Read - < 1 minute
ನವದೆಹಲಿ, ಸೆ.8: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಕುರಿತ ಸಂವಿಧಾನ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗುರುವಾರ ಸಹಿ ಹಾಕಿದ್ದಾರೆ. ಇದರೊಂದಿಗೆ ಭಾರೀ ತೆರಿಗೆ ಸುಧಾರಣೆಯ ಈ ಜಿಎಸ್ ಟಿಯನ್ನು ಶಾಸನವಾಗಿ ಮುಂದಿನ ವರ್ಷದ ಏ.1ರಿಂದ ಜಾರಿಗೆ ತರಲು ಮೋದಿ ಅವರ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಪೇಕ್ಷಿಸಿದೆ.
ಹೊಸ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಿತ ಆರ್ಥಿಕ ಚಟುವಟಿಕೆಯ ದಾಪುಗಾಲೆಂದು ಬಣ್ಣಿಸಲಾಗಿರುವ ಜಿಎಸ್ ಟಿ ಮಸೂದೆಗೆ ರಾಷ್ಟ್ರಪತಿಗಳು ತಮ್ಮ ಒಪ್ಪಿಗೆ ನೀಡಿದ್ದಾರೆ ಎಂದು ರಾಷ್ಟ್ರಪತಿ ಭವನದ ಅಧಿಕಾರಿಗಳು ತಿಳಿಸಿದ್ದಾರೆ. ತೆರಿಗೆ ಸರಳೀಕರಣದ ಈ ಮಸೂದೆ ದೇಶದಲ್ಲಿ ತೆರಿಗೆ ಗೊಂದಲ ನಿವಾರಿಸುವ ಜೊತೆಗೆ ಬೆಲೆ ಏರಿಕೆಗೂ ತಡೆಹಾಕಬಹುದೆಂದು ನಿರೀಕ್ಷಿಸಲಾಗಿದೆ.
16 ರಾಜ್ಯಗಳ ಒಪ್ಪಿಗೆ
ಈಗಾಗಲೇ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಮಹತ್ವದ ಜಿಎಸ್ ಟಿ ಮಸೂದೆಯನ್ನು ರಾಷ್ಟ್ರಪತಿಗಳ ಸಹಿಗಾಗಿ ಕಳುಹಿಸಲಾಗಿತ್ತು. ಈ ಮಸೂದೆಗೆ ಈಗಾಗಲೇ 16 ರಾಜ್ಯಗಳು ಒಪ್ಪಿಗೆ ನೀಡಿದ್ದರಿಂದ ಅಗತ್ಯವಿರುವ ಶೇ.50 ರಷ್ಟು ರಾಜ್ಯಗಳ ಒಪ್ಪಿಗೆ ಸಿಕ್ಕಿದಂತಾಗಿದೆ. ಹೀಗಾಗಿ ರಾಷ್ಟ್ರಪತಿಗಳು ಗುರುವಾರ ತಮ್ಮ ಸಹಿ ಹಾಕಿದ್ದಾರೆ.
ಸಂಸತ್ತಿನಿಂದ ಅಂಗೀಕಾರಗೊಂಡು ತೆರಿಗೆ ದರ, ಸೆಸ್ ಮತ್ತು ಸರ್ಚಾರ್ಜ್ ನಿರ್ಧರಿಸಲಿರುವ ಜಿಎಸ್ ಟಿ ಮಂಡಳಿ ರಚನೆಗೆ ಅವಕಾಶ ನೀಡಿದೆ. ಕೇಂದ್ರ ಮತ್ತು ರಾಜ್ಯಗಳ ಬಹುತೇಕ ತೆರಿಗೆಗಳು ಅಂತರ್ಗತವಾದ ಏಕೈಕ ಪರೋಕ್ಷ ತೆರಿಗೆ ಜಿಎಸ್ ಟಿ, ವ್ಯಾಟ್ , ಅಬಕಾರಿ ಸುಂಕ , ಸೇವಾ ತೆರಿಗೆ , ಕೇಂದ್ರದ ಮಾರಾಟ ತೆರಿಗೆ, ಹೆಚ್ಚುವರಿ ಕಸ್ಟಮ್ಸ್ ಸುಂಕ ಮತ್ತು ವಿಶೇಷ ಕಸ್ಟಮ್ಸ್ ಸುಂಕ ಇದೀಗ ಜಿಎಸ್ ಟಿಯಲ್ಲಿ ಅಂತರ್ಗತವಾಗಿದೆ.
ಕಳೆದ ಆ.8ರಂದು ಈ ಮಸೂದೆ ಸಂಸತ್ತಿನಲ್ಲಿ ಅಂಗೀಕಾರಗೊಂಡಿತ್ತು. ಬಳಿಕ 16 ರಾಜ್ಯಗಳು ಇದಕ್ಕೆ ತಮ್ಮ ಅನುಮೋದನೆ ನೀಡಿದ್ದವು. ಇದು ಸಾಂವಿಧಾನಿಕ ತಿದ್ದುಪಡಿಯಾಗಿದ್ದರಿಂದ ಶೇ.50ರಷ್ಟು ರಾಜ್ಯಗಳು ಅಂಗೀಕರಿಸಬೇಕಾಗಿತ್ತು.ಬಿಜೆಪಿ ಆಡಳಿತವಿರುವ ಅಸ್ಸಾಂ ಜಿಎಸ್ಟಿಗೆ ಮೊಟ್ಟಮೊದಲು ಅನುಮೋದನೆ ನೀಡಿದ ರಾಜ್ಯವಾದರೆ, ಅನಂತರ ಬಿಹಾರ,ದೆಹಲಿ, ಜಾರ್ಖಂಡ್, ಛತ್ತೀಸ್ ಘಡ, ಹಿಮಾಚಲ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ನಾಗಾಲ್ಯಾಂಡ್, ಮಹಾರಾಷ್ಟ್ರ, ಹರಿಯಾಣ, ಸಿಕ್ಕಿಂ, ಮಿಜೋರಾಮ್, ತೆಲಂಗಾಣ, ಗೋವಾ , ಒಡಿಶಾ, ರಾಜಸ್ಥಾನಗಳು ಅಂಗೀಕರಿಸಿವೆ. ಈ ಶೇ.50ಕ್ಕಿಂತ ಹೆಚ್ಚಿನ ಅಗತ್ಯ ಬೆಂಬಲ ಕೇವಲ 23ದಿನಗಳಲ್ಲೇ ಲಭಿಸಿದ್ದಾಗಿ ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯ ಟ್ವೀಟಿಸಿದ್ದಾರೆ. ವಿತ್ತಸಚಿವ ಅರುಣ್ ಜೇಟ್ಲಿ ನೇತೃತ್ವದ ಜಿಎಸ್ಟಿ ಮಂಡಳಿ ತೆರಿಗೆ ದರವನ್ನು ನಿರ್ಧರಿಸಲಿದೆ. ಇದರಲ್ಲಿ ರಾಜ್ಯಗಳ ವಿತ್ತಸಚಿವರೂ ಇರುತ್ತಾರೆ.
Discussion about this post