ಕಲ್ಪ ಮೀಡಿಯಾ ಹೌಸ್ | ರಿಪ್ಪನ್ ಪೇಟೆ |
ಪಟ್ಟಣದ ಸಮೀಪದ ಕೋಟೆತಾರಿಗ ಗ್ರಾಮದಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಪೊಲೀಸರು ಗಂಭೀರವಾಗಿ ಪರಿಶೀಲನೆ ನಡೆಸಿ, ಕೇವಲ ನಾಲ್ಕು ದಿನಗಳೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಪಿಎಸೈ ರಾಜುರೆಡ್ಡಿ ನೇತ್ರತ್ವದ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಗಸ್ಟ್ 2ರಂದು ಕೋಟೆತಾರಿಗ ಗ್ರಾಮದ ದಾನಮ್ಮ ಎಂಬುವವರ ಮನೆಗೆ ಕನ್ನ ಹಾಕಿ ಬೀಗ ಮುರಿದು ನಗದು ಹಾಗೂ ಅಮೂಲ್ಯ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು. ಈ ಕುರಿತು ಕೂಡಲೇ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ಮತ್ತು ಸಿಪಿಐ ಗುರಣ್ಣ ಹೆಬ್ಬಾಳ್ ಅವರ ಮಾರ್ಗದರ್ಶನದಲ್ಲಿ ಪಿಎಸೈ ರಾಜುರೆಡ್ಡಿ ನೇತ್ರತ್ವದಲ್ಲಿ ಪೋಲೀಸರು ತನಿಖೆ ಆರಂಭಿಸಿದರು. ಸ್ಥಳೀಯ ಗುಪ್ತಚರ ಜಾಲದಿಂದ ಪಡೆದ ಖಚಿತ ಮಾಹಿತಿಯ ಮೇರೆಗೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಕಣಬಂದೂರು ಗ್ರಾಮದ ನಿವಾಸಿ ಸಂತೋಷ್ (37) ಎಂಬಾತನು ಈ ಕೃತ್ಯದಲ್ಲಿ ಪಾಲ್ಗೊಂಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಯಿಂದ ನಾಲ್ಕೂವರೆ ಸಾವಿರ ರೂ ನಗದು, ಎಂಟೂವರೆ ಗ್ರಾಂ ಚಿನ್ನಾಭರಣ, ಹತ್ತು ಗ್ರಾಂ ಬೆಳ್ಳಿ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಹೆಡ್ ಕಾನ್ಸ್ಟೆಬಲ್ ರಾಮಚಂದ್ರ, ಅಶೋಕ್, ಕಾನ್ಸ್ಟೆಬಲ್ ಸಂತೋಷ್ ಕೊರವರ, ಉಮೇಶ್ ಹಾಗೂ ಅವಿನಾಶ್ ಪಾಲ್ಗೊಂಡಿದ್ದರು.
ಸಾರ್ವಜನಿಕ ಮೆಚ್ಚುಗೆ: ಈ ಪ್ರಾಮಾಣಿಕ ಕಾರ್ಯಾಚರಣೆ ಹಾಗೂ ವೇಗದ ತನಿಖೆಗಾಗಿ ಪಟ್ಟಣದ ಸಾರ್ವಜನಿಕರು ಪಿಎಸೈ ರಾಜುರೆಡ್ಡಿ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post