ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಾಜ್ಯದಲ್ಲಿ ಬಾಣಂತಿಯರು ಸಾಲುಸಾಲಾಗಿ ಸಾವನ್ನಪ್ಪುತ್ತಿದ್ದಾರೆ. ಕಲಬುರ್ಗಿ ಸೇರಿದಂತೆ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ತೊಗರಿ ಬೆಳೆಗಾರರು ಸಂಕಷ್ಟದಲ್ಲಿ ಇದ್ದಾರೆ. ಆದರೆ ಸರ್ಕಾರ ಮಾತ್ರ ಉತ್ಸವ, ಮಹೋತ್ಸವ ನಡೆಸುವುದರಲ್ಲಿ ಕಾಲ ಕಳೆಯುತ್ತಿದೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ #Nikhil Kumaraswamy ಅವರು ಕಟುವಾಗಿ ಟೀಕಿಸಿದರು.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು; ಬಾಣಂತಿಯರ ಸಾವು ತಲೆ ತಗ್ಗಿಸುವ ವಿಚಾರ. ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಸರಣಿ ಸಾವುಗಳು ರಾಜ್ಯದ ಪ್ರತಿಷ್ಠೆಗೆ ಧಕ್ಕೆ ತಂದಿವೆ. ಈ ಬಗ್ಗೆ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬೇಕು ಎಂದು ನಿಖಿಲ್ ಅವರು ಒತ್ತಾಯ ಮಾಡಿದರು.
ಮಹಿಳೆಯರಿಗೆ ಕಾಂಗ್ರೆಸ್ ಕೊಡುಗೆ ಇದೇನಾ?:
ಕಳೆದ ಒಂದು ವರ್ಷದಲ್ಲಿ 327 ಜನ ಬಾಣಂತಿಯರು ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆ. ಅರೋಗ್ಯ ಸಚಿವರು ಮತ್ತು ಈ ಸರ್ಕಾರ ನಿರ್ಲಕ್ಷ ಸರಿಯಲ್ಲ. ಬಾಣಂತಿಯರಿಗೆ ನೀಡುವ ಚಿಕಿತ್ಸೆಯ ಗುಣಮಟ್ಟದ ಬಗ್ಗೆ ಪ್ರಶ್ನೆ ಎದ್ದಿದೆ. ಔಷಧಗಳ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಬಳ್ಳಾರಿ ಜಿಲ್ಲೆ ಒಂದರಲ್ಲಿಯೇ 29 ಜನ ತಾಯಂದಿರು ಸಾವನ್ನಪ್ಪಿದಾರೆ. ಇಷ್ಟಾದರೂ ಸರ್ಕಾರ ಬೇಜವಾಬ್ದಾರಿಯಿಂದ ವರ್ತನೆ ಮಾಡುತ್ತಿದೆ ಎಂದು ನಿಖಿಲ್ ಅವರು ವಾಗ್ದಾಳಿ ನಡೆಸಿದರು.
ನನ್ನ ಕಡೆಯಿಂದ ತಪ್ಪಾಗಿದ್ದರೆ ನಾನು ರಾಜೀನಾಮೆ ಕೊಡುತ್ತೇನೆ ಅರೋಗ್ಯ ಸಚಿವರು ಹೇಳಿಕೆ ಸರಿಯಲ್ಲ. ನೀವು ರಾಜೀನಾಮೆ ನೀಡಿದಾಕ್ಷಣ ಕುಟುಂಬಕ್ಕೆ ಆಗಿರುವ ನೋವುಗಳು ಸರಿ ಹೋಗುತ್ತವೆಯೇ? ಕುಟುಂಬಳಿಗೆ ಆಗಿರುವ ಈ ನಷ್ಟವನ್ನು ಯಾವ ರೀತಿ ಭರಿಸುತ್ತೀರಿ? ರಾಜ್ಯದ ಮುಖ್ಯಮಂತ್ರಿ ವೇದಿಕೆ ಮೇಲೆ ಹೇಳುತ್ತಾರೆ, ಸಾವನ್ನಪ್ಪಿದ ಬಾಣಂತಿಯರಿಗೆ ₹5 ಲಕ್ಷ ಕೊಡುತ್ತೇನೆ ಎಂದು ಎಂದಿದ್ದಾರೆ. ಒಂದು ಜೀವಕ್ಕೆ ₹5 ಲಕ್ಷ ಎಂದು ನಿಗದಿ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಲು ಹೊರಟಿದ್ದಾರೆ. ಒಂದು ಸಾವಿಗೆ ₹5 ಲಕ್ಷ ಬೆಲೆ ನಿಗದಿ ಮಾಡುತ್ತಿದ್ದಾರೆ!! ಇದಕ್ಕಿಂತ ಪೈಶಾಶಿಕತೆ ಮತ್ತೊಂದಿಲ್ಲ. ಸರಕಾರ ಪಾರದರ್ಶಕ ತನಿಖೆ ನಡೆಸಬೇಕು ಎಂದು ಅವರು ಒತ್ತಾಯ ಮಾಡಿದರು.
Also read: ತಂಬಾಕು ಖರೀದಿ ಪ್ರಕ್ರಿಯೆ ಆರಂಭ; ಫಲ ನೀಡಿದ ನಿಖಿಲ್ ಕುಮಾರಸ್ವಾಮಿ ಅವರ ದೆಹಲಿ ಭೇಟಿ
ಮಹಿಳೆಯರಿಗೆ ಗೃಹಲಕ್ಷ್ಮಿ ಗ್ಯಾರಂಟಿ ಮೂಲಕ ₹2000 ಕೊಡುತ್ತಿದ್ದಾರೆ ಸರಿ, ಇಲ್ಲಿ ಎರಡು ಸಾವಿರ ಕೊಟ್ಟು ಅಲ್ಲಿ ಆಸ್ಪತ್ರೆಗಳಲ್ಲಿ ಅದೇ ಗೃಹಲಕ್ಷ್ಮಿಯರ ಜೀವ ತೆಗೆಯಲಾಗುತ್ತಿದೆ. ಮಹಿಳೆಯರ ಸಬಲೀಕರಣ ಮಾಡುತ್ತಿದ್ದೇವೆ ಎಂದರೆ ಇದೇನಾ? ಮಹಿಳೆಯರಿಗೆ ಕೊಡುವ ಗೌರವ ಇದೇನಾ? ಎಂದು ನಿಖಿಲ್ ಅವರು ಕಿಡಿ ಕಾರಿದರು.
ತೊಗರಿ ಬೆಳೆಗಾರರಿಗೆ ನೆರವಾಗಿ:
ಪ್ರಕೃತಿ ವಿಕೋಪ, ಅಕಾಲಿಕ ಮಳೆ ಮತ್ತು ನೆಟ್ಟೆ ರೋಗದಿಂದ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಅವರ ನೆರವಿಗೆ ಬರುತ್ತಿಲ್ಲ. ಈ ಬಗ್ಗೆಯೂ ನಾನು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಬಳಿ ಚರ್ಚಿಸಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.
ಕಲಬುರ್ಗಿ ಜಿಲ್ಲೆ ಒಂದರಲಿಯೇ ಆರು ಲಕ್ಷ ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬೆಳೆ ಪ್ರಕೃತಿ ವಿಕೋಪಕ್ಕೆ ಸಿಲುಕಿ ನಾಶವಾಗಿದೆ. ರೈತರ ಬದುಕು ಸಂಕಷ್ಟದಲ್ಲಿ ಇದೆ. ಕೃಷಿ ಇಲಾಖೆ ಅಧಿಕಾರಿಗಳಿಗೆ ರೈತರು ಸಮಸ್ಯೆ ಹೇಳಿಕೊಂಡರೆ ಯಾವುದೇ ರೀತಿ ಸ್ಪಂದನೆ ಸಿಗುತ್ತಿಲ್ಲ. ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲ, ಅವರಿಗೆ ಸಾಂತ್ವನ ಕೂಡ ಹೇಳಿಲ್ಲ. ನಾವು ನೆರವು ನೀಡುತ್ತೇವೆ ಎಂದು ಧೈರ್ಯ ಕೊಟ್ಟಿಲ್ಲ. ಈ ಸರಕಾರ ರೈತರ ಪರವಾಗಿ ಸಂಪೂರ್ಣ ವಿಪಲವಾಗಿದೆ ಎಂದು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರೈತರು ಸಂಕಷ್ಟದಲ್ಲಿ ಇದ್ದಾರೆ. ಈ ಸರ್ಕಾರ ಯಾವ ರೀತಿ ಕ್ರಮ ಕೈಗೊಂಡಿಲ್ಲ, ರೈತರ ಪರವಾಗಿ ನಿಲ್ಲುವುದಕ್ಕೆ ಈ ಸರ್ಕಾರದ ಬದ್ಧತೆ ಏನು ಎಂಬ ಪ್ರಶ್ನೆ ರಾಜ್ಯದ ಜನತೆಯಲ್ಲಿ ಉದ್ಭವಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















