ಮೈಸೂರು, ಅ.18: ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿಯನ್ನು ಆಚರಿಸಬಾರದು. ಒಂದು ವೇಳೆ ಆಚರಿಸಿದರೆ ಅಂದು ನಡೆಯುವ ಅಹಿತಕರ ಘಟನೆಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ದೇಸಾಯಿ ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಿಸಲು ರಾಜ್ಯ ಸರ್ಕಾರ ಮುಂದಾಗಿದ್ದು ಇದನ್ನು ಹಿಂದೂ ಪರ ಸಂಘಟನೆಗಳೆಲ್ಲವೂ ವಿರೋಧಿಸಬೇಕೆಂದು ಕರೆ ನೀಡಿದರು.
ಮುಸ್ಲೀಮರ ಓಟಿಗಾಗಿ ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗಿದೆ. ಟಿಪ್ಪು ಯಾವುದೇ ಸ್ವಾತಂತ್ರ್ಯ ಹೋರಾಟಗಾರನಲ್ಲ. ತನ್ನ ರಾಜ್ಯ ಉಳಿಸಿಕೊಳ್ಳಲು ಹೋರಾಡಿದನೇ ಹೊರತು ದೇಶದ ರಕ್ಷಣೆಗಾಗಿ ಹೋರಾಡಿಲ್ಲ ಎಂದರು.
ಇದೇ ಸಂದರ್ಭದಲ್ಲಿ ವಿಚಾರವಾದಿ, ಸಾಹಿತಿ ಚಿದಾನಂದಮೂರ್ತಿಯವರು `ಮೂಲ ದಾಖಲೆಗಳಲ್ಲಿ ಹುದುಗಿರುವ ಟಿಪ್ಪು’ ಎಂಬ ಹೊತ್ತಿಗೆಯನ್ನು ಬಿಡುಗಡೆಗೊಳಿಸಿ, ಟಿಪ್ಪು ಏನೇನು ಮಾಡಿದ್ದಾನೆ ಎಂಬುದು ಈ ಹೊತ್ತಿಗೆಯಲ್ಲಿ ಇದೆ. ಆತ ದೇಶಕ್ಕಾಗಿ ಹೋರಾಡಿಲ್ಲ ಹಾಗಾಗಿ ಟಿಪ್ಪು ಜಯಂತಿ ಆಚರಿಸಬಾರದೆಂದು ಹೇಳಿದರು.














