ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಸುಮಾರು 7 ವರ್ಷ 7 ತಿಂಗಳಿನಿಂದ ನಾಪತ್ತೆಯಾಗಿದ್ದ ಬಾಲಕಿಯೊಬ್ಬಳು ಹೆತ್ತವರ ಮಡಿಲು ಸೇರಿದ್ದು, ಈ ಭಾವುಕ ಕ್ಷಣಗಳಿಗೆ ಅಧಿಕಾರಿಗಳು ಸಾಕ್ಷಿಯಾಗಿದ್ದಾರೆ.
ಘಟನೆ ಹಿನ್ನೆಲೆ:
2015ರ ಎಪ್ರಿಲ್ 25ರಂದು ಧಾರವಾಡದ ಬಾಲಕಿಯರ ಸರ್ಕಾರಿ ಬಾಲಮಂದಿರ ಬೆಂಗಳೂರಿಂದ ಅನಾಥ ಮಗುವೆಂದು ಮನೋವಿಕಲ ಬಾಲಕಿಯರ ಸರಕಾರಿ ಬಾಲಮಂದಿರ, ಉಣಕಲ್, ಹುಬ್ಬಳ್ಳಿ ಸಂಸ್ಥೆಗೆ ವರ್ಗಾಯಿಸಲಾಗಿತ್ತು. ಬಾಲಕಿಯ ಆಧಾರ್ ಕಾರ್ಡ್ ಮಾಡಿಸುವಾಗ ಬಾಲಕಿಯ ವಿಳಾಸ ಪತ್ತೆಯಾಗಿದ್ದು, ಆಧಾರ ಕಾರ್ಡ್’ನಲ್ಲಿ ತಂದೆ ತಾಯಿಯ ಹೆಸರು ಇರದೇ, ಬಾಲಕಿಯ ಹೆಸರು ಹಾಗೂ ಊರಿನ ಹೆಸರು ನಮೂದಾಗಿದ್ದು, ಪಾಲಕರ ಪತ್ತೆ ಹಚ್ಚುವುದೇ ಒಂದು ಸವಾಲಿನ ಕೆಲಸವಾಗಿತ್ತು.
ಇಂತಹ ಒಂದು ಸವಾಲನ್ನು ಸಮರ್ಥವಾಗಿ ಎದುರಿಸಿ, ಇಲಾಖೆಯ ಸಹಯೋಗದೊಂದಿಗೆ ನಿರಂತರ ಪ್ರಯತ್ನದಿಂದ ಪಾಲಕರ ಪತ್ತೆ ಹಚ್ಚುವ ಕೆಲಸ ಮಾಡಿದ್ದು, ಮನೋವಿಕಲ ಬಾಲಕಿಯರ ಬಾಲಮಂದಿರದ ಅಧೀಕ್ಷಕರಾದ ಜಾಹೀದಾ ಹುಸೇನಸಾಬ ಕಾಲೇಖಾನ. ಇವರ ಅವಿರತ ಪ್ರಯತ್ನದಿಂದ ಪಾಲಕರನ್ನು ಸಂಪರ್ಕಿಸಿ ಅವರ ಮನ ಒಲಿಸಿ, ಮತ್ತೆ ಮಗುವನ್ನು ಮನೆಗೆ ಕರೆದೊಯ್ಯುವಂತೆ ಮಾಡಿದ್ದಾರೆ.
Also read: ಪುತ್ತೂರಿನ ಒಳಿತು ಮಾಡು ಮನುಷ್ಯ ತಂಡದ ಕಾರ್ಯ ಶ್ಲಾಘನೀಯ: ಸದಾಶಿವ ರೈ
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್. ಎಂ. ಕಂಟೆಪ್ಪಗೌಡ್ರ, ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಜಿಲ್ಲಾ ತನಿಖಾ ಸಮಿತಿ ಸದಸ್ಯ ಶಂಕರ ಹಲಗತ್ತಿ, ಲೀಗಲ್ ಕಂ ಪ್ರೊಬೇಶನ್ ಆಫೀಸರ್ ನೂರಜಾನ್ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಬಾಲಕಿಯನ್ನು ಪಾಲಕರ ವಶಕ್ಕೆ ನೀಡಲಾಯಿತು. ಇಷ್ಟು ವರ್ಷದ ನಂತರ ಪೋಷಕರ ಮಡಿಲು ಸೇರಿದ ಈ ಭಾವುಕ ಕ್ಷಣಕ್ಕೆ ಎಲ್ಲ ಅಧಿಕಾರಿಗಳು ಸಾಕ್ಷಿಯಾದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















