Read - 2 minutes
ಬೆಂಗಳೂರು, ಸೆ.15: ಕಾವೇರಿ ವಿವಾದದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಖಂಡಿಸಿ ಕರೆ ನೀಡಲಾಗಿದ್ದ ರೈಲು ಬಂದ್ ಚಳುವಳಿ ವಿಫಲಗೊಂಡಿದೆ. ಅಲ್ಲಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಿದ್ದು ಬಿಟ್ಟರೆ, ರೈಲು ಸಂಚಾರದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.
ಎಂದಿನಂತೆ ರೈಲುಗಳು ಸಂಚಾರ ನಡೆದವು. ರೈಲ್ ಬಂದ್ ಚಳವಳಿ ಹಿನ್ನಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಭಾರೀ ಭದ್ರತೆ ನಿಯೋಜಿಸಲಾಗಿತ್ತು.
ಭದ್ರತೆ ನಡುವೆಯೂ ಕೆಲವೆಡೆ ರೈಲು ನಿಲ್ದಾಣಕ್ಕೆ ಮುತ್ತಿಗೆಗೆ ಯತ್ನಿಸಲಾಯಿತಾದರೂ, ಪೊಲೀಸರು ಪ್ರತಿಭಟನಾಕಾರರ ಪ್ರಯತ್ನವನ್ನು ವಿಫಲಗೊಳಿಸಿದರು. ಇನ್ನು ರೈಲು ಬಂದ್ ನಿಂದ ಪ್ರಯಾಣಿಕರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದೇ ಹೇಳಬಹುದು.
ಈ ಮಧ್ಯೆ ಕನ್ನಡಪರ ಸಂಘಟನೆಗಳು ರಾಜ್ಯಾದ್ಯಂತ ನಡೆಸಿದ ರೈಲು ಬಂದ್ ಚಳವಳಿ ಸಂದರ್ಭದಲ್ಲಿ 210 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ರಾಜಧಾನಿ ಒಂದರಲ್ಲೇ 54 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಕೆಲವೆಡೆ ಮಾತ್ರ ಕೆಲ ನಿಮಿಷಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾಯಿತು ಎಂಬುದು ಬಿಟ್ಟರೆ ಯಾವುದೇ ಘಟನೆ ನಡೆದಿಲ್ಲ. ಪ್ರತಿಭಟನಾಕಾರರು ರಾಜ್ಯದ ವಿವಿಧೆಡೆ ರೈಲು ತಡೆಯಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗವೂ ನಡೆಯಿತು.
ಸುಪ್ರೀಂಕೋರ್ಟ್ ತೀರ್ಪು ಖಂಡಿಸಿ ಬೆಂಗಳೂರಿನಲ್ಲಿ ನಡೆದ ಹಿಂಸಾಚಾರ ಘಟನೆಯಿಂದ ಎಚ್ಚೆತ್ತ ಪೊಲೀಸರು ರೈಲ್ ಬಂದ್ ಚಳವಳಿಗೆ ಭಾರೀ ಬಂದೋಬಸ್ತ್ ಕೈಗೊಂಡಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.
ಬೆಂಗಳೂರು, ಮೈಸೂರು, ಮಂಡ್ಯ, ಹುಬ್ಬಳ್ಳಿ, ಧಾರವಾಡ, ಕೋಲಾರ ಸೇರಿದಂತೆ ಬೆಳಗ್ಗೆ ಎಂದಿನಂತೆ ರೈಲು ಸಂಚಾರ ನಡೆಯಿತಾದರೂ ಮಧ್ಯಾಹ್ನ 11 ಗಂಟೆ ಸುಮಾರಿಗೆ ಪ್ರತಿಭಟನಾಕಾರರು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಯಶವಂತಪುರ ರೈಲ್ವೆ ನಿಲ್ದಾಣ, ಕಂಟೋನ್ಮೆಂಟ್ ಮುಂತಾದೆಡೆ ರೈಲು ತಡೆ ಮಾಡಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಬಲಪ್ರಯೋಗಿಸಿ ನೂರಾರು ಪ್ರತಿಭಟನಾಕಾರರನ್ನು ಬಂಧಿಸಿದರು.
ರೈಲ್ ಬಂದ್ ಗೆ ಕರೆ ನೀಡಿದ್ದ ಕನ್ನಡ ಒಕ್ಕೂಟದ ಅಧ್ಯಕ್ಷ, ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಸೇನೆಯ ಕುಮಾರ್, ಕರವೇ ಶಿವರಾಮೇಗೌಡ, ಪ್ರವೀಣ್ಕುಮಾರ್ಶೆಟ್ಟಿ, ಸಾರ್ವಜನಿಕ ಜಾಗೃತಿ ವೇದಿಕೆಯ ಮಂಜುನಾಥ್ ದೇವು, ಗಿರಿಗೌಡ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳ ಅಪಾರ ಕಾರ್ಯಕರ್ತರು ಮೈಸೂರು ಬ್ಯಾಂಕ್ ವೃತ್ತದಿಂದ ಬೆಂಗಳೂರು ರೈಲ್ವೆ ನಿಲ್ದಾಣದವರೆಗೆ ನಡೆಸಲುದ್ದೇಶಿಸಿದ್ದ ರ್ಯಾಲಿಗೆ ನಿಷೇಧಾಜ್ಞೆ ಇರುವುದರಿಂದ ಪೊಲೀಸರು ಅವಕಾಶ ನೀಡಲಿಲ್ಲ. ಹಲವು ಮುಖಂಡರು ಬೇರೆ ವಾಹನಗಳಲ್ಲಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ನಿಲ್ದಾಣಕ್ಕೆ ನುಗ್ಗಲೆತ್ನಿಸಿದಾಗ ಪೊಲೀಸರು ಬಂಧಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಪೊಲೀಸರ ವರ್ತನೆ ಖಂಡಿಸಿದ ಕನ್ನಡ ಚಳವಳಿ ವಾಟಾಳ್ ನಾಗರಾಜ್, ಕಾವೇರಿ ವಿವಾದದಲ್ಲಿ ರಾಜ್ಯಕ್ಕೆ ತೀವ್ರ ಅನ್ಯಾಯವಾಗಿದೆ. ಸುಪ್ರೀಂಕೋರ್ಟ್ ನಿಂದ ನಮಗೆ ಈವರೆಗೆ ನ್ಯಾಯ ಸಿಕ್ಕಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು. ಸಮಸ್ಯೆ ಬಗೆಹರಿಯುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನಿಸಲು ಶಾಂತಿಯುತವಾಗಿ ಮತ್ತು ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರೂ ಪೊಲೀಸರು ಬಿಡಲಿಲ್ಲ. ಅವರ ಈ ಧೋರಣೆ ಖಂಡನೀಯ ಎಂದು ಕಿಡಿಕಾರಿದರು.
ಕನ್ನಡಪರ ಹೋರಾಟಗಾರರನ್ನು ಪೊಲೀಸರು ಬಂಧಿಸಿದ ರೀತಿ ಅಮಾನುಷವಾಗಿತ್ತು. ಮೊನ್ನೆ ನಡೆದ ಹಿಂಸಾಚಾರ ಸಂದರ್ಭದಲ್ಲಿ ಬಂಧಿತರಾದವರು ಮತ್ತು ಇಂದು ಬಂಧಿಸಿದವರನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡದಿದ್ದರೆ ಮತ್ತೆ ರಾಜ್ಯ ಬಂದ್ ಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಾ.ರಾ.ಗೋವಿಂದು ಮಾತನಾಡಿ, ಕಾವೇರಿ, ಮಹದಾಯಿ ವಿವಾದದಲ್ಲಿ ರಾಜ್ಯದ ಸಂಸದರು ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಅವರೆಲ್ಲರೂ ಒಟ್ಟಾಗಿ ರಾಜ್ಯದ ಹಿತ ಕಾಪಾಡಬೇಕು. ಇಲ್ಲದಿದ್ದರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂಬ ಎಚ್ಚರಿಕೆ ನೀಡಿದರು.
ತಮಿಳುನಾಡು ವಿಜಯೋತ್ಸವ ಆಚರಿಸುತ್ತಿದೆ. ನಮ್ಮನ್ನು ಪೊಲೀಸರು ಬಡಿದು ಜೈಲಿಗಟ್ಟುತ್ತಿದ್ದಾರೆ. ಇದು ನಮ್ಮ ದುರದೃಷ್ಟ ಎಂದು ವಿಷಾದಿಸಿದರು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರೈಲು ಬಂದ್ ನೀರಸವಾಗಿದ್ದು, ರೈಲು ಬಂದ್ ಕರೆಕೊಟ್ಟ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಬೆಳಗಿನಿಂದ ಎಂದಿನಂತೆ ರೈಲುಗಳ ಸಂಚಾರ ನಡೆಯುತ್ತಿತ್ತು. ಮಂಡ್ಯ ರೈಲು ನಿಲ್ದಾಣ ಪ್ರವೇಶಕ್ಕೆ ಮುನ್ನವೇ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.
ರೈಲು ಬಂದ್ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ತುಮಕೂರು ನಗರ ರೈಲ್ವೆ ನಿಲ್ದಾಣ, ಕ್ಯಾತಸಂದ್ರ, ಮಲ್ಲಸಂದ್ರ, ಹೆಗ್ಗೆರೆ ಸೇರಿದಂತೆ ಇತರೆ ರೈಲ್ವೆ ನಿಲ್ದಾಣಗಳಲ್ಲಿ ನಿಷೇಧಾಜ್ಞೆ ಜಾರಿಮಾಡಲಾಗಿತ್ತು.
ಸಬ್ಇನ್ಸ್ಪೆಕ್ಟರ್ ಇ.ಪಿ.ರಾಜು, ಆರ್ ಪಿಎಫ್ ಪೊಲೀಸರು, ಕೆಎಸ್ಆರ್ ಪಿ, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳದಲ್ಲೇ ಬೀಡುಬಿಟ್ಟು ಯಾರಿಗೂ ತೊಂದರೆಯಾಗದಂತೆ ಎಚ್ಚರ ವಹಿಸಿದ್ದರು.
ಕೋಲಾರ ರೈಲ್ವೆ ನಿಲ್ದಾಣದಲ್ಲಿ ಕೋಲಾರ-ಬೆಂಗಳೂರು ಪ್ಯಾಸೆಂಜರ್ ರೈಲನ್ನು ಕನ್ನಡಪರ ಸಂಘಟನೆಗಳು ತಡೆದು ಪ್ರತಿಭಟನೆ ನಡೆಸಿ ಕೇಂದ್ರ, ರಾಜ್ಯ ಹಾಗೂ ತಮಿಳುನಾಡು ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಜಯಕರ್ನಾಟಕ ಸಂಘದ ಕೆ.ಆರ್. ನಾಗರಾಜು, ಕನ್ನಡ ಸೇನೆಯ ಕಲಾವಿದ ವಿಷ್ಣು, ವೆಂಕಟಪ್ಪ, ಕೋನಾ ಪ್ರಭಾಕರ್, ಜಯದೇವ್ ಪ್ರಸನ್ನ ಮತ್ತಿತರರಿದ್ದರು.
ಕೋಲಾರ ಸಿಟಿ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನಾಕಾರರು ಅರ್ಧಗಂಟೆಗೂ ಹೆಚ್ಚು ಕಾಲ ರೈಲು ತಡೆದ ಪರಿಣಾಮ ಪ್ರಯಾಣಿಕರಿಗೆ ತೊಂದರೆಯಾಯಿತು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮಂಡ್ಯ ಜಿಲ್ಲೆಯ ಎಲ್ಲ ರೈಲ್ವೆ ನಿಲ್ದಾಣಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕನ್ನಡ ಪರ ಒಕ್ಕೂಟದ ಕಾರ್ಯಕರ್ತರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ನುಗ್ಗಲೆತ್ನಿಸಿದಾಗ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.
ಧಾರವಾಡದಲ್ಲಿ ವಿವಿಧ ಸಂಘಟನೆಗಳಿಂದ ಕಾವೇರಿ ನೀರಿಗಾಗಿ ಆಗ್ರಹಿಸಿ ರೈಲ್ವೆ ನಿಲ್ದಾಣದ ಮುಂಭಾಗ ಮನಸೂರಿನ ರೇವಣ ಸಿದ್ದೇಶ್ವರ ಮಠದ ಶ್ರೀ ಬಸವರಾಜ ದೇವರು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಕಾವೇರಿ ಮತ್ತು ಮಹದಾಯಿ ನೀರು ರಾಜ್ಯಕ್ಕೆ ಸಿಗಬೇಕೆಂದು ಆಗ್ರಹಿಸಿ ರೈಲ್ವೆ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದಾಗ ರಮಾ ಕುಲಕರ್ಣಿ, ಸುಷ್ಮಾ ಸೇರಿದಂತೆ ಹಲವು ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಬಂದೋಬಸ್ತ್ ಗಾಗಿ ಎರಡು ತುಕಡಿ ಜಿಲ್ಲಾ ಸಶಸ್ತ್ರ ಮೀಸಲುಪಡೆ ಮತ್ತು ಕೆಎಸ್ಆರ್ ಪಿ ನಿಯೋಜನೆ ಮಾಡಲಾಗಿತ್ತು.
ಗದಗದಲ್ಲೂ ಕೂಡ ಹಲವು ಸಂಘಟನೆಗಳವರು ರೈಲುತಡೆ ನಡೆಸಲು ಪ್ರಯತ್ನಿಸಿದರಾದರೂ ರೈಲು ಸಂಚಾರಕ್ಕೆ ಯಾವುದೇ ಅಡಚಣೆಯಾಗಲಿಲ್ಲ.
ಒಟ್ಟಾರೆ ಇಂದು ರಾಜ್ಯಾದ್ಯಂತ ರೈಲು ಬಂದ್ ನಿಂದ ಪರಿಣಾಮ ಬೀರಲಿಲ್ಲ.
Discussion about this post