ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಅದ್ವೈತ ಸಾರುವ ಮಠಗಳು ಕೂಡಾ ದ್ವೈತವಾಗಿರಬಾರದು. ವಿದ್ಯಾರಣ್ಯರ ಹೃದಯ ವೈಶಾಲ್ಯ ಎಲ್ಲ ಗುರುಗಳಲ್ಲಿ ಬರಬೇಕಾದ್ದು ಸಮಾಜದ ಹಿತದೃಷ್ಟಿಯಿಂದ ಅಗತ್ಯ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ #Raghaweshwara Shri ಕರೆ ನೀಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 51ನೇ ದಿನವಾದ ಸೋಮವಾರ, ವಿದ್ಯಾರಣ್ಯರು ನೀಡಿದ ವೈಭವತಾಮ್ರಶಾಸನದ ಅನಾವರಣ ನೆರವೇರಿಸಿ ಆಶೀರ್ವಚನ ನೀಡಿದರು.
ನಮ್ಮದು ಸ್ವತಂತ್ರ ಅಸ್ತಿತ್ವದ, ರಾಜಮಾನ್ಯವಾದ, ರಾಜಪ್ರಭುತ್ವಕ್ಕೆ ಸಮಾನ ಸ್ಥಾನಮಾನ ಹೊಂದಿದ್ದ ಪೀಠ ಎನ್ನುವುದನ್ನು ತಿಳಿದುಕೊಳ್ಳಬೇಕು. ವಿದ್ಯಾರಣ್ಯರು ತೋರಿದ ಭಾವಾದ್ವೈತ ಮೆರೆಯುವುದು ಸಮಾಜದ ಹಿತದೃಷ್ಟಿಯಿಂದ ಅಗತ್ಯ. ಅದು ಶ್ರೀಶಂಕರರ ಮೂಲಸಂಕಲ್ಪಕ್ಕೆ, ಮೂಲ ಆಶಯಕ್ಕೆ ಅನುಸಾರವಾಗಿದೆ ಎಂದು ಹೇಳಿದರು.
ಈ ಅದ್ವೈತ ಭಾವ ಮುಂದುವರಿಯಬೇಕು. ವಿದ್ಯಾರಣ್ಯರು ಮೆರೆದ ಆದರ್ಶದಂತೆ ಎಲ್ಲ ಶಂಕರ ಪೀಠಗಳು ಏಕ ಮನಸ್ಸಿನಿಂದ ಇರಬೇಕು. ಈ ವೈಭವ ತಾಮ್ರಶಾಸನ ಎರಡೂ ಮಠಗಳ ಮಧ್ಯೆ ಎಂಥ ಅದ್ವೈತ ಇತ್ತು ಎನ್ನುವುದನ್ನು ಬಿಂಬಿಸುತ್ತದೆ. ದಕ್ಷಿಣಾಮ್ನಾಯದ ಪರಿಧಿಯ ಗೋಕರ್ಣ ಮಂಡಲದ ಆಚಾರ್ಯತ್ವವನ್ನು ವಿದ್ಯಾರಣ್ಯರು ಈ ಶಾಸನದ ಮೂಲಕ ಸ್ಥಿರೀಕರಿಸಿದರು. ಇದಾಗಿ 75 ವರ್ಷ ಕಳೆದ ಬಳಿಕ ಇಮ್ಮಡಿ ದೇವರಾಯ ಚಕ್ರವರ್ತಿ ಇದನ್ನು ದೃಢೀಕರಿಸಿದರು ಎಂದು ಬಣ್ಣಿಸಿದರು.
ರಘೂತ್ತಮ ಮಠ ಹಾಗೂ ಶೃಂಗೇರಿ ಮಠ ಶಂಕರಾಚಾರ್ಯ ಪರಂಪರೆಗಳು ಎರಡು ಮಠಗಳು. ಗೋಕರ್ಣ ಮಹಾಬಲೇಶ್ವರ ಸಮ್ಮುಖದಲ್ಲಿ ಉಭಯ ಗುರುಗಳ ಸಮಾಯೋಗ ನೆರವೇರುತ್ತದೆ. ಆ ಸಂದರ್ಭದಲ್ಲಿ ನಮ್ಮ ಮಠದ ಎಲ್ಲ ಹಿರಿಮೆ ಗರಿಮೆಗಳನ್ನು ಶೃಂಗೇರಿ ಮಠಾಧೀಶರು ಬಣ್ಣಿಸಿದ್ದಾರೆ. ಶಂಕರ ಪರಂಪರೆಯಲ್ಲಿ ವಿದ್ಯಾರಣ್ಯರಂಥ ಗುರುಗಳು ಮತ್ತೆ ಬಂದಿಲ್ಲ. ಮತ್ತೊಂದು ಮಠವನ್ನು ಅದ್ವಿತೀಯವಾಗಿ ಗೌರವಿಸಿದ ಅವರು ಶ್ರೀಮಠಕ್ಕೆ ರಾಜಲಾಂಛನಗಳೆಲ್ಲ ಇರಬೇಕು ಎಂದು ಅಭಿಪ್ರಾಯಪಟ್ಟಿದ್ದರು ಎಂಬುದಾಗಿ ವಿವರಿಸಿದರು.
ಶಂಕರಾಚಾರ್ಯರಿಂದ ಎರಡೂ ಪರಂಪರೆಗಳು ಬಂದಿವೆ. ಸುರೇಶ್ವರಾಚಾರ್ಯರ ಬಳಿಕ ಎರಡು ಮಠಗಳು ಮುಂದುವರಿಯುತ್ತವೆ. ಸುರೇಶ್ವರಾಚಾರ್ಯರ ಶಿಷ್ಯರಲ್ಲಿ ಜ್ಯೇಷ್ಠರು ಯಾರು ಎಂಬ ಪ್ರಶ್ನೆ ಬರುತ್ತದೆ. ನಾವು ಎರಡೂ ಮಠಗಳು ಒಂದೇ ಪರಂಪರೆಗೆ ಸೇರಿದವು. ರಘೂತ್ತಮ ಮಠ ಜ್ಯೇಷ್ಠ ಪರಂಪರೆ ಎಂದು ವಿದ್ಯಾರಣ್ಯರೇ ಹಾಡಿಹೊಗಳಿದ್ದಾರೆ. ಅದು ವಿದ್ಯಾರಣ್ಯರ ಹೃದಯ ವೈಶಾಲ್ಯವನ್ನು ತಿಳಿಸುತ್ತದೆ ಎಂದರು.
“ನಮ್ಮ ಮಠವನ್ನು ಶಂಕರಾಚಾರ್ಯ ಪೀಠವೇ ಅಲ್ಲ ಎಂಬ ಅಪಪ್ರಚಾರವೂ ನಡೆಯಿತು. ಹಾಗಿಲ್ಲದಿದ್ದರೆ ಈ ತಾಮ್ರಶಾಸನ ಹೇಗೆ ನೀಡಲಾಗಿದೆ? ಜತೆಗೆ ಸಿಂಹಾಸನ, ರಾಜಲಾಂಛನಗಳು ಹೇಗೆ ಬರುತ್ತವೆ ಎಂದು ಪ್ರಶ್ನಿಸಿದರು.
ರಘೂತ್ತಮ ಮಠ ಶಾಖಾ ಮಠ ಅಲ್ಲ ಎನ್ನುವುದನ್ನು ಆ ಶಾಸನವೇ ಸಾರುತ್ತದೆ. ಶಾಖಾ ಮಠಕ್ಕೆ ಸಿಂಹಾಸನ, ಕಿರೀಟ, ಮಂಡಲಾಚಾರ್ಯತ್ವವನ್ನು ಹೇಗೆ ನೀಡಲಾಗುತ್ತದೆ. ಇದು ಸ್ವತಂತ್ರ ಮಠ ಎನ್ನುವುದನ್ನು ಸೂರ್ಯಸ್ಪಷ್ಟವಾಗಿ ಶಾಸನ ಹೇಳುತ್ತದೆ ಎಂದು ಪ್ರತಿಪಾದಿಸಿದರು.
ಗುರುತತ್ವ- ಪ್ರಭುಶಕ್ತಿಗಳ ಅನುಗ್ರಹದ ಬೆಳಕು ನೀಡುತ್ತಾ ಬಹುಕಾಲದಿಂದ ಬೆಳಗಿದೆ. ಗುರುತತ್ವಗಳಿದ್ದಲ್ಲಿ ಎಲ್ಲ ಅಮಂಗಲಗಳು ದೂರ ಸರಿದು ಮಂಗಲಗಳಾಗಿ ಪರಿಣಮಿಸುತ್ತವೆ. ಅಂತೆಯೇ ಪ್ರಭು ಚರಣ ಕೂಡಾ ಎಲ್ಲ ಆಪತ್ತುಗಳನ್ನು ಬಗೆಹರಿಸಿ ಸರ್ವ ಸಂಪತ್ತನ್ನು, ಆನಂದವನ್ನು ತುಂಬಿಕೊಡುವಂಥದ್ದು ಎಂದು ವಿವರಿಸಿದರು.
ಇದಕ್ಕೂ ಮುನ್ನ ಶೃಂಗೇರಿ ಮಠದ 12ನೇ ಪೀಠಾಧಿಪತಿಗಳಾಗಿದ್ದ ಶ್ರೀ ವಿದ್ಯಾರಣ್ಯ ಶ್ರೀಪಾದಂಗಳವರು, ನಮ್ಮ ಪೂರ್ವಾಚಾರ್ಯರಾದ 10ನೇ ಪೀಠಾಧಿಪತಿಗಳಾದ ಚಿದ್ಭೋಧಭಾರತೀಸ್ವಾಮಿಗಳವರಿಗೆ ನೀಡಿದ್ದ ವೈಭವ ತಾಮ್ರಶಾಸನ ಹಾಗೂ ವಿಜಯ ನಗರದ ಅರಸ ಇಮ್ಮಡಿ ದೇವರಾಯರು ಇದನ್ನು ಸ್ಥಿರೀಕರಿಸಿ ಪ್ರಥಮ ರಾಘವೇಶ್ವರಭಾರತೀಸ್ವಾಮಿಗಳವರಿಗೆ ನೀಡಿದ ವೈಭವತಾಮ್ರಶಾಸನದ ಅನಾವರಣವನ್ನು ಪರಮಪೂಜ್ಯರು ನೆರವೇರಿಸಿದರು.
ಕಾಲ ಸರಣಿಯ ಪ್ರವಚನ ಮುಂದುವರಿಸಿದ ಶ್ರೀಗಳು, ಜ್ಯೋತಿಷ ಎನ್ನುವುದು ಅದ್ಭುತ ವಿಜ್ಞಾನವನ್ನು ನಮ್ಮ ಪೂರ್ವಜರು ಕಂಡುಕೊಂಡಿದ್ದರು. ಉದಾಹರಣೆಗೆ ತಾಂಬೂಲ ಪ್ರಶ್ನದಿಂದ ಕೂಡಾ ಭವಿಷ್ಯ, ವರ್ತಮಾನಗಳನ್ನು ತಿಳಿಯುವ ಅಪೂರ್ವ ಸಾಧನವಾಗಿತ್ತು ಎಂದು ಅಭಿಪ್ರಾಯಪಟ್ಟರು.
ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುಮಾಸ್ಯ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕೋಶಾಧ್ಯಕ್ಷ ಸುಧಾರಕ ಬಡಗಣಿ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ದೈವಜ್ಞರಾದ ಮಧು ಶರ್ಮಾ, ಮಿತ್ತೂರು ಕೇಶವ ಭಟ್, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶ್ರೀಶ ಶಾಸ್ತ್ರಿ, ಅರವಿಂದ ಬಂಗಲಗಲ್ಲು ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post