ನವದೆಹಲಿ, ಅ.5: ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಗಡಿ ನಿಯಂತ್ರಣ ರೇಖೆ ದಾಟಿ ಭಾರತೀಯ ಸೈನಿಕರು ಪಾಕ್ ಭಯೋತ್ಪಾದಕ ಶಿಬಿರ ಮೇಲೆ ನಡೆಸಿದ ನಿರ್ಧಿಷ್ಟ ಗುರಿ ದಾಳಿ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸದ್ಯದಲ್ಲೇ ಸಾಕ್ಷ್ಯ ಬಿಡುಗಡೆಯಾಗುವ ಸಾಧ್ಯತೆಯೂ ಇದೆ.
ದಾಳಿ ಸಂಬಂಧ ಇತ್ತೀಚೆಗಷ್ಟೇ ಪ್ರತಿಕ್ರಿಯಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದಾಳಿ ಸಂಬಂಧ ಸಾಕ್ಷ್ಯ ಕೇಳಿದ್ದರಲ್ಲದೆ, ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್, ನಿರ್ಧಿಷ್ಟ ಗುರಿ ದಾಳಿಯೇ ಸುಳ್ಳು ಎಂದು ಪ್ರತಿಕ್ರಿಯಿಸಿದ್ದರು. ಆದರೆ ಈ ಎಲ್ಲಾ ಅನುಮಾನಗಳಿಗೆ ತೆರೆ ಎಳೆಯಲು ಕೇಂದ್ರ ಮುಂದಾಗಿದೆ. ಈ ಸಂಬಂಧದ ಸೂಕ್ತ ಸಾಕ್ಷ್ಯಾಧಾರಗಳು ಶೀಘ್ರ ಹೊರಬರುವ ನಿರೀಕ್ಷೆ ಮನೆ ಮಾಡಿದೆ.
ಈ ನಡುವೆಯೇ ದಾಳಿ ನಡೆದ ತತ್ಕ್ಷಣ ಸಾಕ್ಷ್ಯಗಳನ್ನು ಬಹಿರಂಗ ಪಡಿಸದೇ ಇರಲು ಹಲವು ತಾಂತ್ರಿಕ ಸಮಸ್ಯೆಗಳೂ ಕಾರಣ ಎಂಬುದು ಗಮನಾರ್ಹ. ರಾಷ್ಟ್ರೀಯ ಭದ್ರತೆಯ ಸಮಸ್ಯೆಯನ್ನು ರಾಜಕೀಯಗೊಳಿಸುವ ಪ್ರಕ್ರಿಯೆಗಳು ಎಂದಿಗೂ ರಚನಾತ್ಮಕವಲ್ಲ. ಬಹುಮುಖ್ಯವಾಗಿ, ಈ ರೀತಿಯ ಕಾರ್ಯಾಚರಣೆ ಸಂದರ್ಭದಲ್ಲಿ ಗೋಪ್ಯತೆಯನ್ನು ಕಾಯ್ದಿಟ್ಟುಕೊಳ್ಳುವುದು ಸೇನೆಯ ಬಹುಮುಖ್ಯ ಸವಾಲು. ಇಂತಹ ಹಲವು ಕಾರಣದಿಂದಾಗಿ ಕಾರ್ಯಾಚರಣೆ ನಡೆದ ತಕ್ಷಣ ಸಾಕ್ಷ್ಯಾಧಾರಗಳ ಬಹಿರಂಗ ಸಾಧ್ಯವಿಲ್ಲ. ನಿರ್ಧಿಷ್ಟ ಗುರಿ ದಾಳಿಯಲ್ಲಿ ಪಾಲ್ಗೊಳ್ಳುವ ಭದ್ರತಾ ಸಿಬ್ಬಂದಿಯ ರಕ್ಷಣೆಯನ್ನೂ ಇಲ್ಲಿ ಪರಿಗಣಿಸಬೇಕಾಗುತ್ತದೆ. ಅಲ್ಲದೆ, ಸಾಕ್ಷ್ಯಗಳ ಬಹಿರಂಗವೆಂದರೆ ಅಲ್ಲಿ ಸೂಕ್ಷ್ಮ ಮಾಹಿತಿಗಳೂ ಒಳಗೊಳ್ಳುವುದರಿಂದ ಎಚ್ಚರಿಕೆ ಅಗತ್ಯ. ಇದಕ್ಕೆ ಸಾಕಷ್ಟು ಸಮಯಾವಕಾಶವೂ ಬೇಕು.
ವಿಡಿಯೋ ಪುರಾವೆ
ನಿರ್ಧಿಷ್ಟ ಗುರಿ ದಾಳಿ ನಡೆದಿದ್ದಕ್ಕೆ ಇರುವ ಬಲವಾದ ಪುರಾವೆಯೆಂದರೆ, ದಾಳಿ ನಡೆದ ಸ್ಥಳ. ದಿ ಎಕನಾಮಿಕ್ಸ್ ಟೈಮ್ಸ್ ಪತ್ರಿಕೆಯ ವರದಿ ಪ್ರಕಾರ, ಭಾರತೀಯ ಸೇನಾ ಪಡೆಗಳಿಗೆ ನಿದರ್ಿಷ್ಟ ಗುರಿ ದಾಳಿಯ ವಿಡಿಯೋ ಚಿತ್ರೀಕರಣಕ್ಕೂ ಕೇಂದ್ರ ಸಕರ್ಾರ ಹಸಿರು ನಿಶಾನೆ ನೀಡಿತ್ತು. ದಾಳಿ ಸಂಬಂಧ ಅನುಮಾನ ವ್ಯಕ್ತವಾದ ಬೆನ್ನಲ್ಲೇ, ಖುದ್ದು ಗೃಹ ಸಚಿವ ರಾಜನಾಥ ಸಿಂಗ್ , ಸ್ವಲ್ಪ ಸಮಯ ಕಾಯಿರಿ, ನಂತರ ನೋಡಿ ಎಂದು ಹೇಳಿದ್ದಾರಲ್ಲದೆ, ಬಿಜೆಪಿ ಮುಖಂಡರು ದಾಳಿ ಸಂಬಂಧದ ವಿಡಿಯೋ ಸಧ್ಯದಲ್ಲೇ ಬಹಿರಂಗಗೊಳ್ಳುವುದಾಗಿ ಹೇಳಿದ್ದಾರೆ.
ದಾಳಿಯಲ್ಲಿ ಪಾಳ್ಗೊಂಡಿದ್ದ ಸೇನಾ ಸಿಬ್ಬಂದಿ ಗುರುತು ಹಾಗೂ ದಾಳಿ ನಡೆದ ಸ್ಥಳ ಸೇರಿದಂತೆ ಹಲವು ಸೂಕ್ಷ್ಮ ಭಾಗಗಗಳು ವಿಡಿಯೋದಲ್ಲಿರುವುದರಿಂದ ಅವುಗಳನ್ನು ತೆಗೆದುಹಾಕಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಈ ಕಾರಣಕ್ಕಾಗೇ ದಾಳಿ ನಡೆದ ತತಕ್ಷಣವೇ ಭಾರತ ಏಕೆ ವಿಡಿಯೋ ಫುಟೆಜ್ ಬಿಡುಗಡೆ ಮಾಡಲಿಲ್ಲ ಎಂಬುದು ತಿಳಿಯುತ್ತದೆ.
ಪ್ರತ್ಯಕ್ಷ ದರ್ಶಿಗಳು
ಎರಡನೇ ಸಾಕ್ಷ್ಯವೆಂದರೆ, ಗಡಿ ನಿಯಂತ್ರಣ ರೇಖೆ ಸಮೀಪವಿದ್ದ ಪತ್ಯಕ್ಷದರ್ಶಿಗಳು. ದಾಳಿ ನಡೆದ ಬಗ್ಗೆ ಸ್ಥಳೀಯರು ಮಾಹಿತಿಗಳನ್ನು ನೀಡಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಎಲ್ಒಸಿ ಬಳಿಗೆ ಉಗ್ರರ ಗುಂಪು ಪ್ರಯಾಣ ಬೆಳೆಸುವ ಮುನ್ನ ಆಲ್ ಹಾವಿ ಸೇತುವೆ ಸಮೀಪ ನಡೆದ ಸ್ಫೋಟವನ್ನು ಸ್ಥಳೀಯ ನಿವಾಸಿಗಳು ಕಣ್ಣಾರೆ ಕಂಡಿದುದಾಗಿ ವರದಿಯಾಗಿದೆ. ಈ ಸಂದರ್ಭ ಎರಡೂ ಗುಂಪುಗಳ ನಡುವೆ ಗುಂಡಿನ ದಾಳಿಯೂ ನಡೆಯಿತು. ದಾಳಿ ನಡೆದ ಮಾರನೇ ದಿನ ಐದು ಶವಗಳನ್ನು ಟ್ರಕ್ ಮೂಲಕ ಚಲ್ಹಾನಾ ಸಮೀಪವಿರುವ ಲಷ್ಕರ್ ಇ ತೊಯಿಬಾ ಶಿಬಿರಕ್ಕೆ ಸಾಗಿಸಿ, ರಹಸ್ಯವಾಗಿ ಸುಡಲಾಯಿತು ಎಂದು ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಗುಂಡಿನ ಚಕಮಕಿ ಹಿನ್ನೆಲೆಯಲ್ಲಿ ಆಲ್ ಹಾವಿ ಸೇತುವೆ ಸಮೀಪದ ಹಲವು ಕಟ್ಟಡಗಳು ಹಾನಿಗೊಳಗಾಗಿವೆ.
ಇತರೆ ಸಾಕ್ಷ್ಯಗಳು
ನಿರ್ಧಿಷ್ಟ ಗುರಿ ದಾಳಿ ನಡೆದ ಸ್ಥಳದ ಸಮೀಪವೇ ದಾಳಿಯಲ್ಲಿ ಸಾವನ್ನಪ್ಪಿದ ಉಗ್ರರ ಶವಗಳನ್ನು ರಹಸ್ಯವಾಗಿ ಸುಡಲಾಯಿತು ಎಂದು ವಾಹಿನಿಯೊಂದು ವರದಿಮಾಡಿದೆ. ದಾಳಿ ಸಂದರ್ಭದಲ್ಲಿ ಸಾವನ್ನಪ್ಪಿದ ಉಗ್ರರ ಉಪಗ್ರಹ ಚಿತ್ರಗಳನ್ನೂ ಮಾಧ್ಯಮಗಳು ಬಹಿರಂಗಪಡಿಸಿವೆ. ನಿರ್ಧಿಷ್ಟ ಗುರಿ ದಾಳಿ ಭಾರತೀಯ ಸೇನಾಪಡೆಗೆ ನಂಬಲರ್ಹ ಸಾಕ್ಷ್ಯವಾಗಿದೆ ಎಂದಿರುವ ಉನ್ನತ ಭದ್ರತಾ ಮೂಲಗಳು, ಈ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ವಿಡಿಯೋ ಅಥವಾ ಫೋಟೋಗಳನ್ನು ನಿರ್ಬಂಧಿಸದಂತೆ ಸಲಹೆ ನೀಡಿದೆ ಎಂದು ಹೇಳಲಾಗಿದೆ.
ಸರ್ಕಾರದ ಮೇಲೆ ನಂಬಿಕೆಯಿಡಿ
ಈ ನಡುವೆ ನಿರ್ಧಿಷ್ಟ ಗುರಿ ದಾಳಿ ಸಂಬಂಧದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಕಿರೇನ್ ರಿಜಿಜು, ಸರ್ಕಾರದ ಮೇಲೆ ಎಲ್ಲರೂ ನಂಬಿಕೆ ಇಡಬೇಕು ಹಾಗೂ ಸೇನಾಪಡೆಗೆ ಸೂಕ್ತ ಸಮಯಾವಕಾಶ ನೀಡುವಂತೆ ಪ್ರತಿಕ್ರಿಯಿಸಿದ್ದಾರೆ.
ದಾಳಿ ಸಂಬಂಧ ಸೂಕ್ತ ಸಾಕ್ಷ್ಯ ನೀಡುವಂತೆ ಕಾಂಗ್ರೆಸ್ ಮುಖಂಡರ ವ್ಯಾಪಕ ಒತ್ತಡದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಉಮಾ ಭಾರತಿ, ನಿರ್ಧಿಷ್ಟ ಗುರಿ ದಾಳಿ ಕುರಿತು ಅನುಮಾನ ಇರುವವರು ಪಾಕಿಸ್ಥಾನದ ನಾಗರೀಕತ್ವ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.
ಈ ನಡುವೆ ದಾಳಿ ಸಂಬಂಧದ ವಿಡಿಯೋ ತುಣುಕುಗಳನ್ನು ಸೇನಾಪಡೆ ಸರ್ಕಾರಕ್ಕೆ ಹಸ್ತಾಂತರಿಸಿದೆ ಎಂದು ಕೇಂದ್ರ ಸಚಿವ ಹನ್ಸರಾಜ್ ಅಹಿರ್ ಸ್ಪಷ್ಟಪಡಿಸಿದ್ದಾರೆ.















