ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ನೀರಿನ ಶುದ್ಧತೆ (Water Purity) ಮತ್ತು ಸಂರಕ್ಷಣೆಗೆ ನಮ್ಮ ಧರ್ಮಶಾಸ್ತ್ರಗಳಲ್ಲಿ ವಿಶೇಷ ಮಹತ್ವ ನೀಡಲಾಗಿದೆ. ನೀರಿಗೆ ಉಗುಳಬಾರದು, ಜಲಮೂಲಗಳನ್ನು ಮಲಿನಗೊಳಿಸಬಾರದು ಎಂಬ ಸ್ಪಷ್ಟ ಸೂಚನೆಗಳು ಶಾಸ್ತ್ರಗಳಲ್ಲಿ ದೊರೆಯುತ್ತವೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಗೋಕರ್ಣದಲ್ಲಿ (Gokarna) ಎಂದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ನೀರಿನ ಮಹತ್ವದ ಕುರಿತು ಪ್ರವಚನ ನೀಡಿದ ಶ್ರೀಗಳು, ಪ್ರಾಚೀನ ಭಾರತೀಯ ಜೀವನ ಪದ್ಧತಿಯಲ್ಲಿ ನೀರಿಗೆ ನೀಡಲಾಗಿದ್ದ ಮಹತ್ವವನ್ನು ವಿವರಿಸಿದರು.
ಗಂಗೆಯಲ್ಲಿ ಆಚಮನ ಮಾಡಬಾರದು ಎಂಬ ನಿಯಮವೂ ಇದೆ. ನೀರನ್ನು ಮಲಿನಗೊಳಿಸುವವರಿಗೆ ನರಕದ ಉಲ್ಲೇಖ ಮಾಡಿರುವುದು ಜಲಮೂಲಗಳ ಪಾವಿತ್ರ್ಯವನ್ನು ನಮ್ಮ ಪೂರ್ವಜರು ಎಷ್ಟರ ಮಟ್ಟಿಗೆ ಗೌರವಿಸುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಜೀವನದಲ್ಲಿ ಸುಲಭದ ದಾರಿ ಹುಡುಕಬಾರದು; ಸರಿಯಾದ ದಾರಿಯನ್ನೇ ಆರಿಸಿಕೊಳ್ಳಬೇಕು
ಜೀವನದಲ್ಲಿ ನಾವು ಸುಲಭವಾದ ದಾರಿಯನ್ನು ಹುಡುಕುವ ಬದಲು ಸರಿಯಾದ ದಾರಿಯನ್ನು ಆಯ್ಕೆ ಮಾಡಬೇಕು. ಶಾಸ್ತ್ರಗಳು ಬೋಧಿಸಿರುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸಬೇಕು. ಪ್ರಯತ್ನಪೂರ್ವಕವಾಗಿ ನಮ್ಮ ಜೀವನ ಪದ್ಧತಿಗಳನ್ನು ಸರಿಪಡಿಸಿಕೊಂಡು, ಧರ್ಮ ಮತ್ತು ಪರಂಪರೆ ತೋರಿಸಿರುವ ಉತ್ತಮ ಮಾರ್ಗದಲ್ಲಿ ಸಾಗಬೇಕು ಎಂದು ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಂದೇಶ ನೀಡಿದರು.
ನೀರನ್ನು ಮಲಿನಗೊಳಿಸದಿರುವುದು ಧರ್ಮದ ಭಾಗ
ರಾಮಾಯಣದಲ್ಲಿ ಭರತನು ಶ್ರೀರಾಮನಿಗೆ ತನ್ನ ನಿಷ್ಠೆಯನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ, ತಾನು ರಾಮನಿಗೆ ವಂಚನೆ ಮಾಡಿದ್ದರೆ ನೀರನ್ನು ಮಲಿನಗೊಳಿಸಿದವರಿಗೆ ದೊರೆಯುವ ನರಕವೇ ತನಗೂ ದೊರೆಯಲಿ ಎಂದು ಶಪಥ ಮಾಡುತ್ತಾನೆ. ಈ ಪ್ರಸಂಗವು ಪ್ರಾಚೀನ ಕಾಲದಲ್ಲಿ ಜಲಮೂಲಗಳ ಪಾವಿತ್ರ್ಯಕ್ಕೆ ನೀಡಲಾಗಿದ್ದ ಗೌರವವನ್ನು ಸ್ಪಷ್ಟಪಡಿಸುತ್ತದೆ ಎಂದು ಶ್ರೀಗಳು ಹೇಳಿದರು.
ನೀರು ಕೇವಲ ದಾಹ ನೀಗಿಸುವ ವಸ್ತುವಲ್ಲ. ಅದು ಜೀವಜಗತ್ತಿನ ಅಸ್ತಿತ್ವಕ್ಕೆ ಆಧಾರವಾಗಿದ್ದು, ಅದರ ಶುದ್ಧತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಧರ್ಮಶಾಸ್ತ್ರಗಳು ಜಲ ಸಂರಕ್ಷಣೆ ಹಾಗೂ ಜಲಮೂಲಗಳ ಪಾವಿತ್ರ್ಯಕ್ಕೆ ಒತ್ತು ನೀಡಿದ್ದರೂ, ಆ ಜೀವನ ಪದ್ಧತಿಗಳನ್ನು ನಾವು ಕ್ರಮೇಣ ಕೈಬಿಟ್ಟಿರುವುದರಿಂದ ಇಂದು ದೇಶದ ಜಲಮೂಲಗಳ ಪರಿಸ್ಥಿತಿ ದುಃಸ್ಥಿತಿಗೆ ತಲುಪಿದೆ ಎಂದು ಅವರು ವಿಷಾದಿಸಿದರು.
Gokarna : ಸುವಸ್ತುಗಳ ಸಂರಕ್ಷಣೆಯ ಅಗತ್ಯ
ಆಯುರ್ವೇದದಲ್ಲಿ ಚಂದ್ರಕಾಂತ ಮಣಿಯ ನೀರು ಬಳಕೆಗೆ ಉತ್ತಮವೆಂದು ಉಲ್ಲೇಖಿಸಲಾಗಿದೆ. ಆದರೆ ಇಂದು ಚಂದ್ರಕಾಂತ ಮಣಿಯೇ ಅಪರೂಪವಾಗುತ್ತಿದೆ. ನಮ್ಮ ಪಾರಂಪರಿಕ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಅನೇಕ ಸುವಸ್ತುಗಳು ಬಳಕೆಯಿಂದ ದೂರವಾಗಿರುವ ಕಾರಣ ಕ್ರಮೇಣ ಕಣ್ಮರೆಯಾಗುತ್ತಿವೆ ಎಂದು ಶ್ರೀಗಳು ಹೇಳಿದರು.
“ಸುವಸ್ತುಗಳನ್ನು ನಾವು ಬಳಸದೇ ಇದ್ದರೆ ಅವು ಕಣ್ಮರೆಯಾಗುತ್ತವೆ” ಎಂಬುದು ಪರಂಪರೆಯ ಅನುಭವ. ಹೀಗಾಗಿ ಪಾರಂಪರಿಕ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಅನೇಕ ವಸ್ತುಗಳು ಇಂದು ನಮಗೆ ಸುಲಭವಾಗಿ ಲಭ್ಯವಾಗುತ್ತಿಲ್ಲ. ಮತ್ತೊಂದೆಡೆ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲೆ ನಡೆಯುತ್ತಿರುವ ಅತಿಕ್ರಮಣಗಳಿಂದ ಕೆಲವು ಸುವಸ್ತುಗಳನ್ನು ನಾವೇ ನಾಶಪಡಿಸುತ್ತಿದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
Also read>> ಮರಳಹಳ್ಳಿ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ; 3 MEMU ರೈಲುಗಳಿಗೆ 3 ತಿಂಗಳ ನಿಲುಗಡೆ
ಋತುಗಳಿಗೂ ನೀರಿನ ಗುಣಕ್ಕೂ ಸಂಬಂಧ
ಆಯುರ್ವೇದದಲ್ಲಿ ವಿವಿಧ ಋತುಗಳಿಗೆ ಅನುಗುಣವಾಗಿ ನೀರಿನ ಗುಣ ಹಾಗೂ ಅದರ ಪರಿಣಾಮಗಳನ್ನು ವಿವರಿಸಲಾಗಿದೆ. ಹೇಮಂತ ಋತುವಿನ ನೀರು ದೇಹಕ್ಕೆ ಬಲ ನೀಡಿದರೂ ಜೀರ್ಣಕ್ರಿಯೆಗೆ ಕಷ್ಟಕರವಾಗಿರುತ್ತದೆ. ಶಿಶಿರ ಋತುವಿನ ನೀರು ಸ್ವಲ್ಪ ಲಘುವಾಗಿದ್ದು, ಕಫ ಮತ್ತು ವಾತ ದೋಷಗಳನ್ನು ಕಡಿಮೆ ಮಾಡುತ್ತದೆ. ವಸಂತ ಋತುವಿನ ನೀರು ಸ್ವಲ್ಪ ಸಿಹಿ ಮತ್ತು ಸ್ವಲ್ಪ ಒಗರು ಗುಣ ಹೊಂದಿದ್ದು, ಗ್ರೀಷ್ಮ ಋತುವಿನ ನೀರು ಉತ್ತಮವೆಂದು ಆಯುರ್ವೇದ ತಿಳಿಸುತ್ತದೆ ಎಂದು ಶ್ರೀಗಳು ವಿವರಿಸಿದರು.
ಹಾರೀತ ಸಂಹಿತೆಯಲ್ಲಿ ನೀರನ್ನು ಪಾಪೋದಕ, ರೋಗೋದಕ, ಅಂಶೋದಕ ಮತ್ತು ಆರೋಗ್ಯೋದಕ ಎಂಬ ನಾಲ್ಕು ವಿಧಗಳಾಗಿ ವರ್ಗೀಕರಿಸಲಾಗಿದೆ. ಪಾತ್ರೆಯಲ್ಲಿರುವ ನೀರನ್ನು ಕಾಲು ಭಾಗದಷ್ಟು ಉಳಿಯುವಂತೆ ಕುದಿಸಿದಾಗ ದೊರೆಯುವ ನೀರನ್ನು ಆರೋಗ್ಯೋದಕ ಎಂದು ಪರಿಗಣಿಸಲಾಗುತ್ತದೆ. ಇದು ವಾತದೋಷ ನಿವಾರಣೆಗೆ ಸಹಕಾರಿ, ಹಲವು ರೋಗಗಳನ್ನು ದೂರಮಾಡುವುದರ ಜೊತೆಗೆ ಜೀರ್ಣಾಗ್ನಿಯನ್ನು ಪ್ರಜ್ವಲಿಸಲು ಸಹಕಾರಿಯಾಗುತ್ತದೆ ಎಂದು ಶ್ರೀಗಳು ತಿಳಿಸಿದರು.
ಸರಿಯಾದ ಜೀವನ ಪದ್ಧತಿ ಅಳವಡಿಸಿಕೊಳ್ಳಬೇಕು
ಧರ್ಮಶಾಸ್ತ್ರಗಳು ಕೇವಲ ಧಾರ್ಮಿಕ ಆಚರಣೆಗಳ ಬಗ್ಗೆ ಮಾತ್ರ ಮಾತನಾಡುವುದಿಲ್ಲ. ಆರೋಗ್ಯ, ಪರಿಸರ, ಆಹಾರ, ನೀರು ಮತ್ತು ಜೀವನ ಪದ್ಧತಿಯ ಕುರಿತಾಗಿಯೂ ಸಮಗ್ರ ಮಾರ್ಗದರ್ಶನ ನೀಡುತ್ತವೆ. ಹೀಗಾಗಿ ಶಾಸ್ತ್ರಗಳು ಬೋಧಿಸಿರುವ ಉತ್ತಮ ಜೀವನ ಕ್ರಮಗಳನ್ನು ಆಧುನಿಕ ಜೀವನದಲ್ಲಿಯೂ ಸಾಧ್ಯವಾದಷ್ಟು ಅಳವಡಿಸಿಕೊಳ್ಳಬೇಕು ಎಂದು ಶ್ರೀಗಳು ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ದಂಪತಿಗಳು, ಉದ್ಯಮಿ ಆನಂದ್, ಹೈದರಾಬಾದ್ನ ರಾಘವಲು, ಧಾರವಾಡದ ಸಿದ್ಧ ಸಮಾಧಿ ಯೋಗ ಸಮಾಜದ ಸದಸ್ಯರು ಶ್ರೀಗಳ ಆಶೀರ್ವಾದ ಪಡೆದರು. ಶೇಷಗಿರಿ ಹೆಬ್ಬಾರ್ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ದಿನಪ್ರಧಾನರಾಗಿ ಗುರುಪ್ರಕಾಶ ಹೆಗಡೆ ಕೂಜಳ್ಳಿ ದಂಪತಿಗಳು ಉಪಸ್ಥಿತರಿದ್ದರು.
ಸಿದ್ಧಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ
ಶ್ರೀರಾಮಚಂದ್ರಾಪುರ ಮಠದೊಂದಿಗೆ ಪಾರಂಪರಿಕವಾಗಿ ನಂಟು ಹೊಂದಿರುವ ಸಿದ್ಧಿ ಸಮಾಜದ ವತಿಯಿಂದ ಸ್ವರ್ಣಪಾದುಕಾ ಪೂಜೆ ನೆರವೇರಿಸಲಾಯಿತು. ಪಾದುಕಾ ಪೂಜೆಯನ್ನು ಸ್ವೀಕರಿಸಿದ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಸಿದ್ಧಿ ಸಮಾಜದೊಂದಿಗೆ ಶ್ರೀಮಠ ಸದಾ ಇರಲಿದೆ ಎಂದು ಭರವಸೆ ನೀಡಿದರು.
ಗುರುಪರಂಪರೆಯ ಅನುಗ್ರಹದಿಂದ ಸಮಾಜದ ಕಷ್ಟಗಳು ದೂರವಾಗಿ, ಎಲ್ಲರ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಶ್ರೀಗಳು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಶಿವಾನಂದ ಸಿದ್ದಿ, ನರಸಿಂಹ ಸಿದ್ದಿ, ಕೃಷ್ಣ ಸಿದ್ದಿ, ನಾರಾಯಣ ಸಿದ್ದಿ ಸೇರಿದಂತೆ ಸಮಾಜದ ಪ್ರಮುಖರು ಹಾಗೂ ಗುರುಬಂಧುಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







