ಶ್ರೀನಗರ: ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ನೇತೃತ್ವದ ಉನ್ನತ ಮಟ್ಟದ ನಿಯೋಗ ಇಂದು ಶ್ರೀನಗರಕ್ಕೆ ಭೇಟಿ ನೀಡಿದ ಬೆನ್ನಲ್ಲೇ, ಕಣಿವೆ ರಾಜ್ಯದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ.
ಕುಪ್ವಾರ ಪ್ರದೇಶದಲ್ಲಿರುವ ಕೆರನ್ ಸೆಕ್ಟರ್ ಬಳಿಯಿರುವ ಸೇನಾ ನೆಲೆಯ ಮೇಲೆ ಇಂದು ಉಗ್ರರು ದಾಳಿ ನಡೆಸಿದ್ದು, ಉಗ್ರರ ವಿರುದ್ಧ ಸೇನೆ ಕಾರ್ಯಾಚರಣೆ ನಡೆಸಿದೆ.
ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಯೋಧರಿಗೆ ತೀವ್ರತರವಾದ ಗಾಯಗಳಾಗಿದ್ದು, ಪಾಕಿಸ್ಥಾನ ಬಾರ್ಡರ್ ಆಕ್ಷನ್ ಟೀಂ ಈ ದಾಳಿಯನ್ನು ನಡೆಸಿದೆ ಎನ್ನಲಾಗಿದೆ.
ಇನ್ನು, ಅಮರನಾಥ ಯಾತ್ರೆ ಹಾಗೂ ರಂಜಾನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಯ ಕುರಿತಾಗಿ ರಾಜನಾಥ ಸಿಂಗ್ ಮಹತ್ವದ ಸಭೆ ನಡೆಸಲಿದ್ದಾರೆ. ಅಲ್ಲಿನ ರಾಜ್ಯಪಾಲ ಎನ್.ಎನ್. ವೊಹ್ರಾ, ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಗೃಹ ಇಲಾಖೆಯ ಉನ್ನತಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಜ್ಯದಲ್ಲಿ ಉಗ್ರರ ದಾಳಿ, ಪ್ರತ್ಯೇಕತಾವಾದಿಗಳ ಅಶಾಂತಿಯುತ ಹೋರಾಟ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಅತ್ಯಂತ ಪ್ರಮುಖವಾಗಿ ಜೂನ್ 28ರಿಂದ ಆರಂಭವಾಗುವ ಪವಿತ್ರ ಅಮರನಾಥ ಯಾತ್ರೆ ಕುರಿತಾಗಿ ಮಾತುಕತೆ ನಡೆಸಲಿದ್ದು, ಯಾತ್ರಿಕರ ಭದ್ರತೆಗಾಗಿ ಕೈಗೊಂಡ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ಚರ್ಚಿಸಲಿದ್ದಾರೆ.
Discussion about this post