ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಕಾಫಿ ನಾಡಿನ ಜನರ ಬಹುವರ್ಷಗಳ ಕನಸು ಇಂದು ನನಸಾಗಿದ್ದು, ಚಿಕ್ಕಮಗಳೂರಿನಿಂದ ತಿರುಪತಿಗೆ ನೇರ ಎಕ್ಸ್’ಪ್ರೆಸ್ ರೈಲಿಗೆ ಇಂದು ಅಧಿಕೃತ ಚಾಲನೆ ನೀಡಲಾಯಿತು.
ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು, ಚಿಕ್ಕಮಗಳೂರು-ತಿರುಪತಿ ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದರು.
ಈ ರೈಲು ಕಾಫಿ ನಾಡು ಚಿಕ್ಕಮಗಳೂರು ಹಾಗೂ ಸುತ್ತಮುತ್ತಲಿನ ಭಕ್ತಾದಿಗಳಿಗೆ ತಿರುಪತಿಗೆ ಪ್ರಯಾಣಿಸಲು ಅನುಕೂಲಕರವಾಗಿದೆ.
ಈ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಚಿಕ್ಕಮಗಳೂರಿಗೆ ಮತ್ತು ದೇವನೂರಿಗೆ ಹೆಚ್ಚುವರಿ ರೈಲುಗಳ ನಿಲುಗಡೆಗೆ, ರಸ್ತೆ ಕೆಳಸೇತುವೆ, ಮೇಲ್ಸೇತುವೆಗೆ ಬೇಡಿಕೆ ಇಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸೋಮಣ್ಣ, ಭಾರತೀಯ ರೈಲ್ವೆ ವ್ಯಾಪಕ ಆದುನಿಕರಣಗೊಳ್ಳುತ್ತಿದೆ ಹೆಚ್ಚಿನ ಬಜೆಟ್ ಹಂಚಿಕೆ ಮೂಲಕ ರೈಲು ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದರು.
ಅವರು ದೇಶದಾದ್ಯಂತ ಎಲ್ಲ ಲೆವೆಲ್ ಕ್ರಾಸಿಂಗ್’ಗಳನ್ನು ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ಸಂಪೂರ್ಣವಾಗಿ ತೆಗೆದುಹಾಕುವ ಯೋಜನೆಯಿದೆ ಎಂದಿದ್ದಾರೆ.
ಇನ್ನು, ಬಳ್ಳಾರಿ ಚಿಕ್ಕಜಾಜೂರು ರೈಲು ಮಾರ್ಗಕ್ಕೆ 3342 ಕೋಟಿ ನೀಡಲಾಗಿದೆದ್ದು, ಇನ್ನೂ ಹಲವು ಯೋಜನೆಗಳ ಬಗ್ಗೆ ತಿಳಿಸಿದರು.
ಚಿಕ್ಕಮಗಳೂರು – ಉಡುಪಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಕರ್ನಾಟಕ ವಿಧಾನ ಪರಿಷತ್ತಿನ ಉಪಾಧ್ಯಕ್ಷರಾದ ಎಂ.ಕೆ. ಪ್ರಾಣೇಶ್, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಮಾಜಿ ಶಾಸಕ ಸುರೇಶ್, ಮೈಸೂರು ವಿಭಾಗದ ಎಡಿಆರ್’ಎಂ ವಿನಾಯಕ ನಾಯಕ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















