ಕಲ್ಪ ಮೀಡಿಯಾ ಹೌಸ್ | ಸೊರಬ |
ಅಪಾರ ಜನಪದ ಸಂಪತ್ತನ್ನು ಹೊದಿರುವ ಸೊರಬ ತಾಲ್ಲೂಕಿನಲ್ಲಿ ಪುನಃ ಕಲೆಯು ಅನಾವರಣಗೊಳ್ಳುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದು ಕಜಾಪ ತಾಲ್ಲೂಕು ಅಧ್ಯಕ್ಷ ಪ್ರಜ್ವಲ್ ಚಂದ್ರಗುತ್ತಿ ಹೇಳಿದರು.
ತಾಲೂಕು ಚಂದ್ರಗುತ್ತಿ ಹೋಬಳಿ ಗುಂಜನೂರಿನ ಹಿರಿಯ ಬಯಲಾಟ ಕಲಾವಿದರಿಗೆ ಕಜಾಪ ದಿಂದ ಸನ್ಮಾನ ನೀಡಿ ಮಾತನಾಡಿದರು.
ದೂರದರ್ಶನ, ಮೊಬೈಲ್ ಹಾವಳಿಯ ನಡುವೆಯೂ ಸತತ ಐವತ್ತು ಪ್ರದರ್ಶನ ನೀಡಿ ಜನಪದ ಕಲೆಯನ್ನು ಜೀವಂತವಿರಿಸಿದ ಗುಂಜನೂರು ಗ್ರಾಮದ ಕಲಾಭಿಮಾನಿಗಳಿಗೆ ಕರ್ನಾಟಕ ಜನಪದ ಪರಿಷತ್ ಹೃತ್ಪೂರ್ವಕ ನಮನಗಳನ್ನು ಸಲ್ಲಿಸುತ್ತದೆ ಎಂದರು.
ಜನಪದ ಕಲಾವಿದರನ್ನು ಗುರುತಿಸಿ ಗೌರವಿಸುವ ಜೊತೆಗೆ ಮುಂಪೀಳಿಗೆಯವರಿಗೆ ಕಲೆಯ ಸೊಗಡನ್ನು ಪರಿಚಯಿಸುವ ಮೂಲಕ ಹಸ್ತಾಂತರಿಸುವ ಕೆಲಸವನ್ನು ಪರಿಷತ್ ಮಾಡುತ್ತಿದೆ. ಊರಿಂದೂರಿಗೆ ಜನಪದ ನಡಿಗೆಯ ಶೀರ್ಷಿಕೆ ಯಡಿಯಲ್ಲಿ ಕಜಾಪ ತಾಲ್ಲೂಕು ಘಟಕ ಕಾರ್ಯನಿರ್ವಹಿಸುತ್ತಿದ್ದು ಜನಪದ ಕಲೆಯ ಉಳಿವಿಗಾಗಿ ಶ್ರಮಿಸುತ್ತಿದೆ ಎಂದು ಕಜಾಪ ಗೌರವಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ತಿಳಿಸಿದರು.
ಗುಂಜನೂರಿನ ಶ್ರೀ ಶನೇಶ್ವರ ದೇವರ 44 ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಶನೇಶ್ವರ ಯುವಕ ಸಂಘದವರು ಶನೇಶ್ವರನ ಪ್ರಭಾವ ಅರ್ಥಾತ್ ರಾಜಾ ವಿಕ್ರಮನ ಸತ್ವ ಪರೀಕ್ಷೆ ಎಂಬ ಬಯಲಾಟವನ್ನು ಪ್ರದರ್ಶಿಸಿದರು. ಈ ಬಯಲಾಟವು 50 ನೆ ಪ್ರದರ್ಶನವಾಗಿರುವ ಹಿನ್ನೆಲೆಯಲ್ಲಿ ಕಜಾಪ ಸೊರಬ ವತಿಯಿಂದ ಬಯಲಾಟದ 5 ಜನ ಹಿರಿಯ ಕಲಾವಿದರಾದ ಶ್ರಾಮಚಂದ್ರಪ್ಪ ಜಾಣೆ ಭಾಗವತರು, ಶನಿ ದೇವರ ಪಾತ್ರಧಾರಿ ನಾಗಿ ಬಸಪ್ಪ, ಗುರುಗಳಾದ ಸುಭಾಷ್ ಪಾಟೀಲ್, ಸಾರಥಿಯಾಗಿ ಹನುಮಂತಪ್ಪ ಕೆ, ಶೆಟ್ಟಿ ಪಾತ್ರದಲ್ಲಿ ನಾರಾಯಣಪ್ಪ ಎಚ್ ಇವರಿಗೆ ಪರಿಸರ ಸ್ನೇಹಿ ಗಿಡ ನೀಡುವ ಮೂಲಕ ಜಾನಪದೀಯ ಸನ್ಮಾನ ಮಾಡಲಾಯಿತು.
ಕಜಾಪ ಕೋಶಾಧಿಕಾರಿ ಮೋಹನ ಸುರಭಿ, ಸದಸ್ಯ ರಾಘವೇಂದ್ರ ಅಂದವಳ್ಳಿ, ಶಿವಮೂರ್ತಿ ಎಚ್ಚ್ ಕೆ, ಗಿರೀಶ, ಗಂಗಾಧರ್, ಯಂಕಪ್ಪ ಮತ್ತು ಗುಂಜನೂರು ಗ್ರಾಮಸ್ಥರು, ಕಲಾವಿದರು, ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















