ಕಲ್ಪ ಮೀಡಿಯಾ ಹೌಸ್ | ಶಿರಾಳಕೊಪ್ಪ |
ಕನ್ನಡಿಗರು ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಬರೀ ಭಾಷೆ ಅಲ್ಲ ಅದು ಸಂಸ್ಕೃತಿ. ಎಲ್ಲರೂ ಕನ್ನಡ ಬಾಷಾಭಿಮಾನ ಬೆಳೆಸಿಕೊಳ್ಳಬೇಕು ಮತ್ತು ಜನಪದ ಸಾಹಿತ್ಯವನ್ನು ಉಳಿಸಬೇಕು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ ಮಂಜುನಾಥ ತಿಳಿಸಿದರು.
ಸೇವಾ ವಿಕಾಸ ವಿದ್ಯಾ ಸಂಸ್ಥೆ ಆವರಣದಲ್ಲಿ ನಡೆದ 70ನೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ, ನಾಡ ಗೀತೆ ಗೀತೋತ್ಸವ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಸಿ, ಬೆಳೆಸುವ ಗುರುತರ ಜವಾಬ್ದಾರಿ ಪ್ರತಿ ವಿದ್ಯಾರ್ಥಿ ಮೇಲಿದೆ ,ಕನ್ನಡಭಾಷೆ ಇಂದು ಉಳಿದಿದೆ ಎಂದರೆ ಅದು ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ. ಇಂಗ್ಲಿಷ್, ಹಿಂದಿ ಸೇರಿದಂತೆ ಇತರೇ ಭಾಷೆಗಳ ಪ್ರಭಾವದಿಂದ ನಗರಪ್ರದೇಶದಲ್ಲಿ ಕನ್ನಡಭಾಷೆ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಹಿಂದಿ, ಇಂಗ್ಲಿಷ್ ಭಾಷಾಕಲಿಕೆ ಇಂದು ಅನಿವಾರ್ಯ, ಕನ್ನಡ ಮಾತೃ ಭಾಷೆಯಾಗಿದ್ದು, ಅದನ್ನು ಉಳಿಸಿಬೆಳೆಸುವುದು ಕನ್ನಡಿಗರ ಆದ್ಯ ಕರ್ತವ್ಯವಾಗಿದೆ. ಕನ್ನಡಭಾಷೆಗೆ 8 ಜ್ಞಾನಪೀಠಪ್ರಶಸ್ತಿ ಸಂದಿರುವುದು ಕನ್ನಡಿಗರಿಗೆ ಗೌರವ ತರುವ ವಿಚಾರವಾಗಿದೆ. ವಿದ್ಯಾರ್ಥಿಗಳು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿಗಳ ಅಧ್ಯಯನಕ್ಕೆ ಮುಂದಾಗಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಶಿಕಾರಿಪುರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೆಶಪ್ಪ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಂದು ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕಗಳನ್ನು ಪಡೆದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ್ದು ಸಂತೋಷದ ವಿಚಾರ ಇದು ಮುಂಬರುವ ವಿದ್ಯಾರ್ಥಿಗಳಿಗೆ ತಮ್ಮ ಕನ್ನಡ ಭಾಷೆ ಕಲಿಕೆಯನ್ನು ಹೆಚ್ಚಿಸಲು ಸಹಕಾರಿ ಆಗಿದೆ. ನಾಡು-ನುಡಿ ಸಂಸ್ಕೃತಿಯ ರಕ್ಷಣೆ ಮತ್ತು ವಿಕಾಸಕ್ಕಾಗಿ ಕಂಕಣಬದ್ಧವಾಗಿರುವ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ,ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ. ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹಬ್ಬಿಸಿದೆ. ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ ಸಾ ಪ ಹೋಬಳಿ ಘಟಕದ ಅಧ್ಯಕ್ಷ ಟಿ.ಎಂ . ಮಂಜಣ್ಣ ಮಾತನಾಡಿ, ಹೃದಯ ವೈಶಾಲ್ಯತೆಗೆ ಇನ್ನೊಂದು ಹೆಸರೇ ಕರ್ನಾಟಕ, ಎರಡು ಸಾವಿರ ವರ್ಷ ಇತಿಹಾಸವಿರುವ ಕನ್ನಡ ಭಾಷೆ ಸಂಸ್ಕೃತಿಯ ಪ್ರತೀಕವಾಗಿದೆ, ಛಿದ್ರವಾಗಿದ್ದ ರಾಜ್ಯವನ್ನು ಭಾಷೆಯ ಆಧಾರದಲ್ಲಿ ಪುನರ್ರಚನೆಗೆ ಶರಣರು, ಕವಿಗಳು, ಸಾಹಿತಿಗಳು ದಾರ್ಶನಿಕರು, ಅಭಿಮಾನಿಗಳು ಶ್ರಮಿಸಿದ್ದು ಅವರೆಲ್ಲರೂ ಅಭಿನಂದನಾರ್ಹರು ಎಂದರು. ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕುವೆಂಪುರವರು ರಚಿಸಿದ ನಾಡಗೀತೆಗೆ ನೂರು ವರ್ಷ ಆದ ಪ್ರಯುಕ್ತ 100ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಏಕೆ ಕಾಲಕ್ಕೆ ಗೀತೋತ್ಸವ ಕಾರ್ಯಕ್ರಮ ನಡೆಯಿತು.ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು,ಈ ವರ್ಷ ಶಿವಮೊಗ್ಗ ಜಿಲ್ಲಾ ಉತ್ತಮ ಶಿಕ್ಷಕ ಪುರಸ್ಕೃತರಾದ ಶಿರಾಳಕೊಪ್ಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಶಿಕ್ಷಕರಾದ ಶ್ರೀನಾಗರಾಜಪ್ಪ ಟಿ ದೇವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಕೋಶಾಧ್ಯಕ್ಷ ರಾದ ಚಂದ್ರಶೇಖರ್ ಸೂರಹೊನ್ನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರೀತಿಸಿ ಪುರಸ್ಕಾರ ದಾನಿಗಳಾದ ಶಿವಶಂಕರ್.ಯು.ಎಸ್,ಸೇವಾ ವಿಕಾಸ ಶಾಲೆಯ ಮುಖ್ಯ ಶಿಕ್ಷಕರಾದ ರುದ್ರೇಗೌಡವರವರು , ಕನ್ನಡ ಅಭಿಮಾನಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗೌರಮ್ಮ ಮಂಚಾಲಿ ಪ್ರಾರ್ಥಿಸಿ, ಪ್ರಶಾಂತ ಕುಬಸದ ಸ್ವಾಗತಿಸಿ, ಅಶೋಕ್ ಹಿರೇಮನಿ ವಂದಿಸಿ, ಲತಾ ಯೋಗಿರಾಜ್ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















