ಬೆಂಗಳೂರು, ಅ.18: ಪೊಲೀಸರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ನಡುವೆ ಭಿನ್ನಮತ ಉಂಟಾಗಿದೆ.
ಈಗಾಗಲೇ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಾಕಷ್ಟು ಒತ್ತಡಗಳು ಬಂದಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದು ಇಲ್ಲಿ ಒಮ್ಮತ ಮೂಡದೆ ಗೃಹ ಸಚಿವರು ಅರ್ಧದಲ್ಲೇ ಮುನಿಸಿಕೊಂಡು ಎದ್ದು ಹೋಗಿದ್ದಾರೆ.
ಪರಮೇಶ್ವರ್ ಅವರು ಶೆ.35ರಷ್ಟು ಭತ್ಯೆ ಹೆಚ್ಚಳ ಪ್ರಸ್ತಾಪವನ್ನು ಮುಂದಿಟ್ಟಾಗ ಅದಕ್ಕೆ ಆರ್ಥಿಕ ಇಲಾಖೆ ಉಸ್ತುವಾರಿ ಹೊತ್ತಿರುವ ಸಿಎಂ ಒಪ್ಪದೆ ಹಗ್ಗ-ಜಗ್ಗಾಟ ನಡೆದು ಕೊನೆಗೆ ಶೇ.21ಕ್ಕೆ ಪಟ್ಟು ಹಿಡಿಯಲಾಯಿತು. ಆದರೂ ಅದಕ್ಕೆ ಒಪ್ಪಿಗೆ ಸಿಗಲಿಲ್ಲ. ಯಾವುದೇ ಕಾರಣಕ್ಕೂ ಶೇ.18ಕ್ಕಿಂತ ಹೆಚ್ಚಿನ ವೇತನ ನಿಡಲು ಸಾಧ್ಯವೇ ಇಲ್ಲ ಎಂದು ಸಿಎಂ ನೇರವಾಗಿ ಹೇಳಿದ್ದರಿಂದ ಪರಮೇಶ್ವರ್ ಮುನಿಸಿಕೊಂಡು ಸಭೆಯಿಂದಲೇ ಹೊರ ನಡೆದು ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.















