ಜಿನೀವಾ, ಸೆ.೧೫: ಬಲೂಚಿಸ್ತಾನದಲ್ಲಿ ವ್ಯಾಪಕವಾಗಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದ್ದು, ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಎದುರಾಗಿದೆ. ಇದರ ಪರಿಣಾಮ ಕಾಶ್ಮೀರದಲ್ಲಿ ಇಂದಿಗೂ ಹಿಂಸಾಚಾರ ಮುಂದುವರೆದಿದೆ ಎಂದು ಭಾರತ ಹೇಳಿದೆ.
ವಿಶ್ವಸಂಸ್ಥೆಯ ವೇದಿಕೆಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಬಲೂಚಿಸ್ತಾನ ವಿಚಾರವನ್ನು ಭಾರತ ಪ್ರಸ್ತಾಪ ಮಾಡಿ, ಜಾಗತಿಕವಾಗಿ ಭಾರತ ಮಹತ್ವದ ಹೆಜ್ಜೆ ಇಟ್ಟಿದೆ. ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ಅಧಿವೇಶನವೊಂದರಲ್ಲಿ ಮಾತನಾಡಿರುವ ದೇಶದ ರಾಯಭಾರಿ ಖಾಯಂ ಪ್ರತಿನಿಧಿ ಅಜಿತ್ ಕುಮಾರ್ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ ಮಾಡುತಿದೆ ಎಂದು ಪಾಕಿಸ್ಥಾನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಕಾಶ್ಮೀರ ವಿಚಾರ ಸಂಬಂಧ ನೀಡಲಾಗಿರುವ ವೇದಿಕೆಯನ್ನು ಪಾಕ್ ದುರಪಯೋಗ ಮಾಡಿಕೊಳ್ಳುತ್ತಿದೆ. ಗಡಿಯಲ್ಲಿ ಕದನ ವಿರಾಮ ಪಾಲಿಸಬೇಕು. ಭಯೋತ್ಪಾದಕರಿಗೆ ಮೂಲಸೌಕರ್ಯ ಕಲ್ಪಿಸಬಾರದು. ಭಯೋತ್ಪಾದಕರಿಗೆ ಆಶ್ರಯ ನೀಡಬಾರದು ಎಂದು ಜಾಗತಿವಾಗಿ ಎಚ್ಚರಿಕೆ ನೀಡಿದ್ದರೂ, ಅದು ತನ್ನ ಹಳೆಯ ಅಭ್ಯಾಸವನ್ನೆ ಮುಂದುವರೆಸಿದೆ ಎಂದು ಆಕ್ಷೇಪವ್ಯಕ್ತಪಡಿಸಿದೆ.
ಪಾಕಿಸ್ಥಾನ ಭಯೋತ್ಪಾದನಾ ಉತ್ಪಾದಕ ಕೇಂದ್ರವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅತಿಕ್ರಮಣ ದಾಳಿ ನಡೆಸುತ್ತಿದೆ. ಪಾಕಿಸ್ಥಾನ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಎಲ್ಲೆಡೆ ಹರಡಿಸುತ್ತಿದೆ. ತನ್ನ ದೇಶದಲ್ಲಿ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿ ಸುಧಾರಿಸಿಕೊಳ್ಳಬೇಕಿದೆ.














