ಕಲ್ಪ ಮೀಡಿಯಾ ಹೌಸ್ | ಹಾವೇರಿ |
ಚಾಲಕನ ನಿಯಂತ್ರಣ ತಪ್ಪಿದ ಕೆಎಸ್’ಆರ್’ಟಿಸಿ ಬಸ್ #KSRTCBus ನಿಲ್ದಾಣದ ಪ್ಲಾಟ್’ಫಾರಂಗೆ ನುಗ್ಗಿ ಪ್ರಯಾಣಿಕರ ಮೇಲೆ ಎರಗಿದ ಪರಿಣಾಮ ಎರಡು ವರ್ಷದ ಮಗು ಸಾವನ್ನಪ್ಪಿ, ಮೂವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾವೇರಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಇಂದು ಮುಂಜಾನೆ ಸುಮಾರು 7 ಗಂಟೆ ವೇಳೆಗೆ ದುರ್ಘಟನೆ ನಡೆದಿದ್ದು, ಎರಡು ವರ್ಷದ ಕಂದಮ್ಮ ಬಲಿಯಾಗಿದೆ.
ಬಂಕಾಪುರ ಮೂಲದ ಹಜರತ್ ಅಲಿ (2) ಎಂಬ ಎರಡು ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಬಂಕಾಪುರದ #Bankapura ನಿವಾಸಿಗಳಾದ ವಾಸುದೇವ (44), ಹರ್ಷ (6) ಮತ್ತು ಕಾವ್ಯಾಂಜಲಿ (39) ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಮುಂಜಾನೆ ನಿಲ್ದಾಣದಲ್ಲಿ ಪ್ರಯಾಣಿಕರ ಓಡಾಟ ಹೆಚ್ಚಿತ್ತು. ಸವಣೂರು ಪ್ಲಾಟ್ ಫಾರಂ ಬಳಿ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿದ್ದಾಗ, ಸವಣೂರು ಕಡೆಗೆ ತೆರಳಬೇಕಿದ್ದ ಬಸ್ ಅತಿ ವೇಗವಾಗಿ ನಿಲ್ದಾಣಕ್ಕೆ ಬಂದಿದೆ. ಚಾಲಕನ ಅತಿಯಾದ ವೇಗ ಮತ್ತು ನಿರ್ಲಕ್ಷ್ಯದಿಂದಾಗಿ ಬಸ್ ನಿಯಂತ್ರಣ ತಪ್ಪಿ ನೇರವಾಗಿ ಪ್ಲಾಟ್ ಫಾರಂ ಮೇಲಿದ್ದ ಜನರ ಮೇಲೆ ಹರಿದಿದೆ.
ಅಲ್ಲದೇ, ಹಾವೇರಿಯಿಂದ ಲಕ್ಷ್ಮೇಶ್ವರ #Lakshmeshwara ಹೋಗುವ ನಾನ್ ಸ್ಟಾಪ್ ಕೆಎಸ್’ಆರ್’ಟಿಸಿ ಬಸ್ ಬೇಕರಿಗೆ ನುಗ್ಗಿದೆ.
ಈ ಭೀಕರ ಅಪಘಾತದಲ್ಲಿ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಚಾಲಕನ ಬೇಜವಾಬ್ದಾರಿತನದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















