ಕಲ್ಪ ಮೀಡಿಯಾ ಹೌಸ್ | ವಯನಾಡು |
ವಯನಾಡ್ನಲ್ಲಿ ಸಂಭವಿಸಿದ ಭೂಕುಸಿತದಿಂದ #Landslid in Wayanad ಜಲಸಮಾಧಿಯಾದವರ ಮನ ಕಲುಕುವ ಕಥೆಗಳನ್ನು ಕೇಳಿದರೆ ಎಂಥವರ ಕಣ್ಣನ್ನು ಒದ್ದೆ ಮಾಡುತ್ತಿವೆ. ಪ್ರಕೃತಿ ಮಾತೆಯ ಅರ್ಧ ಸೆಕೆಂಡ್ ಮುನಿಸಿಗೆ ನೂರು ಜನರ ಬದುಕು ಅಂತ್ಯವಾಗಿದೆ.
ಮೃತದೇಹಗಳನ್ನು ಇರಿಸಲು ಸ್ಥಳಾವಕಾಶದ ಕೊರತೆ ಎದುರಿಸುತ್ತಿರುವ ಹಿನ್ನೆಲೆ ಮಲ್ಪಾಡಿಯಲ್ಲಿ ಇರುವ ಸರ್ಕಾರಿ ಆಸ್ಪತ್ರೆಯ ಶವಾಗಾರವನ್ನು ತಾತ್ಕಾಲಿಕವಾಗಿ ಸಭಾಂಗಣಕ್ಕೆ ಸ್ಥಳಾತರಿಸಲಾಗಿದೆ.
ಅಂಬುಲೆನ್ಸ್ನಲ್ಲಿ ಬಂದ ಮೃತದೇಹ ತಮ್ಮವರದಲ್ಲ ಎಂದಾಗ ಅಯ್ಯೋ ನಮ್ಮವರ ಮೃತದೇಹ ಸಿಗುತ್ತದೆಯೋ ಇಲ್ಲವೋ ಎಂದು ಒದ್ದಾಡುತ್ತಾರೆ. ತಮ್ಮವರ ಮೃತದೇಹ ಕಂಡ ಕೂಡಲೇ ಕೆಲವರು ಮುಗಿಲು ಮುಟ್ಟುವ ರೀತಿ ಅಳುತ್ತಾರೆ. ಆದರೆ ಈ ಎರಡು ಸ್ಥಿತಿ ಇರದ ಒಂದಷ್ಟು ದೇಹಗಳು ಶವಾಗಾರ ಸೇರಿವೆ.
ದೇಹವೇ ಇರದ ಆರು ಬರೀ ಕೈಗಳು ಇದುವರೆಗೆ ಸಿಕ್ಕಿದೆ. ಇದು ಯಾರ ಯಾರ ಕೈ? ಪತ್ತೆ ಮಾಡುವುದು ಹೇಗೆ? ಇನ್ನೂ ಮೂರು ತಲೆ ಸಿಕ್ಕಿವೆ. ಆದರೆ ಮುಖದ ಗುರುತೇ ಸಿಗದ ಮಟ್ಟಕ್ಕೆ ಮುಖ ಜಜ್ಜಿವೆ. ಇವು ಯಾರ ತಲೆ ಅಂತಾ ಯಾರಿಗೆ ಗೊತ್ತಾಗುತ್ತೆ? ಹೀಗೆ ಎಂಟು ಪ್ರತ್ಯೇಕವಾದ ಕಾಲು ಸಿಕ್ಕಿವೆ. ಐದು ತಲೆ ಇರದ ಅರ್ಧ ದೇಹ ಸಿಕ್ಕಿವೆ. ಎಲ್ಲವನ್ನೂ ತಂದು ಎನ್ಡಿಆರ್ಎಫ್ನವರು ಶವಗಾರ ಸೇರಿಸಿದ್ದಾರೆ. ಇದನ್ನು ನೋಡುತ್ತಿದ್ದರೆ ವಿಧಿ ಎಂಥಾ ಕ್ರೂರಿ ಅನ್ನಿಸುತ್ತೆ.
ಚೂರಲ್ಮಲ ಊರಿನ ನಸೀಬು ಹೀಗಿತ್ತೇನೋ. ಸಮೃದ್ಧ ಊರು ಎಂಬ ಪಟ್ಟ. ಜೊತೆಗೆ ಇಲ್ಲಿದ್ದವರೆಲ್ಲ ಬಡತನದಲ್ಲೇ ಸುಖ ಉಂಡವರು. ಎಲ್ಲಾದಕ್ಕಿಂತಾ ಹೆಚ್ಚಾಗಿ ಶೇ.98 ಭಾಗದ ಜನ ಇಲ್ಲಿ ತಮ್ಮ ಸ್ವಂತ ಮನೆಗಳಲ್ಲೇ ವಾಸವಿದ್ದರು. ಇನ್ನೊಂದು ಎರಡು ವರ್ಷ ಕಳೆದಿದ್ದರೆ ಶೇ.100ಕ್ಕೆ 100 ರಷ್ಟು ಜನ ಸ್ವಂತ ಮನೆ ಹೊಂದಿರುತ್ತಿದ್ದರು.
ಐಷಾರಾಮಿ ಅಲ್ಲದಿದ್ದರೂ ತಮ್ಮದು ಅಂತಾ ಒಂದು ಸ್ವಂತ ನೆಲೆ ಕಟ್ಟಿಕೊಂಡವರು ಚೂರಲ್ಮಲ ಗ್ರಾಮದ ಜನ. ಗ್ರಾಮದಲ್ಲಿ ಕಟ್ಟಿದ ಐದು ಮನೆಗಳಿಗೆ ಇನ್ನು ಒಂದು ಎರಡು ತಿಂಗಳಲ್ಲಿ ಗೃಹಪ್ರವೇಶ ಆಗಬೇಕಿತ್ತು. ಈಗ ಇದರಲ್ಲಿ ಬಹುತೇಕರು ತಮ್ಮ ಸ್ವಂತ ಮನೆಗಳ ಜೊತೆಗೆ ಸಮಾಧಿಯಾಗಿದ್ದಾರೆ. ನೂರಾರು ಮನೆಗಳಲ್ಲಿ ಕಣ್ಣೀರ ಕೋಡಿ ಹರಿದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post