ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಸ್ವಭಾಷೆ, ಸ್ವಭೂಷಾ, ಸ್ವದೇಶಿ ಚಿಂತನೆಯ ಮೂಲಕ ನಮ್ಮ ಜೀವನ, ಭಾಷೆ, ಹಬ್ಬ- ಆಚರಣೆಗಳನ್ನು ಶುದ್ಧೀಕರಿಸಿಕೊಂಡು ಶಾಶ್ವತ ಸುಖದತ್ತ ಮುಖ ಮಾಡೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 50ನೇ ದಿನವಾದ ಗುರುವಾರ ಶ್ಯಾಮಸೂರ್ಯ ಮುಳಿಗದ್ದೆ ಕುಟುಂಬದವರಿಂದ ಸರ್ವಸೇವೆ ಸ್ವೀಕರಿಸಿ ಗುರಿಕ್ಕಾರರ ಸಮಾವೇಶದಲ್ಲಿ ಆಶೀರ್ವಚನ ಅನುಗ್ರಹಿಸಿದರು.
ಗುರು- ಗಣಪತಿಯ ಸಾನ್ನಿಧ್ಯ ಜತೆಜತೆಗೆ ಸಿಗುವುದು ಅಪರೂಪ. ಗುರು ನಮ್ಮ ಬದುಕಿಗೆ ದಾರಿ ತೋರಿದರೆ, ಆ ದಾರಿಯಲ್ಲಿ ಯಾವುದೇ ವಿಘ್ನಗಳು ಬಾರದಂತೆ ನಿವಾರಿಸುವವನು ಗಣಪತಿ. ಗುರು- ಗಣಪತಿಯ ಅನುಗ್ರಹದಿಂದ ಎಲ್ಲರ ಬದುಕಿನಲ್ಲಿ ಶಾಶ್ವತ ಸುಖದ ದಾರಿ ತೆರೆದುಕೊಳ್ಳಲಿ ಎಂದು ಆಶಿಸಿದರು.

ದಿನಕ್ಕೊಂದು ಆಂಗ್ಲಪದ ತ್ಯಜಿಸುವ ಅಭಿಯಾನದಲ್ಲಿ ಟಿಕೆಟ್ ಪದ ಕೈಬಿಡುವಂತೆ ಸಲಹೆ ಮಾಡಿದರು. ಪುರಾತನ ಕಾಲದಿಂದಲೂ ಕನ್ನಡದಲ್ಲಿ ಚೀಟಿ ಪದ ವ್ಯಾಪಕ ಬಳಕೆಯಲ್ಲಿತ್ತು. ಇದನ್ನು ಮತ್ತೆ ಚಾಲ್ತಿಗೆ ತರಬೇಕು. ದೇಶವನ್ನು ಕೊಳ್ಳೆಹೊಡೆಯಲು, ದಬ್ಬಾಳಿಕೆ ಮಾಡಲು ಬಂದವರ ಶಬ್ದಗಳನ್ನು ಉಳಿಸಿಕೊಳ್ಳುವುದು ನಮ್ಮ ಸೋಲಿನ ಸಂಕೇತ; ದಾಸ್ಯದ ಸಂಕೇತ. ಭಾಷಾಸಂಕರ ಯಾವ ಭಾಷೆಗೂ ಶೋಭೆಯಲ್ಲ; ಇಂಗ್ಲಿಷ್ ಭಾಷೆಯನ್ನೂ ವಿಕಾರ ಮಾಡಿ ಮಾತನಾಡಬಾರದು. ಇಂಗ್ಲಿಷ್ ಪದಗಳು ಅವರ ಭಾಷೆ ಸೇರಿಕೊಳ್ಳಲಿ; ಕನ್ನಡದಲ್ಲಿ ನಮ್ಮ ಪದಗಳೇ ವಿಜೃಂಭಿಸಲಿ ಎಂದು ಆಶಿಸಿದರು.
ಭಾಷೆಯಂತೆ ನಮ್ಮ ಹಬ್ಬ- ಆಚರಣೆಗಳನ್ನೂ ಶುದ್ಧ ಮಾಡಿಕೊಳ್ಳುವ ಸಂದರ್ಭ ಬಂದಿದೆ. ಭಕ್ತಿ, ಆರಾಧನೆಯ ವಿಷಯವಾದ ಗಣಪತಿಯನ್ನು ಹಾಸ್ಯದ ವಸ್ತುವಾಗಿ ಇಂದು ಬಿಂಬಿಸಲಾಗುತ್ತಿದೆ. ಗಣಪತಿ ಹಬ್ಬದ ಆಚರಣೆಯನ್ನು ನೋಡಿದರೆ ವಿವಿಧ ಭಂಗಿಗಳ ಗಣಪತಿಯನ್ನು ಎಲ್ಲೆಂದರಲ್ಲಿ ಪ್ರತಿಷ್ಠಾಪಿಸಿ ಹಬ್ಬದ ಹೆಸರಿನ ಆಚರಣೆಗಳು ನಡೆಯುತ್ತವೆ. ಆದರೆ ಸಂಸ್ಕøತಿಯ ಹೆಸರಿನಲ್ಲಿ ಇಂಥ ವಿಕೃತ ಸಲ್ಲದು ಎಂದು ವಿಶ್ಲೇಷಿಸಿದರು.

ಗಣಪತಿ ಹಬ್ಬದ ಸಂದರ್ಭದಲ್ಲಿ ಮಹಾಭಾರತ ಬರೆದ ಗಣಪತಿಯ ಅನುಗ್ರಹದೊಂದಿಗೆ ವಿಷ್ಣು ಸಹಸ್ರನಾಮ ಲೇಖನಯಜ್ಞದ ಮೂಲಕ ಗೋಲೋಕ ಪ್ರಕಲ್ಪದಲ್ಲಿ ಪಾಲ್ಗೊಳ್ಳುವ ಸಂಕಲ್ಪ ಕೈಗೊಳ್ಳಿ ಎಂದು ಕರೆ ನೀಡಿದರು.
ಇದು ಮಳೆಗಾಲ ಮಣ್ಣು ಮತ್ತು ನೀರಿನ ಸಮಯ. ಮೃಣ್ಮಯ ಗಣಪತಿಯ ಬಿಂಬ ನಿಮ್ಮ ಮುಂದಿದೆ. ಮಣ್ಣಿನ ಗಣಪ ಮತ್ತೆ ನೀರಿನಲ್ಲಿ ವಿಸರ್ಜನೆಗೊಳ್ಳುತ್ತಾನೆ. ಮೂಲಾಧಾರ ಚಕ್ರದಲ್ಲಿ ಹುಟ್ಟಿ, ಸ್ವಾಧಿಷ್ಟಾನದಲ್ಲಿ ಲೀನವಾಗುವುದು ಗಣಪತಿಯ ವಿಶೇಷ. ಚಾತುರ್ಮಾಸ್ಯ ಗುರು ಮತ್ತು ಗಣಪತಿಯ ಸಂಯೋಗ. ದಾರಿ ತೋರಿಸುವ ಗುರು ಮತ್ತು ವಿಘ್ನನಾಶಕ ಗಣಪತಿ ಸೇರಿರುವ ಅಪೂರ್ವ ಸಂದರ್ಭ ಎಂದು ಬಣ್ಣಿಸಿದರು.

ಶಾಸನತಂತ್ರ ಕಾರ್ಯದರ್ಶಿ ಕೆ.ಪಿ.ಎಡಪ್ಪಾಡಿ, ಚಾತುರ್ಮಾಸ್ಯ ತಂಡದ ಮಂಜುನಾಥ ಸುವರ್ಣದ್ದೆ, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಪದಾಧಿಕಾರಿಗಳಾದ ಈಶ್ವರ ಪ್ರಸಾದ್, ಕೃಷ್ಣಮೂರ್ತಿ ಮಾಡಾವು, ಮಂಗಳೂರು ಮಂಡಲ ಅಧ್ಯಕ್ಷ ಉದಯಶಂಕರ ನೀರ್ಪಾಜೆ, ಕಾರ್ಯದರ್ಶಿ ರಮೇಶ್ ಭಟ್ ಸರವು, ಮುಳ್ಳೇರಿಯಾ ಮಂಡಲ ಕಾರ್ಯದರ್ಶಿ ಕೆರೆಮೂಲೆ ಸುಬ್ರಹ್ಮಣ್ಯ ಭಟ್, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಅರವಿಂದ ಧರ್ಬೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಹೆಗಡೆ, ಎಂಜಿನಿಯರ್ ವಿಷ್ಣು ಬನಾರಿ ಮತ್ತಿತರರು ಉಪಸ್ಥಿತರಿದ್ದರು. ಗುರುಪರಂಪರಾ ಪ್ರೀತ್ಯರ್ಥವಾಗಿ ಹಮ್ಮಿಕೊಂಡಿರುವ ಲಕ್ಷತುಳಸಿ ಅರ್ಚನೆಯ ಏಳನೇ ದಿನ ಗುರುವಾರ ಸಂಪನ್ನಗೊಂಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post