗ ಈ ಓಲೈಕೆ ರಾಜಕಾರಣ ಬದಿಗಿಟ್ಟು ರಾಷ್ಟ್ರಕ್ಕಾಗಿ ಒಂದಾಗಿ. ನಿಮ್ಮ ಸ್ವಾರ್ಥಕ್ಕೆ ಇಂತಹ ಘಟನೆಗಳಿಗೆ ಅವಕಾಶ ಕೊಡುವುದರಮೂಲಕ ರಾಷ್ಟ್ರವಿರೋಧಿ ಕೆಲಸಗಳಿಗೆ ಪರೋಕ್ಷ ಬೆಂಬಲ ನೀಡಬೇಡಿ. ನಿಮ್ಮ ರಾಜಕಾರಣಕ್ಕೆ ಬಲಿಬಿದ್ದು ನಮ್ಮ ದೇಶ ಮತ್ತೊಂದು ಪಾಕಿಸ್ಥಾನ ಆಗುವ ಮುಂಚೆ, ಅಂತಹ ಚಿಂತನೆಗಳನ್ನು ಬಿತ್ತುವ ಅಮ್ನೆಸ್ಟಿಯಂತಹ ಎಲ್ಲ ದೇಶದ್ರೋಹೀ ಸಂಸ್ಥೆಗಳು ಮುಚ್ಚಲಿ. ತನ್ಮೂಲಕ ಜೆಪಿ ಯಂತಹ ನಾಯಕರ ಸದೃಢ ಭಾರತ ನಿರ್ಮಾಣವಾಗಿ ಅವರ ಆತ್ಮಕ್ಕೆ ಶಾಂತಿ ಸಿಗಲಿ..
Discussion about this post