ಹಾಸನ, ಅ.5: ಜಿಲ್ಲೆಯ ಅಧಿದೇವತೆ ಹಾಸನಾಂಬೆಯ ಜಾತ್ರಾ ಮಹೋತ್ಸವ ಅ.20ರಿಂದ ನ.1ರವರೆಗೆ ನಡೆಯಲಿದ್ದು , ಅಧಿಕಾರಿಗಳು ಅಗತ್ಯವಿರುವ ಎಲ್ಲಾ ಪೂರ್ವ ತಯಾರಿಗಳನ್ನು ಮಾಡುವಂತೆ ಜಿಲ್ಲಾಧಿಕಾರಿ ವಿ. ಚೈತ್ರಾ ತಿಳಿಸಿದ್ದಾರೆ.
ಶ್ರೀ ಹಾಸನಾಂಬ ಜಾತ್ರಾ ಮಹೋತ್ಸವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಾರಿ 13 ದಿನಗಳ ಕಾಲ ಉತ್ಸವ ನಡೆಯಲಿದ್ದು ಅದರಲ್ಲಿ ಯಾವುದೇ ಲೋಪದೋಷಗಳು ಇಲ್ಲದಂತೆ ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸುವಂತೆ ಸೂಚಿಸಿದರು.
ಶಾಸಕ ಹೆಚ್.ಎಸ್. ಪ್ರಕಾಶ್ ಮಾತನಾಡಿ, ಹಾಸನಾಂಬ ಹಾಸನದ ಅಧಿದೇವತೆ. ಶತ-ಶತಮಾನಗಳಿಂದ ಇಲ್ಲಿ ತನ್ನದೇ ಆದ ಪರಂಪರೆ ನಡೆದುಬರುತ್ತಿದ್ದು , ಅದಕ್ಕೆ ಯಾವುದೇ ಧಕ್ಕೆ ಉಂಟಾಗದಂತೆ ಇಲಾಖೆಗಳು ಪರಸ್ಪರ ಸಹಕಾರದಿಂದ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದರು.
ಸಾರ್ವಜನಿಕರಿಗೆ ದರ್ಶನಕ್ಕೆ ಉತ್ತಮ ವ್ಯವಸ್ಥೆ ಕಲ್ಪಿಸುವುದೇ ಜಾತ್ರಾ ಮಹೋತ್ಸವದ ದೊಡ್ಡ ಸವಾಲು. ದೇವರ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಸೂಕ್ತ ಕ್ರಮಕ್ಕೆ ತಿಳಿಸಿದರು.
ಕೆಲವೇ ದಿನಗಳ ಕಾಲ ತೆರೆದಿರುವ ಹಾಸನಾಂಬೆಯ ದರ್ಶನಕ್ಕೆ ಯಾವುದೇ ನೂಕುನುಗ್ಗಲು ಸಂಭವಿಸದಂತೆ ಬ್ಯಾರಿಕೇಡ್ ಗಳನ್ನು ಅ.17ರ ಒಳಗಾಗಿ ಸಿದ್ದವಾಗಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ದೇವರ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ವಾಹನಗಳ ಪಾರ್ಕಿಂಗೆ ಗೆ ನಗರದ ಸಂತೆಪೇಟೆಯ ವಸ್ತುಪ್ರದರ್ಶನ ಆವರಣದಲ್ಲಿ ನಾಲ್ಕು ಚಕ್ರದ ವಾಹನಗಳಿಗೆ ಹಾಗೂ ದ್ವಿಚಕ್ರ ವಾಹನಗಳನ್ನು ನಗರಸಭಾ ಕಾರ್ಯಾಲಯದ ಆವರಣದಲ್ಲಿ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ದಾನಿಗಳಿಂದ ಆಹಾರ ಸಾಮಗ್ರಿ ಸ್ವೀಕಾರ: ಭಕ್ತಾಧಿಗಳಿಗೆ ಪ್ರವಾಸ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಆಸಕ್ತ ದಾನಿಗಳು ಪ್ರಸಾದ ವಿತರಣೆಗೆ ಆಹಾರ ಸಾಮಗ್ರಿ ದಾನ ಮಾಡುವಂತೆ ಕೋರಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್, ಅಪರ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ, ಉಪ ವಿಭಾಗಾಧಿಕಾರಿ ಡಾ.ಹೆಚ್.ಎನ್. ನಾಗರಾಜ್ ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
Discussion about this post