ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ತಾಯಿ ಕಂಡ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸಲು ಸಾಮ್ರಾಜ್ಯವನ್ನೇ ನಿರ್ಮಿಸಿದ ಮಹಾ ಯುಗಪುರುಷ ಶಿವಾಜಿ ಮಹಾರಾಜ್ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಋಗ್ವೇದಿ ಯೂತ್ ಕ್ಲಬ್ ಹಾಗೂ ಜೈ ಹಿಂದ್ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಶಿವಾಜಿ ಮಹಾರಾಜರು ಅತ್ಯಂತ ಧೈರ್ಯಶಾಲಿ ಸಾಹಸ ಪುರುಷರು. ಉತ್ತರ ಭಾರತದ ಮೊಘಲರನ್ನು ಹಾಗೂ ದಕ್ಷಿಣದ ಆದಿಲ್ ಶಾಹಿ ವಂಶಸ್ಥರನ್ನು ಸೆದೆ ಪಡೆದು ಛತ್ರಪತಿ ಬಿರುದು ಮೂಲಕ ಸ್ವರಾಜ್ಯ ಸ್ಥಾಪನೆ ಮಾಡಿ, ಇಡೀ ಜಗತ್ತಿಗೆ ಮಾದರಿಯಾದ ಸ್ವರಾಜ್ಚವನ್ನು ಕಟ್ಟಿದ ಶಿವಾಜಿ ಭಾರತೀಯರ ಹೆಮ್ಮೆಯ ಪುಣ್ಯ ಪುರುಷ. ಶಿವಾಜಿಯವರ ಸೈನ್ಯ ಸಂಘಟನೆ, ಧೈರ್ಯ, ಸಾಹಸ ಇಂದಿನ ಭಾರತೀಯರಲ್ಲಿ ಮೂಡಬೇಕು. ದೇಶಿಯ ಭಾವನೆ ಮೈಗೂಡಿಸಿಕೊಳ್ಳುವ ಮೂಲಕ ಶಿವಾಜಿ ಮಹಾರಾಜರ ಕನಸನ್ನು ನನಸು ಮಾಡಬೇಕು ಎಂದರು.
ಶಿವಾಜಿ ಮಹಾರಾಜರ ಆಡಳಿತ, ಸೈನ್ಯ ವ್ಯವಸ್ಥೆ, ಸ್ತ್ರೀಯರ ರಕ್ಷಣೆ, ಗೋಸ ಸಂಪತ್ತಿನ ರಕ್ಷಣೆ, ಪ್ರಜಾ ಸಂರಕ್ಷಣೆ ಮಾದರಿಯಾದದ್ದು. ಅವರ ಆಡಳಿತದಲ್ಲಿ 300ಕ್ಕೂ ಹೆಚ್ಚು ಕೋಟೆಗಳನ್ನು ನಿರ್ಮಿಸಿದ ಇತಿಹಾಸದ ಅಗ್ರಗಣ್ಯ ನಾಯಕರು. ಭಾರತೀಯ ಸನಾತನ ಧರ್ಮದ ಮೌಲ್ಯವಾದ ಸ್ತ್ರೀಯರ ಗೌರವ, ಸ್ತ್ರೀಯ ಸಂರಕ್ಷಣೆ , ಎಲ್ಲ ಧರ್ಮದ ಸ್ತ್ರೀಯರನ್ನು ಸಮಾನತೆಯಿಂದ ಕಂಡ ಇತಿಹಾಸ ಪುರುಷ ಶಿವಾಜಿ. ಭಾರತೀಯ ನೌಕಾಪಡೆಯನ್ನು ಕಟ್ಟುವ ಮೂಲಕ ನೌಕಾಪಡೆಯ ಪಿತಾಮಹರಾಗಿ ಜಗತ್ತಿಗೆ ಸಾರಿದವರು. ಯುವಕರಿಗೆ ಶಿವಾಜಿ ಮಹಾರಾಜರ ಧೈರ್ಯ, ರಾಷ್ಟ್ರೀಯ ಸಂಕಲ್ಪ, ಗುರು ಹಿರಿಯರ ಸೇವೆ ಮತ್ತು ಭಕ್ತಿ ಗುಣಗಳನ್ನು ಮೈಗೂಡಿಸಿಕೊಂಡಾಗ ಸಮೃದ್ಧವಾದ ಜೀವನ ಬದುಕು ನಮ್ಮದಾಗುತ್ತದೆ. ಯುವಕರಿಗೆ ಮಕ್ಕಳಿಗೆ ಶಿವಾಜಿಯ ಇತಿಹಾಸವನ್ನು ಕಲಿಸುವ ಮತ್ತು ತಿಳಿಸುವ ಕೆಲಸ ವ್ಯಾಪಕವಾಗಿ ಆಗಬೇಕು ಎಂದು ತಿಳಿಸಿದರು.
ಉಪನ್ಯಾಸಕ ಸುರೇಶ್ ದೊಡ್ಡ ಮೋಳೆ ಮಾತನಾಡಿ, ಶಿವಾಜಿ ಮಹಾರಾಜರು ನಮಗೆಲ್ಲರಿಗೂ ಮಾದರಿ. ಕಾರ್ಯ ಶೀಲತೆ, ದೈರ್ಯ, ಸಾಹಸ ,ಮಾತೃಭಕ್ತಿ ಮರೆಯಲಾಗದು. ಗುರುಗಳ ಸಮಗ್ರವಾದ ಮಾರ್ಗದರ್ಶನವಿದ್ದರೆ ಶಿವಾಜಿ ಯಂತಹ ಸಾವಿರಾರು ಯುವಕರು ಮುಂದೆ ಬರುತ್ತಾರೆ. ಉತ್ತಮ ಕೆಲಸಗಳನ್ನು ಒಳ್ಳೆಯ ಭಾವನೆಯಿಂದ ಮಾಡೋಣ ಎಂದರು.
ಋಗ್ವೇದಿ ಯೂತ್ ಕ್ಲಬ್ ಸದಸ್ಯರಾದ ಮನೋಜ್ ,ಸೂರ್ಯ ,ಹರೀಶ್ ಗಣೇಶ್, ಪಾಂಡು, ಚೇತನ್, ಶ್ರಾವ್ಯ ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















