ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಒಂದು ಯುನಿಟ್ ರಕ್ತದಾನ Blood donation ಮಾಡುವುದರಿಂದ ನಾಲ್ಕು ಜೀವಗಳನ್ನು ಉಳಿಸಲು ಸಾಧ್ಯವಿದೆ. ಕೇವಲ 20 ನಿಮಿಷದಲ್ಲಿ ಮಾಡಬಹುದಾದ ಸಮಾಜಸೇವೆಯೆಂದರೆ ಅದು ರಕ್ತದಾನ ಮಾತ್ರ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್ ವೆಂಕಟೇಶ್ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ Kuvempu University ಯುವರೆಡ್ಕ್ರಾಸ್ ಘಟಕ, ಶಿವಮೊಗ್ಗದ ಆಶಾ ಜ್ಯೋತಿ ಸಂಜೀವಿನಿ ರಕ್ತ ಕೇಂದ್ರ, ರೆಡ್ಕ್ರಾಸ್ ಸಂಜೀವಿನಿ ರಕ್ತ ಕೇಂದ್ರಗಳು ಜಂಟಿಯಾಗಿ ವಿವಿಯ ಓಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ತಂತ್ರಜ್ಞಾನದಲ್ಲಿ ಒಂದು ಯುನಿಟ್ (350 ಮಿ.ಲೀ.) ರಕ್ತವನ್ನು ಕೆಂಪು, ಬಿಳಿರಕ್ತಕಣಗಳು, ಪ್ಲಾಟೆಲೆಟ್ಗಳು ಮತ್ತು ಪ್ಲಾಸ್ಮಾ ಸೇರಿದಂತೆ ನಾಲ್ಕು ಭಾಗಗಳಾಗಿ ವಿಂಗಡಿಸಿ ಅವಶ್ಯವಿರುವವರಿಗೆ ಸಂಬಂಧಿತ ರಕ್ತದ ಅಂಶವನ್ನು ನೀಡಲಾಗುತ್ತದೆ ಎಂದರು.
Also read: ಗರ್ಭಗುಡಿ ಪ್ರವೇಶಿಸಿದ ರಾಮ ಲಲ್ಲಾ ವಿಗ್ರಹ ಎಷ್ಟು ತೂಕವಿದೆ? ಸಾಗಿಸಿದ್ದು ಹೇಗೆ?
ಮನುಷ್ಯನ ದೇಹದಲ್ಲಿ ಪ್ರತಿದಿನ 100 ಮಿ.ಲೀ. ರಕ್ತ ಉತ್ಪಾದನೆಯಾಗುತ್ತದೆ. 120 ದಿನಗಳ ನಂತರ ಆ ರಕ್ತಕಣಗಳು ಸಾಯುತ್ತವೆ. ರಕ್ತದಾನ ಮಾಡುವುದರಿಂದ ರಕ್ತಕಣಗಳು ವ್ಯರ್ಥವಾಗುವುದನ್ನು ತಡೆಯಬಹುದು ಹಾಗೂ ಹೆಚ್ಚೆಚ್ಚು ಹೊಸರಕ್ತ ಉತ್ಪಾದನೆಯಾಗುತ್ತದೆ ಎಂದು ಪ್ರೊ. ಎಸ್ ವೆಂಕಟೇಶ್ ಸಲಹೆಯಿತ್ತರು.
ವಿವಿಯ ಓಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ವಿವಿಯ ಅಧ್ಯಾಪಕ ಮತ್ತು ಅಧ್ಯಾಪಕೇತರ ವರ್ಗ ಹಾಗೂ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದ್ದು ಒಟ್ಟು 105 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ ಎಂದು ರೆಡ್ಕ್ರಾಸ್ ಘಟಕ ತಿಳಿಸಿದೆ.
ಈ ಸಂದರ್ಭದಲ್ಲಿ ವಿವಿಯ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ. ರವೀಂದ್ರಗೌಡ ಎಸ್ ಎಂ, ಡಾ. ಎನ್ ಡಿ ವಿರೂಪಾಕ್ಷ, ಡಾ. ಗಜಾನನ ಪ್ರಭು, ಉಪನ್ಯಾಸಕರಾದ ಶಂಕರ್ಗುರು, ಸತ್ಯ ನಾರಾಯಣ್, ಸಂಪತ್ಕುಮಾರ್ ಸೇರಿದಂತೆ ವಿವಿಯ ಅಧ್ಯಾಪಕ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post