ಕಲ್ಪ ಮೀಡಿಯಾ ಹೌಸ್ | ಸೊರಬ |
ರಾಮತೀರ್ಥ ಮೇಲ್ಭಾಗದಲ್ಲಿ ಕಾಲನಿ ನಿರ್ಮಾಣವಾಗುತ್ತಿದೆ. ತ್ಯಾಜ್ಯ ನೀರು ಇಂಗಿ ತೀರ್ಥಕ್ಕೆ ಬರುತ್ತಿದೆ. ರಾಮತೀರ್ಥ ನಿರ್ವಹಣೆ, ಸ್ವಚ್ಛತೆ ಇಲ್ಲದೆ ಹಾಳಾಗುತ್ತಿದೆ. ರಾಮಲಕ್ಷ್ಮಣ, ಸೀತಾ ಧಾರೆಗಳು ಪುಟ್ಟ ಜಲಪಾತದಂತೆ ಇದ್ದವು. ಈಗ ಸೀತೆ ಹೆಸರಿನ ನೀರಿನ ಹರಿವು ಪೂರ್ಣ ನಿಂತಿದೆ. ತೀರ್ಥದ ಮೇಲ್ಭಾಗದಲ್ಲಿ ಕಟ್ಟಡ, ವಸತಿ ನಿರ್ಮಾಣಕ್ಕೆ, ಪಟ್ಟಣ ಪಂಚಾಯತ ಅವಕಾಶ ನೀಡಬಾರದು. ಅರೆಸಾಮಿ ಕೆರೆ, ರಾಮತೀರ್ಥದ ಜಲಮೂಲ. ಇದರ ಸಂರಕ್ಷಣೆ ಆಗಬೇಕು. ಗೇರುಸಿಪ್ಪೆ ಎಣ್ಣೆ ತಯಾರಿ ಘಟಕದ ತ್ಯಾಜ್ಯ ರಾಮತೀರ್ಥಕ್ಕೆ ಬರುತ್ತಿದೆ. ರಾಮತೀರ್ಥದಿಂದ ಸಿಹಿನೀರು ಕರ್ಕಿ ಹಳ್ಳಗಳಿಗೆ ಬರುತ್ತದೆ. ನಗರ ತ್ಯಾಜ್ಯ ವಿಲೇವಾರಿ ಘಟಕದ ತ್ಯಾಜ್ಯ ನೀರು ಸಹಾ ರಾಮತೀರ್ಥ ಕಡೆ ಬರುತ್ತದೆ. ಇವೆಲ್ಲಕ್ಕೆ ತಡೆ ಹಾಕಬೇಕು. ಎಂದು ಹೊನ್ನಾವರದ ಪ್ರಜ್ಞಾವಂತ ನಾಗರೀಕರು, ಜನಪ್ರತಿನಿಧಿಗಳು ರಾಮತೀರ್ಥ ಉಳಿಸಿ ಸಮಾಲೋಚನಾ ಸಭೆಯಲ್ಲಿ ಆಗ್ರಹ ಮಾಡಿದರು.
ಹೊನ್ನಾವರದ ಇತಿಹಾಸ ಪುರಾಣ ಪ್ರಸಿದ್ಧ ರಾಮತೀರ್ಥದ ಸಂರಕ್ಷಣೆ ಕುರಿತು ಪುರಾತತ್ವ ಇಲಾಖೆ, ವೃಕ್ಷಲಕ್ಷ ಆಂದೋಲನ, ಶಿವಮೊಗ್ಗ ಸಹ್ಯಾದ್ರಿ ಪರಂಪರಿಕ ಅಭಿವೃದ್ಧಿ ಪ್ರಾಧಿಕಾರ, ಜೀವವೈವಿಧ್ಯ ಮಂಡಳಿ, ಪಟ್ಟಣ ಪಂಚಾಯತ, ತಾಲೂಕಾ ಪಂಚಾಯತ ಹಾಗೂ ಕರ್ಕಿ ಪಂಚಾಯತ, ಕಂದಾಯ ಮತ್ತು ಅರಣ್ಯ ಇಲಾಖೆ, ಅಧಿಕಾರಿಗಳ ತಜ್ಞರ ತಂಡ ಸ್ಥಳ ಭೇಟಿ ಸಮಿಕ್ಷೆ ನಡೆಸಿತು.
ಪುರಾತತ್ವ ಇಲಾಖೆ ಉಪ ನಿರ್ದೇಶಕ ಡಾ. ಶೇಜೇಶ್ವರ ಅವರು ರಾಜ್ಯ ಪುರಾತತ್ವ ಇಲಾಖೆ ವ್ಯಾಪ್ತಿಯಲ್ಲಿ ರಾಮತೀರ್ಥ ಮತ್ತು ಇಲ್ಲಿನ ರಾಮಲಿಂಗ ದೇವಸ್ಥಾನ ಬರುತ್ತದೆ. ಈ ಸ್ಥಳದ ಸುತ್ತ ೩೦೦ ಮೀಟರವರೆಗೆ ಪುರಾತತ್ವ ರಕ್ಷಿತ ವಲಯವಾಗಿರುತ್ತದೆ. ಕಟ್ಟಡ ನಿರ್ಮಾಣ, ಇತರ ಕಾಮಗಾರಿ ನಡೆಸಲು ಇಲ್ಲಿ ಅವಕಾಶವಿಲ್ಲ, ಜೀವ ವೈವಿಧ್ಯ ಮಂಡಳಿ ನಿಕಟ ಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ರಾಮತೀರ್ಥ ನಿರ್ವಹಣಾ ಸಮಿತಿಯನ್ನು ತಹಶೀಲ್ದಾರ ಅಧ್ಯಕ್ಷತೆಯಲ್ಲಿ ರಚಿಸುವ ಮೂಲಕ ಪಾರಂಪರಿಕ ಜಲಮೂಲದ ರಕ್ಷಣೆಯಾಗಲಿ ಎಂದರು.
Also read: ಡಿ.13ರಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಉದ್ಯೋಗ ಮೇಳ
ನಗರ ಸಭೆಯ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ರಾಮತೀರ್ಥ ಮೇಲ್ಭಾಗದಲ್ಲಿ ಕೊಳವೆ ಬಾವಿ ನಿರ್ಮಾಣಕ್ಕೆ ನಿಯಂತ್ರಣ ಹಾಕುತ್ತೇವೆ. ಅಲ್ಲಿ ಕಟ್ಟಡ ನಿರ್ಮಾಣಕ್ಕೆ ನಿಯಂತ್ರಣ ಹಾಕುತ್ತೇವೆ ಎಂದು ತಿಳಿಸಿದರು.
ಪ್ರಾಧಿಕಾರದ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಅವರು ಜಲಮೂಲ, ಪವಿತ್ರ ತೀರ್ಥ, ಸಿಹಿನೀರ ತಾಣವಾದ ರಾಮ ತೀರ್ಥ ಪುರಾತತ್ವ ಇಲಾಖೆ ಕಾಯಿದೆ ಅಡಿ ರಕ್ಷಿಸಲು ಎಲ್ಲರ ಸಹಕಾರ ಅವಶ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ನಾಗರಾಜ್ ಅವರು ತಜ್ಞರು ಹಾಗೂ ನಾಗರಿಕರು ಇಲಾಖೆ ಅಧಿಕಾರಿಗಳ ಅಭಿಪ್ರಾಯ ಆಧರಿಸಿ ರಾಮತೀರ್ಥ ಸಂರಕ್ಷಣೆಗೆ ಮುಂದಾಗುತ್ತೇವೆ. ರಾಮತೀರ್ಥ ನಿರ್ವಹಣಾ ಸಮಿತಿ ರಚಿಸಿ ನಂತರ ಕ್ರಮಕ್ಕೆ ಮುಂದಾಗುತ್ತೇವೆ ಎಂದರು.
ರಾಮತೀರ್ಥ ನಿರ್ವಹಣೆ ಹಾಗೂ ಸಂರಕ್ಷಣೆಗೆ ನಿರ್ವಹಣಾ ಸಮಿತಿ ರಚಿಸಲು ವಿವಿಧ ಇಲಾಖೆಗಳು, ಸಂಘಸಂಸ್ಥೆಗಳ ಸಮಾಲೋಚನಾ ಸಭೆಯ ಮಹತ್ವದ ನಿರ್ಧಾರ ಕೈಗೊಂಡಿತು.
ಪಟ್ಟಣ ಪಂಚಾಯತಿ ಅಧ್ಯಕ್ಷ ಭಾಗ್ಯ, ಕರ್ಕಿ ಪಂಚಾಯತಿ ಅಧ್ಯಕ್ಷೆ ಕಲ್ಪನಾ, ಹಾಗೂ ಇತರ ಜನ ಪ್ರತಿನಿಧಿಗಳು, ಸಹಾಯಕ ಅರಣ್ಯ ಅಧಿಕಾರಿ ಸುದರ್ಶನ, ಕೃಷ್ಣಮೂರ್ತಿ ಹೆಬ್ಬಾರ್, ಹರಿಶ್ಚಂದ್ರ ನಾಯ್ಕ, ಪೋಲೀಸ್ ಅಧಿಕಾರಿ ಶ್ರೀಧರ ರಾಮತೀರ್ಥ ರಕ್ಷಣೆಗೆ ಹಲವು ಸಲಹೆ ನೀಡಿದರು. ಜೀವವೈವಿಧ್ಯ ಮಂಡಳಿಯ ಸದಸ್ಯ ಡಾ. ಪ್ರಕಾಶ ಮೇಸ್ತ ವಿವರ ಪ್ರಾಸ್ತಾವಿಕ ಮಾತನಾಡಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















