ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಯಾವುದೇ ಸಾಧಕನಿಗೆ ಪ್ರಶಸ್ತಿ ಸನ್ಮಾನಗಳೇ ಉಸಿರು ಎಂದು ಕುಮದ್ವತಿ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಡಾ.ವೀರೇಂದ್ರ ಎಂ ಅವರು ಅಭಿಪ್ರಾಯಪಟ್ಟರು.
ಕುಮದ್ವತಿ ಕೇಂದ್ರೀಯ ವಸತಿ ಶಾಲೆಯಲ್ಲಿ ನಡೆದ ಸಾಂಸ್ಕೃತಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಒಬ್ಬ ವ್ಯಕ್ತಿ ತನ್ನ ಯಶಸ್ಸಿಗೆ ದೊರೆತ ಪ್ರಶಸ್ತಿ ಸನ್ಮಾನಗಳು ಆತನ ನಿಜವಾದ ಸಂಪತ್ತು ಹಾಗೂ ಇತರರಿಗೆ ಸಾಧಿಸುವ ಮನೋಭಾವನೆ ತರುವ ಪ್ರೇರೇಪಣೆಯ ಮುಖ್ಯ ಅಂಶಗಳು. ಮಹಾಭಾರತದ ಅರ್ಜುನ, ಏಕಲವ್ಯ, ಇವರ ಗುರಿ ಹಾಗೂ ಕಲಿಕೆಯ ಶ್ರದ್ದೆ ನಮ್ಮ ಇಂದಿನ ಮಕ್ಕಳಿಗೆ ಮಾದರಿಯಾಗಬೇಕು. ಆ ದಿಸೆಯಲ್ಲಿ ಪಠ್ಯ ಕಲಿಕೆ ಜೊತೆಗೆ ಅದರ ಹೊರತಾಗಿ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು ಅಗತ್ಯ ಎಂದರು.
ಇಂದಿನ ಮಕ್ಕಳು ಕ್ರೀಡೆ ಹಾಗೂ ಇತರ ಪಠ್ಯ ಹೊರತಾದ ವಿಷಯಗಳ ಕಲಿಕೆಯಲ್ಲಿ ಆಸಕ್ತಿ ಹೆಚ್ಚು. ಇಂತಹ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ಕುಮದ್ವತಿ ಕೇಂದ್ರೀಯ ವಸತಿ ಶಾಲೆ ಕಲ್ಪಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಶಾಲೆಯ ಪ್ರಾಚಾರ್ಯ ಎಚ್.ಡಿ. ಪ್ರಶಾಂತ್ ಅವರು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು, ಬೋಧಕ -ಬೋಧಕೇತರ ವರ್ಗ, ಕೋ -ಅರ್ಡಿನೇರ್ಟ ಪ್ರಭು ಹಾಗೂ ಎಲ್ಲ ವಿಭಾಗದ ಕೋ -ಆರ್ಡಿ’ನೇಟರ್ಸ್ ಉಪಸ್ಥಿತರಿದ್ದರು.
ದೀಪಿಕಾ ಮತ್ತು ಸಂಗಡಿಗರು ಪ್ರಾರ್ಥಿಸಿ, ಸಹಶಿಕ್ಷಕಿಯರಾದ ಜೆ. ಪೂಜಾ, ಸಿ.ಆರ್. ಅಮೃತ ಪ್ರಶಸ್ತಿ ವಿಜೇತರ ಹೆಸರುಗಳನ್ನು ಹೇಳಿದರು. ಸಹ ಶಿಕ್ಷಕಿಯರಾದ ಎಂ.ಎಂ. ಐಶ್ವರ್ಯ ವಂದಿಸಿ, ಶಿಲ್ಪಾ ನಿರೂಪಿಸಿದರು. ಸಹಶಿಕ್ಷಕರಾದ ಜಿಯಾಹುಲ್ಲಾ ಸ್ವಾಗತಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















