ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
(SWR) ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್ ಅವರು ಬೆಂಗಳೂರು (Bengaluru) ಬಾಣಸವಾಡಿಯ ಮೆಮು ಶೆಡ್ಗೆ ಭೇಟಿ ನೀಡಿ ರೈಲು ಕಾರ್ಯಾಚರಣೆ ಹಾಗೂ ಮೂಲಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು.
ಬಾಣಸವಾಡಿ ಮೆಮು ಶೆಡ್ನಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಪ್ರತಿದಿನ ನಿರ್ವಹಿಸಲಾಗುತ್ತಿರುವ ಮೆಮು ರೈಲು ಸೇವೆಗಳ ಸಂಖ್ಯೆ, ರೇಕ್ಗಳ ಲಭ್ಯತೆ, ಮೆಮು ರೈಲುಗಳು ಸಂಚರಿಸುವ ಮಾರ್ಗಗಳು ಹಾಗೂ ರೈಲುಗಳಿಗೆ ನೀರು ತುಂಬಿಸುವ ಕೇಂದ್ರಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಶೆಡ್ನ ಸುಗಮ ಕಾರ್ಯನಿರ್ವಹಣೆಗೆ ಅಗತ್ಯವಿರುವ ವಿವಿಧ ಸೌಲಭ್ಯಗಳ ಬಗ್ಗೆಯೂ ಅವರು ಪರಾಮರ್ಶೆ ನಡೆಸಿದರು.
ಸಭೆಯ ಬಳಿಕ ಪ್ರಧಾನ ವ್ಯವಸ್ಥಾಪಕರು ಮೆಮು ಶೆಡ್ನಲ್ಲಿರುವ ಇನ್ಸ್ಪೆಕ್ಷನ್ ಬೇ, ಆಡಳಿತ ಕಚೇರಿ ಕಟ್ಟಡ, ನೀರು ತುಂಬಿಸುವ ಲೈನ್ ಮತ್ತು ಸ್ಟೇಬ್ಲಿಂಗ್ ಲೈನ್ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ಶೆಡ್ನಲ್ಲಿನ ನಿರ್ವಹಣಾ ವ್ಯವಸ್ಥೆ ಹಾಗೂ ರೈಲು ಕಾರ್ಯಾಚರಣೆಗೆ ಸಂಬಂಧಿಸಿದ ಸೌಲಭ್ಯಗಳ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
Also read>> ಹೆಬ್ಬಾವನ್ನು ನುಂಗಿದ್ದ 12 ಅಡಿ ಬೃಹತ್ ಕಾಳಿಂಗ ಸರ್ಪ! ಬೆಳ್ತಂಗಡಿಯಲ್ಲಿ ರೋಚಕ ರಕ್ಷಣೆ ಕಾರ್ಯಾಚರಣೆ
Bengaluru : ಕೆಎಸ್ಆರ್ ಬೆಂಗಳೂರು–ಬಾಣಸವಾಡಿ ಮಾರ್ಗ ಪರಿಶೀಲನೆ
ಇದಕ್ಕೂ ಮುನ್ನ ಪಿ. ಅನಂತ್ ಅವರು ಕೆಎಸ್ಆರ್ ಬೆಂಗಳೂರು, ಬಾಣಸವಾಡಿ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವಿನ ಮಾರ್ಗದಲ್ಲಿ ‘ವಿಂಡೋ ಟ್ರೈಲಿಂಗ್’ ಮೂಲಕ ಪರಿಶೀಲನೆ ನಡೆಸಿದರು.
ಈ ವೇಳೆ ಮಾರ್ಗದಲ್ಲಿನ ವಿವಿಧ ಕಾರ್ಯಾಚರಣೆ ಮತ್ತು ಸುರಕ್ಷತಾ ಮಾನದಂಡಗಳು, ರೈಲ್ವೆ ಮೂಲಸೌಕರ್ಯ ಹಾಗೂ ಪ್ರಯಾಣಿಕರ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು. ರೈಲು ಸಂಚಾರದ ಸುರಕ್ಷತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಪರಿಶೀಲನೆ ಹಾಗೂ ಸಭೆಯ ಸಂದರ್ಭದಲ್ಲಿ ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್ಪುರಿಯಾ, ಹಿರಿಯ ವಿಭಾಗೀಯ ವಿದ್ಯುತ್ ಎಂಜಿನಿಯರ್ ಅಮನ್ ಕಟಿಯಾಲ್ ಸೇರಿದಂತೆ ರೈಲ್ವೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









